ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಹುಲಿ ದಾಳಿಗೆ ಪ್ರಾಣ ಕಳೆದುಕೊಂಡ ಮೃಗಾಲಯ ಪರಿಚಾರಕ
ಇಟಾನಗರ, ಮೇ 19: ಅರುಣಾಚಲ ಪ್ರದೇಶದ ಇಟಾನಗರದಲ್ಲಿರುವ ಜೈವಿಕ ಉದ್ಯಾನವನದಲ್ಲಿ ದಾರುಣ ಘಟನೆಯೊಂದು ನಡೆದಿದೆ. 35ರ ಹರೆಯದ ಮೃಗಾಲಯ ಪರಿಚಾರಕರೊಬ್ಬರ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಮೃಗಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಸ್ಸಾಂನ ಲಖಿಂಪುರ್ ಜಿಲ್ಲೆಯ ಧೆಕಿಯಾಜುಲಿಯ ಪೌಲಾಶ್ ಕರ್ಮಾಕರ್ ಎಂಬ ವ್ಯಕ್ತಿ ಈ ರೀತಿ ಪ್ರಾಣವನ್ನು ಕಳೆದುಕೊಂಡ ದುರ್ದೈವಿಯಾಗಿದ್ದಾರೆ. ಮಂಗಳವಾರ ಮೃಗಾಲಯದ ಬೋನಿನಲ್ಲಿರುವ ನೀರಿನ ಕೊಳವನ್ನು ಸ್ವಚ್ಛಗೊಳಿಸಲು ಹೋಗಿದ್ದಾಗ ಘಟನೆ ನಡೆದಿದೆ ಎಂದು ಮೃಗಾಲಯದ ನಿರ್ವಾಹಕ ರಾಯ ಫ್ಲಾಗೋ ತಿಳಿಸಿದ್ದಾರೆ.
"ಮಂಗಳವಾರ ಮಧ್ಯಾಹ್ನ 2:30ಕ್ಕೆ ಈ ಘಟನೆ ನಡೆದಿದೆ. ಇನ್ನೋರ್ವ ಮೃಗಾಲಯದ ಪರಿಚಾರಕ ನನಗೆ ಈ ಬಗ್ಗೆ ಮಾಹಿತಿಯನ್ನು ನೀಡಿದರು. ವೈದ್ಯರ ಜೊತೆಗೆ ನಾನು ಸ್ಥಳಕ್ಕೆ ತೆರಳಿದ್ದಾಗ ಕರ್ಮಾಕರ್ ಅದಾಗಲೇ ಮೃತಪಟ್ಟಿದ್ದರು. ಮುಖದಲ್ಲಿ ಗಂಭೀರ ಗಾಯಗಳಾಗಿ ರಕ್ತಸಿಕ್ತವಾಗಿತ್ತು" ಎಂದು ಫ್ಲಾಗೋ ತಿಳಿಸಿದ್ದಾರೆ.

"ಪಂಜರಕ್ಕೆ ಪ್ರವೇಶಿಸುವ ಮೂರು ಬಾಗಿಲುಗಳು ಕೂಡ ತೆರೆದಿತ್ತು. ಈ ದುರ್ಘಟನೆಗೆ ಇದೇ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ" ಎಂದು ಫ್ಲಾಗೋ ಹೇಳಿದ್ದಾರೆ.
ಇಟಾನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಕಂದಮ್ ಸಿಕೋಮ್ ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ. "ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ಸಂಗತೊಗಳು ದೊರೆತಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇದು ನಿರ್ಲಕ್ಷ್ಯದಿಂದ ನಡೆದ ಘಟನೆಯೆಂಬುದು ತಿಳಿದುಬಂದಿದೆ. ಪೋಸ್ಟ್ ಮಾರ್ಟಂ ಪ್ರಕ್ರಿಯೆ ಮುಗಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ" ಎಂದು ಕಂದಮ್ ಸಿಕೋಮ್ ತಿಳಿಸಿದ್ದಾರೆ.












Click it and Unblock the Notifications