ತೃತೀಯ ರಂಗದ ಉದಯ: ಪಿಎಂ ರೇಸಿನಲ್ಲಿ ಯಾರು?
ನವದೆಹಲಿ, ಫೆ 7: ಚುನಾವಣಾಪೂರ್ವ ಸಮೀಕ್ಷೆಗಳು ಯುಪಿಎ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗುವುದು ಕಷ್ಟ ಎಂದು ಹೇಳಿರುವ ಬೆನ್ನಲ್ಲೇ ತೃತೀಯ ರಂಗದ ಅಸ್ತಿತ್ವಕ್ಕೆ ಚಾಲನೆ ಸಿಕ್ಕಿದೆ. ನಿರೀಕ್ಷೆಗೂ ಮೀರಿ ಪ್ರಾದೇಶಿಕ ಪಕ್ಷಗಳು ತೃತೀಯ ರಂಗದ ಚಾಲನೆಗೆ ಸ್ಪಂದಿಸಿವೆ.
ಬುಧವಾರ (ಫೆ 5) ನಡೆದ ತೃತೀಯ ರಂಗದ ಸಭೆಯಲ್ಲಿ ಪಕ್ಷಗಳ ನಡುವಿನ ಒಗ್ಗಟ್ಟನ್ನು ನೋಡಿ ಯುಪಿಎ ಮತ್ತು ಎನ್ಡಿಎ ಮೈತ್ರಿಕೂಟದ ಸದಸ್ಯರು ದಂಗಾಗಿದ್ದಂತೂ ನಿಜ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರಕಾರ ರಚನೆಗೆ ಪರಸ್ಪರ ಕೈಜೋಡಿಸಿದ್ದ ಜೆಡಿಎಸ್, ಜೆಡಿಯು ಮತ್ತು ಎಸ್ಪಿ ಪಕ್ಷದ ನಾಯಕರ ಕರೆಗೆ ಪ್ರಾದೇಶಿಕ ಮತ್ತು ಇತರ ಪಕ್ಷಗಳು ಉತ್ತಮವಾಗಿಯೇ ಪ್ರತಿಕ್ರಿಯಿಸಿವೆ. (ತೃತೀಯರಂಗ ಉದಯಕ್ಕೆ 11 ಪಕ್ಷಗಳ ಸಾಥ್)
ತೃತೀಯ ರಂಗಕ್ಕೆ ಉತ್ತಮವಾಗಿ ಚಾಲನೆ ಸಿಕ್ಕಿರುವುದರಿಂದ ಇದೇ ಭಾನುವಾರ (ಫೆ 9) ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಮೈತ್ರಿಕೂಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ದೇವೇಗೌಡ, ಶರದ್ ಯಾದವ್ ಮುಂತಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಪ್ರಮುಖವಾಗಿ ತೃತೀಯ ರಂಗಕ್ಕೆ ಎಐಎಡಿಎಂಕೆ, ಸಮಾಜವಾದಿ ಪಕ್ಷ, ಬಿಜು ಜನತಾದಳ, ಜೆಡಿಯು ಕೈಜೋಡಿಸಿರುವುದು ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ. ಈ ಹಿಂದೆ ಆದಂತೆ ಚುನಾವಣೆಗೆ ಮುನ್ನವೇ ತೃತೀಯ ರಂಗ ಒಡೆದು ಚೂರುಚೂರಾಗಲಿದೆ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ನಾಯಕರಿಗೆ ತೃತೀಯ ರಂಗ ಮುಂದಿನ ದಿನಗಳಲ್ಲಿ ಯಾವ ರೀತಿ ಬಲಪ್ರದರ್ಶನದ ಮೂಲಕ ಉತ್ತರ ನೀಡುತ್ತದೆ ಎಂದು ಕಾದು ನೋಡಬೇಕು. (ತೃತೀಯ ರಂಗಕ್ಕೆ ಜೀವ ತುಂಬಿದ ಜಯಲಲಿತಾ)
ಸಮಾನ ಮನಸ್ಕರ ಈ ಹನ್ನೊಂದು ಪಕ್ಷಗಳ ಒಕ್ಕೂಟದಲ್ಲಿ ಪ್ರಧಾನ ಮಂತ್ರಿ ರೇಸಿನಲ್ಲಿರುವವರು ಯಾರು? ಸ್ಲೈಡಿನಲ್ಲಿ

ಸೆಲ್ವಿ ಡಾ. ಜಯಲಲಿತಾ ಕಮಾಲ್
ಡಿಎಂಕೆಯ ಪ್ರಮುಖ ಮುಖಂಡ, ಕರುಣಾನಿಧಿ ಪುತ್ರ ಅಳಗಿರಿ ಪಕ್ಷದಿಂದ ವಜಾಗೊಂಡ ನಂತರ ಡಿಎಂಕೆಗೆ ಆಗಿರುವ ಹಿನ್ನಡೆಯನ್ನು ಎಐಡಿಎಂಕೆ ಯಾವ ರೀತಿ ಬಳಸಿಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ತಮಿಳುನಾಡಿಲ್ಲಿರುವ ನಲ್ವತ್ತಕ್ಕೆ ನಲ್ವತ್ತೂ ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇನೆ ಎನ್ನುವ ಅದಮ್ಯ ವಿಶ್ವಾಸದಲ್ಲಿರುವ ಜಯಲಲಿತಾ ಒಂದು ವೇಳೆ ತೃತೀಯ ರಂಗ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಪಿಎಂ ರೇಸಿನಲ್ಲಿ ಮಂಚೂಣಿಯಲ್ಲಿ ಬರುವ ಹೆಸರು.

ನಿತೀಶ್ ಕುಮಾರ್ ಜಾದೂ ನಡೆಯುವುದು ಅಷ್ಟು ಸುಲಭವಲ್ಲ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ನಂತರ ನಡೆಯುತ್ತಿರುವ ಅತೀ ಪ್ರಮುಖ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಮೇಲೆ ನಿತೀಶ್ ಭವಿಷ್ಯ ನಿರ್ಣಯವಾಗಲಿದೆ. ಯಾಕೆಂದರೆ ಬಿಹಾರದಲ್ಲಿ ಒಂದು ಕಡೆ ದಿನದಿಂದ ದಿನಕ್ಕೆ ಮೋದಿ ಪ್ರಭಾವ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಲಾಲೂ ಪ್ರಸಾದ್ ಯಾದವ್ ಅವರ ಶಕ್ತಿಯನ್ನೂ ಕಡೆಗಣಿಸುವಂತಿಲ್ಲ. ರಾಜ್ಯದ ಒಟ್ಟು 40 ಸ್ಥಾನಗಳಲ್ಲಿ ಸಮೀಕ್ಷೆಯ ಪ್ರಕಾರ ಸದ್ಯ ಅಲ್ಲಿ ಬಿಜೆಪಿಗೆ ಉತ್ತಮ ಚಾನ್ಸ್ ಇದೆ.

ಮುಲಾಯಂ ಸಿಂಗ್ ಯಾದವ್ ಪಿಎಂ ಕನಸು ಏನಾಗಲಿದೆ?
ಉತ್ತರ ಪ್ರದೇಶದಲ್ಲಿ ಎಸ್ಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಕಾರಣಗಳಿಂದ ವಿವಾದಲ್ಲಿದೆ. ಸಮೀಕ್ಷೆ ಪ್ರಕಾರ ಇಲ್ಲಿ ಕೂಡಾ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಅನುಕೂಲಕರ ವಾತಾವರಣವಿಲ್ಲ. ರಾಜ್ಯದ ಒಟ್ಟು 80 ಸ್ಥಾನಗಳಲ್ಲಿ ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ಈ ಮೂರು ಪಕ್ಷದ ಜೊತೆಗೆ ಮುಲಾಯಂ ಸಿಂಗ್ ಯಾದವ್ ಅವರ ಪಕ್ಷ ಪೈಪೋಟಿ ನಡೆಸ ಬೇಕಾಗಿದೆ.

ನವೀನ್ ಪಟ್ನಾಯಕ್ ಹಣೆಬರಹ ಏನಾಗುತ್ತೋ?
ಬಿಜು ಪಟ್ನಾಯಕ್ ನಿಧನದ ನಂತರ ಒರಿಸ್ಸಾದಲ್ಲಿ ಅಧಿಕಾರಕ್ಕೆ ಬಂದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ರಾಜ್ಯದಲ್ಲಿರುವ ಒಟ್ಟು 21 ಸ್ಥಾನಗಳಲ್ಲಿ ಯಾವ ರೀತಿಯ ಸಾಧನೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇಲ್ಲಿ ಬಿಜೆಡಿ ಉತ್ತಮ ಸಾಧನೆ ಮಾಡಿದರೆ ಪ್ರಧಾನಿ ರೇಸಿನಲ್ಲಿ ನವೀನ್ ಪಟ್ನಾಯಕ್ ಕೂಡಾ ಇರಲಿದ್ದಾರೆ.

ಲಾಸ್ಟ್ ಬಟ್ ನಾಟ್ ಲೀಸ್ಟ್, ದೇವೇಗೌಡ
ರಾಜ್ಯದಲ್ಲಿರುವ 28 ಸ್ಥಾನಗಳಲ್ಲಿ ಜನತಾದಳ ಸೆಕ್ಯೂಲರ್ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಈಗಾಗಲೇ ಹೇಳಿದೆ. ಒಂದು ಸಮೀಕ್ಷೆಯ ಪ್ರಕಾರ ಜೆಡಿಎಸ್ ಆರರಿಂದ ಎಂಟು ಸ್ಥಾನ ಪಡೆಯುವ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದೆ. ಒಂದು ವೇಳೆಯಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇ ಆದಲ್ಲಿ ದೇವೇಗೌಡರು ಪ್ರಧಾನಿ ಹುದ್ದೆಗೆ ಟವಲ್ ಹಾಕದೇ ಇರಲಾರರು. ದೇವರ ಆಟ ಬಲ್ಲವರಾರು?












Click it and Unblock the Notifications