ನೋಟು ಬದಲಾವಣೆ ನಿರ್ಧಾರ ಯಾವ್ಯಾವ ದೇಶದಲ್ಲಿ ಸೋತಿದೆ?
ಬೆಂಗಳೂರು, ನವೆಂಬರ್ 17: ನವೆಂಬರ್ 8ರ ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅಚ್ಚರಿಯಿಂದ ಇನ್ನೂ ಜನ ಆಚೆ ಬಂದಿಲ್ಲ. ಚಾಲ್ತಿಯಲ್ಲಿದ್ದ ಶೇ 86ರಷ್ಟು 500, 1000 ರುಪಾಯಿಯ ನೋಟು ಏಕಾಏಕಿ ರದ್ದುಗೊಂಡಿದ್ದರಿಂದ ಮುಂದೇನು ಕಥೆ ಎಂದು ಗಾಬರಿಗೊಂಡವರು ಕೋಟ್ಯಂತರ ಜನ.
ನೋಟು ಸುಧಾರಣೆ ಮಾಡುವ ವೇಳೆ ಸಮಸ್ಯೆಯಾಗಿದ್ದು ಇದೇ ಮೊದಲೇನಲ್ಲ. ಅಭಿವೃದ್ಧಿಯಾದ ರಾಷ್ಟ್ರಗಳಲ್ಲೂ ಇಂಥ ಸವಾಲುಗಳನ್ನು ಎದುರಿಸಿದ್ದಾರೆ. 1971ರಲ್ಲಿ ಬ್ರಿಟಿಷ್ ಪೌಂಡ್ ನಲ್ಲಿ ಮಾಡಿದ ಬದಲಾವಣೆ, 2002ರಲ್ಲಿ ಯುರೋ ಪರಿಚಯಿಸಿದಾಗ ಎಲ್ಲವೂ ಸಲೀಸಾಗಿ ಆಯಿತು ಅನ್ನೋದು ಬಿಟ್ಟರೆ, ಉಳಿದಂತೆ ದೊಡ್ಡ ಸವಾಲು, ಸಮಸ್ಯೆಗಳಂತೂ ಎದುರಾಗಿವೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]
ಸೋವಿಯತ್ ಯೂನಿಯನ್ ರಷ್ಯಾ ಛಿದ್ರವಾಗಿದ್ದರ ಹಿಂದೆ ಇದ್ದ ಕಾರಣಗಳ ಪೈಕಿ ನೋಟು ಸುಧಾರಣೆ ಕೂಡ ಒಂದಾಗಿತ್ತು. ಮ್ಯಾನ್ಮಾರ್ ನಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಸಹ ಅಂಥದ್ದೇ ಸುಧಾರಣೆ. ಯಾವ ದೇಶದಲ್ಲಿ ಏನೇನಾಯಿತು ಎಂಬ ಬಗ್ಗೆ ಒಮ್ದು ಸಂಕ್ಷಿಪ್ತ ನೋಟ ಇಲ್ಲಿದೆ.
ಸೋವಿಯತ್ ಯೂನಿಯನ್ ಆಫ್ ರಷ್ಯಾ
ಕೆಲವು ಉದಾಹರಣೆಗಳನ್ನು ನೋಡೋಣ. 1991ರಲ್ಲಿ ಸೋವಿಯತ್ ಯೂನಿಯನ್ ನ ಕೊನೆ ದಿನಗಳಲ್ಲಿ ಗೋರ್ಬಚೆವ್ ದೊಡ್ಡ ಮೊತ್ತದ ರೂಬೆಲ್ ಗಳನ್ನು ವಾಪಸ್ ಪಡೆಯಲಾಯಿತು. ಆಗಿನ ಉದ್ದೇಶ ಕೂಡ ಇಂದಿನ ಮೋದಿ ಸರಕಾರದ ರೀತಿಯದೇ ಆಗಿತ್ತು. ಕಪ್ಪು ಹಣವು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಯಿತು.
ಆಗ ಅಲ್ಲಿ ಮೂರನೇ ಒಂದು ಭಾಗದಷ್ಟು ಚಲಾವಣೆಯಲ್ಲಿದ್ದ 50, 100 ರೂಬೆಲ್ ನ ನೋಟುಗಳನ್ನು ರದ್ದುಪಡಿಸುವುದಕ್ಕೆ ಸರಕಾರ ಮುಂದಾಗಿತ್ತು. ಈ ಬಗ್ಗೆ ಅಂದಿನ ಸನ್ನಿವೇಶವನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆ ಸುಧಾರಣೆಯಿಂದ ಹಣದುಬ್ಬರವನ್ನು ತಡೆಯೋದಿಕ್ಕೆ ಆಗಲಿಲ್ಲ. ಸಾರ್ವಜನಿಕರಿಗೆ ಸರಕಾರದ ಮೇಲಿನ ನಂಬಿಕೆ ಕಡಿಮೆಯಾಯಿತು. ರಾಜಕೀಯ ಒಳಜಗಳವು ಆರ್ಥಿಕ ಕುಸಿತಕ್ಕೆ ಜೊತೆಯಾಯಿತು.[ಮದುವೆ ಸಮಾರಂಭಗಳಿಗಾಗಿ 2.5ಲಕ್ಷ ಡ್ರಾ ಮಾಡಬಹುದು: ಕೇಂದ್ರ]
ಗೋರ್ಬಚೆವ್ ಆ ಸಮಸ್ಯೆಯಿಂದ ಆಚೆ ಬರಲು ಮಾಡಿದ ಪ್ರಯತ್ನವೂ ವಿಫಲವಾಯಿತು. ಅದರ ಮರುವರ್ಷವೇ ಸೋವಿಯತ್ ಒಕ್ಕೂಟ ಛಿದ್ರವಾಯಿತು. ಅದರಿಂದ ರಷ್ಯಾ ಪಾಠ ಕಲಿಯಿತು. 1998ರಲ್ಲಿ ರೂಬೆಲ್ ನ ಒಟ್ಟು ಮೌಲ್ಯಕ್ಕೆ ಮರುರೂಪ ಕೊಟ್ಟು, ಮೂರು ಸೊನ್ನೆ ತೆಗೆದುಹಾಕಲಾಯಿತು. ಆ ನಂತರವೇ ಎಲ್ಲವೂ ಸಲೀಸಾಗಿ ಆಗಿದ್ದು.
ಉತ್ತರ ಕೊರಿಯಾ
2010ರಲ್ಲಿ ಉತ್ತರ ಕೊರಿಯಾದ ಆಗಿನ ಸರ್ವಾಧಿಕಾರಿ ಕಿಮ್ ಜೊಂಗ್-II ಅಲ್ಲಿ ನೋಟುಗಳ ಮುಖಬೆಲೆಯಿಂದ ಎರಡು ಸೊನ್ನೆ ತೆಗೆದುಹಾಕಿದರು. ಆರ್ಥಿಕತೆ ಮೇಲೆ ಹಿಡಿತ ಸಾಧಿಸಬೇಕು, ಕಾಳ ಧನ ಮಾರುಕಟ್ಟೆಯನ್ನು ಪೂರ್ತಿ ನಿರ್ನಾಮ ಮಾಡಬೇಕು ಎಂದುಕೊಂಡು ಈ ನಿರ್ಧಾರ ಮಾಡಲಾಗಿತ್ತು.[ಇಂಕು ತಯಾರಿಸಲು ಆರ್ ಬಿಐ ನೀಡಿದ ಹಣವೆಷ್ಟು?]
ಆ ವರ್ಷ ಬೆಳೆ ಕೂಡ ಕೈ ಕೊಟ್ಟಿತು. ಇದರಿಂದ ಆಹಾರ ಸಮಸ್ಯೆ ಎದುರಾಯಿತು. ಅಕ್ಕಿ ಬೆಲೆ ಆಕಾಶ ಮುಟ್ಟಿತು. ಕೊನೆಗೆ ಕಿಮ್ ಸಾರ್ವಜನಿಕರ ಕ್ಷಮೆ ಕೇಳಿದರು. ಆ ನಂತರದ್ದು ಇನ್ನೂ ಭೀಕರ. ಆಡಳಿತ ಪಕ್ಷದ ಆರ್ಥಿಕ ವ್ಯವಹಾರಗಳ ಮುಖ್ಯಸ್ಥನಿಗೆ ಮರಣ ದಂಡನೆಯನ್ನೇ ವಿಧಿಸಲಾಯಿತು.
ಝೈರ್
ಝೈರ್ ದೇಶದ ಸರ್ವಾಧಿಕಾರಿ ಮುಬುಟು ಸೆಸೆ ಸೆಕೊ 1990ರ ಆರಂಭದಲ್ಲಿ ಆರ್ಥಿಕತೆಯಲ್ಲಿ ಅಡತಡೆಗಳನ್ನು ಎದುರಿಸುವಂತಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಸುಧಾರಣೆಗೆ ಮುಂದಾದರು. 1993ರಲ್ಲಿ ಹಳೇ ನೋಟನ್ನು ಹಿಂಅಪ್ಡೆಯುವ ಯೋಜನೆ ಎಂಥ ಕೈ ಕೊಟ್ಟಿತು ಅಂದರೆ ಹಣದುಬ್ಬರ ವಿಪರೀತವಾಯಿತು. ಡಾಲರ್ ಎದುರು ಈ ದೇಶದ ವಿದೇಶಿ ವಿನಿಮಯ ಮೌಲ್ಯ ಕುಸಿದುಬಿತ್ತು. ನಾಗರಿಕ ಯುದ್ಧದ ನಂತರ 1997ರಲ್ಲಿ ಮೊಬುಟು ಅವರನ್ನು ಪದಚ್ಯುತಗೊಳಿಸಲಾಯಿತು.[ನೋಟ್ ಚೇಂಜ್: ನಾಯಿ ಕಚ್ಚಿದರೆ ಬೆಕ್ಕಿಗೆ ಹೊಡೆತವೇ?]
ಮ್ಯಾನ್ಮಾರ್
1987ರಲ್ಲಿ ಮ್ಯಾನ್ಮಾರ್ ನಲ್ಲಿ ಮಿಲಿಟರಿ ಆಡಳಿತವು ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ 80ರಷ್ಟು ಹಣವನ್ನು ಅಮಾನ್ಯ ಮಾಡಿತು. ಆಗಲೂ ಕಪ್ಪು ಹಣ ಮಾರುಕಟ್ಟೆಯನ್ನು ತಡೆಯಬೇಕು ಎಂಬ ಉದ್ದೇಶವೇ ಇತ್ತು. ಆ ವರ್ಷ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು. ಆರ್ಥಿಕತೆಯಲ್ಲಿ ಆದ ನಕಾರಾತ್ಮಕ ಬದಲಾವಣೆ ಕಾರಣಕ್ಕೆ ವ್ಯಾಪಕ ಪ್ರತಿಭಟನೆಗಳಾದವು. ಮರು ವರ್ಷ ಅಲ್ಲಿನ ಸರಕಾರ ಶಿಸ್ತುಕ್ರಮದ ಹೆಸರಲ್ಲಿ ಸಾವಿರಾರು ಜನರನ್ನು ಕೊಂದಿತು.[ಮೋದಿಯನ್ನು ಹಿಟ್ಲರ್, ಗಡ್ಡಾಫಿಗೆ ಹೋಲಿಸಿದ ವಿಪಕ್ಷ]
ಘಾನಾ
ಈ ದೇಶ 1982ರಲ್ಲಿ ತೆರಿಗೆ ಕದಿಯುವುದನ್ನು ತಪ್ಪಿಸಲು, ಭ್ರಷ್ಟಾಚಾರ ನಿಯಂತ್ರಿಸಲು, ನಗದು ಸಂಗ್ರಹಕ್ಕೆ ತಡೆ ಹಾಕಲು 50 ಸೆದಿ ನೋಟನ್ನು ವಾಪಸ್ ಪಡೆಯಿತು. ಇದರಿಂದ ಜನರು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಯಿತು. ಜನರು ವಿದೇಶಿ ಕರೆನ್ಸಿಗಳನ್ನು ಇಟ್ಟುಕೊಳ್ಳುವುದಕ್ಕೆ ಅರಂಭಿಸಿದರು. ಆಸ್ತಿಗಳ ಮೇಲೆ ಹೂಡಿಕೆ ಆರಂಭಿಸಿದರು. ಕರೆನ್ಸಿಗಳಿಗೆ ಕಾಳಮಾರುಕಟ್ಟೆ ತೆರೆದುಕೊಂಡಿತು. ತಮ್ಮ ಹಣ ಬದಲಾಯಿಸಿಕೊಳ್ಳುವುದಕ್ಕೆ ಹಳ್ಳಿಗರು ಮೈಲುಗಟ್ಟಲೆ ದೂರದ ಬ್ಯಾಂಕ್ ಗಳಿಗೆ ನಡೆದು ಹೋಗುವಂತೆ ಆಯಿತು. ನಿಗದಿತ ಸಮಯ ಮೀರಿ ರಾಶಿಗಟ್ಟಲೆ ಹಣ ಉಪಯೋಗಕ್ಕಿಲ್ಲದ ಕಾಗದ ಚೂರುಗಳಾದವು.[ಜನಾರ್ದನ ರೆಡ್ಡಿ ಬಂಧನಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯ]
ನೈಜೀರಿಯಾ
1984ರಲ್ಲಿ ಮುಹಮ್ಮದು ಬುಹಾರಿ ನೇತೃತ್ವದ ಮಿಲಿಟರಿ ಸರಕಾರ ಭ್ರಷ್ಟಾಚಾರ ನಿಗ್ರಹಕ್ಕಾಗಿ ಕ್ರಮ ತೆಗೆದುಕೊಳ್ಳುವ ಇರಾದೆಯಿಂದ ಹೊಸ ನೋಟುಗಳನ್ನು ವಿತರಿಸಿತು. ಬೇರೆ ಬಣ್ಣಗಳಿಂದ ಕೂಡಿದ್ದ ಹೊಸ ನೋಟನ್ನು ನಿರ್ದಿಷ್ಟ ಅವಧಿಯಲ್ಲಿ ಬದಲಿಸಿಕೊಳ್ಳಲು ಒತ್ತಡ ಹಾಕಲಾಯಿತು. ಮೊದಲ ವಿಪರೀತ ಸಾಲ ಇದ್ದ ಹಾಗೂ ಹಣದುಬ್ಬರದಿಂದ ನರಳುತ್ತಿದ್ದ ಆ ದೇಶದ ಆರ್ಥಿಕ ವ್ಯವಸ್ಥೆಗೆ ಈ ನಡೆಯನ್ನು ತಡೆದುಕೊಳ್ಳುವ ಶಕ್ತಿಯೇ ಇರಲಿಲ್ಲ. ಅದರ ಮರುವರ್ಷ ಬುಹಾರಿ ಪದಚ್ಯುತಗೊಂಡರು. ಆದರೆ ಈಗ ಮತ್ತೊಮ್ಮೆ ಅಧಿಕಾರದಲ್ಲಿದ್ದಾರೆ ಅದು ಬೇರೆ ಮಾತು.