ಬಿಹಾರ: ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣ: 3 ಬಾಲಕರ ಬಂಧನ
ಪಾಟ್ನಾ, ಜನವರಿ 06: ಬಿಹಾರದಲ್ಲಿ ಇತ್ತೀಚೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣದಲ್ಲಿ ಕಿಶನ್ಗಂಜ್ನಲ್ಲಿ ಮೂವರು ಬಾಲಕರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 30 ರಂದು ದೇಶದ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಜನವರಿ 3ರಂದು ಡಾರ್ಜಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶ ಬಳಿ ವಂದೇ ಭಾರತ್ ಎಕ್ಸಪ್ರೆಸ್ ಬೋಗಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇದರಿಂದ ಓರ್ವ ಪ್ರಯಾಣಿಕರ ಮುಖಕ್ಕೆ ಗಾಯವಾಗಿತ್ತು ಎಂದು ತಿಳಿದು ಬಂದಿದೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ನಾಲ್ವರು ಬಾಲಕರನ್ನು ಗುರುತಿಸಿದ್ದರು. ಅದರಲ್ಲಿ ಮೂವರನ್ನು ಗುರುವಾರ ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ.
ಹಳೆ ರೈಲಿಗೆ ಹೊಸ ಇಂಜಿನ್ ಅಳವಡಿಕೆ: ದಿದಿ
ಇತ್ತೀಚೆಗೆ ಉದ್ಘಾಟನೆಯಾದ ಹೌರಾ-ನ್ಯೂ ಜಲಪೈಗುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಎರಡು ಬಾರಿ ಕಲ್ಲು ತೂರಾಟ ನಡೆದಿರುವುದು ಬಿಹಾರದಲ್ಲಿ ಹೊರತು ಬಂಗಾಳದಲ್ಲಿ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದರು. ಬಂಗಾಳದಲ್ಲಿ ಕಲ್ಲು ತೂರಾಟ ನಡೆದಿರುವುದಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿವೆ. ಇದರಿಂದ ರಾಜ್ಯದ ಮರ್ಯಾದೆ ಹಾನಿಯಾಗಿದ್ದು, ಅಂತಹ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ವಂದೇ ಭಾರತ್ ರೈಲು ಯಾವುದೇ ವಿಶೇಷ ರೈಲು ಅಲ್ಲ, ಅದು ಹಳೆ ರೈಲಿಗೆ ಹೊಸ ಇಂಜಿನ್ ಅಳವಡಿಸಿರುವುದಷ್ಟೆ ಎಂದು ಕೇಂದ್ರದ ಯೋಜನೆ ಬಗ್ಗೆ ಟೀಕಿಸಿದ್ದರು.
ಕಿಡಿಗೇಡಿ ಯುವಕರು ವಂದೇ ಭಾರತ್ ಎಕ್ಸಪ್ರೆಸ್ ರೈಲು ಬೋಗಿಗಳಿಗೆ ಕಲ್ಲು ಎಸೆದು ಪರಾರಿಯಾಗಿದ್ದರು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಸ್ಟೇಷನ್ನಿಂದ ರೈಲು ನಿರ್ಗಮನಗೊಂಡ ಬಳಿಕ ಅದರ ಚಾಲನೆಯ ಸ್ಥಿತಿಯನ್ನು ತಿಳಿದುಕೊಳ್ಳಲು ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಜಲಪೈಗುರಿಯಿಂದ ಹೌರಾ ರೈಲು ನಿಲ್ದಾಣವರೆಗೆ ಮಧ್ಯದಲ್ಲಿ ಸಾಗುವ ಎಲ್ಲಾ ಸ್ಟೇಷನ್ಗಳಲ್ಲೂ ಹಾಗೂ ರೈಲಿನೊಳಗೂ 'ರಾಜ್ಯ ರೈಲ್ವೆ ಪೊಲೀಸ್ ಪಡೆ' (ಜಿಆರ್ಪಿ) ಗಸ್ತು ತಿರುಗಲಿವೆ ಎಂದು ವಿವರಿಸಿದರು
ಕಲ್ಲೆಸೆದ ಘಟನೆ ನಡೆದ ತಕ್ಷಣವೇ ನಿಲ್ದಾಣದಲ್ಲಿದ್ದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಮಾಡಿರುವ ಯೋಜನೆ ಸದುಪಯೋಗವಾಗಬೇಕು. ಬದಲಾಗಿ ಇಂತಹ ಘಟನೆ ಮುಂದೆ ನಡೆಯದಂತೆ ತಡೆಯಲು ಜಾಗೃತಿ ಮೂಡಿಸಲಾಘುವುದು ಎಂದು ತಿಳಿಸಿದರು.