ಅಜ್ಜಿ, ತಂದೆಗೆ ಬಂದ ಸಾವು ನನಗೆ ಬಂದರೂ ಚಿಂತೆಯಿಲ್ಲ:ರಾಹುಲ್
ಚುರು (ರಾಜಸ್ಥಾನ), ಅ 23: ನಮಗೆ ಆತ್ಮೀಯರಾದವರ ಅಗಲಿಕೆಯ ನೋವು ಎಷ್ಟೆಂದು ನಾನು ಬಲ್ಲೆ. ನನ್ನ ಅಜ್ಜಿ ಇಂದಿರಾ ಗಾಂಧಿ ಜೊತೆ ಕಳೆದ ನನ್ನ ಬಾಲ್ಯದ ದಿನವನ್ನು ನೆನಪಿಸಿ ಕೊಂಡರೆ ಈಗಲೂ ದುಃಖವಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ನಡುವಣ ಬಾಂಧವ್ಯಕ್ಕೆ ಧಕ್ಕೆತಂದು ಬಿಜೆಪಿ ಅದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಚುರುವಿನಲ್ಲಿ ಬುಧವಾರ (ಅ 23) ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಇಂದಿರಾ ಗಾಂಧಿ ಸಾವನ್ನಪ್ಪಿದಾಗ ಆವರ ರಕ್ತವನ್ನೂ ನೋಡಿದ್ದೇನೆ ಹಾಗೇ ಅವರನ್ನು ಕೊಲೆಗೈದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರ ರಕ್ತವನ್ನೂ ನೋಡಿದ್ದೇನೆ. ತಂದೆ ರಾಜೀವ್ ಗಾಂಧಿಯನ್ನೂ ಹತ್ಯೆ ಮಾಡಲಾಯಿತು. ನನ್ನ ಅಜ್ಜಿ ಮತ್ತು ತಂದೆಗೆ ಬಂದತಃ ಸಾವು ನನಗೆ ಬಂದರೂ ಅದಕ್ಕೆ ನಾನು ಚಿಂತಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಪಕ್ಷವು ಉತ್ತರಪ್ರದೇಶ, ಗುಜರಾತ್, ಕಾಶ್ಮೀರಕ್ಕೆ ಹೋಗುವುದೇ ಹಿಂದೂ ಮತ್ತು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸಕ್ಕಾಗಿ ಎನ್ನುವ ಗಂಭೀರ ಆರೋಪ ಮಾಡಿದ ರಾಹುಲ್, ಬಿಜೆಪಿ ಕದಡುವ ಕೋಮು ಸಾಮರಸ್ಯಕ್ಕೆ ಬಲಿಯಾಗುವ ಕುಟುಂಬಗಳ ಸಾಂತ್ವನಕ್ಕೆ ಕಾಂಗ್ರೆಸ್ ಪಕ್ಷ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಇಂದಿರಾ ಗಾಂಧಿಯನ್ನು ದೀಪಾವಳಿಯ ದಿನದಂದು ಹತ್ಯೆಗೈಯ್ಯಲು ಸಂಚು ರೂಪಿಸಲಾಗಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ನಾನೀಗ ನಿಮ್ಮ ಮುಂದೆ ಭ್ರಾತೃತ್ವದ ಸಂಕೇತವಾಗಿ ಬಂದು ನಿಂತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬಡವ ಬಲ್ಲಿದ ಎನ್ನುವ ಭೇದಬಾವವಿಲ್ಲ. ಎಲ್ಲರೂ ಸೇರಿ ದೇಶವನ್ನು ಅಭಿವೃದ್ದಿಯ ಪಥದತ್ತ ತೆಗೆದುಕೊಂಡು ಹೋಗೋಣ. ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಾನಿಂದು ಮಾತನಾಡುವ ಮೂಡ್ ನಲ್ಲಿದ್ದೇನೆ. ರಾಹುಲ್ ಗಾಂಧಿ ಭಾಷಣದ ಹೈಲೈಟ್ಸ್..

ಮಾತನಾಡುವ ಮೂಡಿನಲ್ಲಿದ್ದೇನೆ
ನಾನಿಂದು ಮಾತನಾಡುವ ಮೂಡ್ ನಲ್ಲಿದ್ದೇನೆ ಎಂದ ರಾಹುಲ್ ಗಾಂಧಿ, ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆನ್ನುವುದಷ್ಟೇ ನಮ್ಮ ಉದ್ದೇಶವಲ್ಲ. ಗೆಹ್ಲೋಟ್ ಅಧಿಕಾರದ ಅವಧಿಯಲ್ಲಿ ರಾಜ್ಯ ಉತ್ತಮ ಪ್ರಗತಿ ಕಂಡಿದೆ. ಇನ್ನೂ ಸಾಧಿಸ ಬೇಕಾಗಿರುವುದು ಬೇಕಾದಷ್ಟಿದೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕಿದೆ ಎಂದಿದ್ದಾರೆ.

ಕಾಂಗ್ರೆಸ್ ಬಡವರಿಗಾಗಿ
ಕಾಂಗ್ರೆಸ್ ಪಕ್ಷದ ರಾಜಕೀಯ ಬಡವರಿಗಾಗಿ, ರೈತರಿಗಾಗಿ ಮತ್ತು ಕೂಲಿ ಕಾರ್ಮಿಕರಿಗಾಗಿ. ನಮ್ಮ ಪಕ್ಷ ಇದರ ಜೊತೆ ರಾಜಕೀಯ ಮಾಡುತ್ತಿದೆ ಎಂದು ವಿರೋಧಿಗಳು ಟೀಕಿಸಿದರೂ ನಮಗೆ ಅದರ ಚಿಂತೆಯಿಲ್ಲ.

ಆಹಾರ ಭದ್ರತೆ
ಅಸಹಾಯಕರಿಗೆ, ಬಡವರಿಗೆ ಉದ್ಯೋಗ ಮತ್ತು ಆಹಾರ ಭದ್ರತೆ ನೀಡ ಬೇಕೆನ್ನುವುದು ನಮ್ಮ ಉದ್ದೇಶ. ಬಿಜೆಪಿ ವ್ಯಂಗ್ಯವನ್ನು ನಾವು ಗಣನೆಗೆ ತೆಗೆದು ಕೊಳ್ಳುವುದಿಲ್ಲ. ನಮಗೆ ಜನತೆಯ ಆಶೀರ್ವಾದ ಬೇಕಷ್ಟೇ.

ಸಭೆಯಲ್ಲಿ ಜನರಿದ್ದರು
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗುರುದಾಸ್ ಕಾಮತ್ ಉಪಸ್ಥಿತರಿದ್ದ ಚುನಾವಣಾ ಸಭೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಹಾಗಾಗಿ ರಾಹುಲ್ ಗಾಂಧಿ ಉಲ್ಲಸಿತರಾಗಿದ್ದಿದ್ದು ಕಂಡು ಬಂತು.

ಚುನಾವಣೆ
ಡಿಸೆಂಬರ್ ಒಂದರಂದು ರಾಜಸ್ಥಾನದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಡಿಸೆಂಬರ್ ಎಂಟರಂದು ಮತಎಣಿಕೆ ನಡೆಯಲಿದೆ.












Click it and Unblock the Notifications