Tirupati: ಭಾನುವಾರ ತಿರುಮಲದಲ್ಲಿ ಹೆಚ್ಚಾದ ಭಕ್ತಾದಿಗಳ ನೂಕುನುಗ್ಗಲು, ಇಂದು ಕಾರ್ತಿಕ ದೀಪೋತ್ಸವ
ತಿರುಪತಿ ನವೆಂಬರ್ 20: ತಿರುಪತಿ ಕಾರ್ತಿಕ ದೀಪೋತ್ಸವಕ್ಕೆ ಸಜ್ಜಾಗಿದೆ. ತಿರುಪತಿಯ ಟಿಟಿಡಿ ಆಡಳಿತ ಭವನದ ಪರೇಡ್ ಮೈದಾನದಲ್ಲಿ ಕಾರ್ತಿಕ ದೀಪೋತ್ಸವವನ್ನು ಸೋಮವಾರ ಆಚರಿಸಲಾಗುತ್ತಿದೆ. ಇದೇ ರೀತಿಯ ಕಾರ್ಯಕ್ರಮಗಳನ್ನು ನವೆಂಬರ್ 27 ರಂದು ಕರ್ನೂಲ್ ಮತ್ತು ಡಿಸೆಂಬರ್ 11 ರಂದು ವಿಶಾಖಪಟ್ಟಣದಲ್ಲಿ ನಡೆಸಲು ಟಿಟಿಡಿ ಉದ್ದೇಶಿಸಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ (ಆರೋಗ್ಯ ಮತ್ತು ಶಿಕ್ಷಣ) ಸದಾ ಭಾರ್ಗವಿ, ''ಸರ್ವ ಧಾರ್ವಿುಕ ಯೋಜನೆಗಳ ಅಂಗವಾಗಿ 2021ರಿಂದ ಕಾರ್ತಿಕ ಮಾಸದಲ್ಲಿ ಈ ಶುಭ ಕಾರ್ಯಕ್ರಮವನ್ನು ಟಿಟಿಡಿ ನಡೆಸುತ್ತಿದೆ.

ಟಿಟಿಡಿ ಪರೇಡ್ ಮೈದಾನದಲ್ಲಿ ಇಂದು ಸಂಜೆ 6ರಿಂದ 8ರವರೆಗೆ ನಡೆಯಲಿರುವ ಕಾರ್ತಿಕ ದೀಪೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಭಕ್ತರ ಅನುಕೂಲಕ್ಕಾಗಿ ಎಸ್ ವಿಬಿಸಿ ವಾಹಿನಿಯಲ್ಲಿ ದೀಪಗಳ ಪೂರ್ಣಾಹುತಿ ನೇರಪ್ರಸಾರವಾಗಲಿದ್ದು, 2 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ "ಎಂದು ಜೆಇಒ ತಿಳಿಸಿದ್ದಾರೆ.
ಮಹೋತ್ಸವದ ಅಂಗವಾಗಿ ವೈದಿಕ ತಜ್ಞರು ಯತಿ ವಂದನೆ, ವೇದ ಸ್ವಸ್ತಿ, ದೀಪಾಲಂಕಾರ ಸೇವೆಯ ಅರ್ಥವನ್ನು ಚರ್ಚಿಸುವರು. ಜೊತೆಗೆ ವಿಶ್ವಕ್ಸೇನ ಪೂಜೆ, ಪುಣ್ಯವಚನ, ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, ಶ್ರೀ ಮಹಾಲಕ್ಷ್ಮೀ ಪೂಜೆ ನಂತರ ಎಸ್.ವಿ.ಸಂಗೀತ ಮತ್ತು ನೃತ್ಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ಹರಿಹರ ನೃತ್ಯ ಕಾರ್ಯಕ್ರಮ ನಡೆಯಲಿದೆ. ಲಕ್ಷ್ಮೀ ನಿರಂಜನಂ, ಅನ್ನಮಾಚಾರ್ಯ ಯೋಜನಾ ಕಲಾವಿದರಿಂದ ಗೋವಿಂದ ನಾಮ ಪಾರಾಯಣ, ಮಂಗಳಾರತಿ, ನೈವೇದ್ಯಂ, ನಕ್ಷತ್ರ ಆರತಿ, ಕುಂಭ ಆರತಿ ಕಾರ್ಯಕ್ರಮವೂ ನಡೆಯಲಿದೆ.

ಭಾನುವಾರ ತಿರುಮಲದಲ್ಲಿ ಹೆಚ್ಚಾದ ಭಕ್ತಾದಿಗಳ ನೂಕುನುಗ್ಗಲು
ಭಾನುವಾರ ತಿರುಮಲದಲ್ಲಿ ಹೆಚ್ಚಾದ ಭಕ್ತಾದಿಗಳ ನೂಕುನುಗ್ಗಲು ಕಂಡುಬಂದಿದೆ. ಸರ್ವದರ್ಶನಕ್ಕೆ 24 ಗಂಟೆ ಹಾಗೂ ವಿಶೇಷ ದರ್ಶನಕ್ಕೆ ಐದು ಗಂಟೆ ಬೇಕಾಯಿತು ಎಂದು ತಿಳಿದುಬಂದಿದೆ. ಶನಿವಾರ ಒಟ್ಟು 70,686 ಭಕ್ತರು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅವರಲ್ಲಿ 34,563 ಮಂದಿ ಮುಡಿಯನ್ನು ಅರ್ಪಿಸಿದ್ದಾರೆ. ಹುಂಡಿ ಮೂಲಕ ಬಂದ ಆದಾಯ 3.02 ಕೋಟಿ ರೂಪಾಯಿ ಅಗಿದೆ.
ತಿರುಮಲ ತಿರುಪತಿ ದೇವಸ್ಥಾನವು ಫೆಬ್ರುವರಿ ತಿಂಗಳಿನ ಶ್ರೀವಾರಿ ಆರ್ಜಿತ ಸೇವೆಯ (ಕಲ್ಯಾಣಂ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ, ಸಹಸ್ರದೀಪಾಲಂಕಾರಣ) ಟಿಕೆಟ್ಗಳನ್ನು ಇದೇ ತಿಂಗಳ 21 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ ಮತ್ತು ನಂತರ ಇದೇ 21 ರಂದು ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಆರ್ಜಿತ (ಕಲ್ಯಾಣೋತ್ಸವ) ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತದೆ.












Click it and Unblock the Notifications