ಅಯೋಧ್ಯೆಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು: ವಾಸೀಮ್ ರಿಜ್ವಿ
ಲಕ್ನೋ, ಜುಲೈ 13: 'ಅಯೋಧ್ಯೆಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು. ಅದು ರಾಮನ ಜನ್ಮಸ್ಥಳ' ಎಂದು ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.
"ಆ ಜಾಗದಲ್ಲಿ ಮಸೀದಿ ಇರಲೇ ಇಲ್ಲ ಮತ್ತು ಆ ಜಾಗದಲ್ಲಿ ಎಂದಿಗೂ ಮಸೀದಿ ಇರುವುದಕ್ಕೆ ಸಾಧ್ಯವೂ ಇಲ್ಲ. ಅದು ಭಗವಂತ ಶ್ರೀರಾಮನ ಜನ್ಮಸ್ಥಳ. ಅಲ್ಲಿ ರಾಮ ಮಂದಿರವನ್ನು ಮಾತ್ರ ಕಟ್ಟುವುದಕ್ಕೆ ಸಾಧ್ಯ" ಎಂದು ಅವರು ಹೇಳಿದ್ದಾರೆ.
'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತ ವಿವಾದವನ್ನು ನಾವು ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಲು ಬಯಸುತ್ತೇವೆ' ಎಂದು ಶಿಯಾ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟಿಗೆ ಹೇಳಿದೆ.

ಕಳೆದ ಮಾರ್ಚ್ ನಲ್ಲಿ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿಕೆ ನೀಡಿ, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮಸೀದಿ ಇರಲೇ ಇಲ್ಲ, ಕರಸೇವಕರು ಕೆಡವಿದ್ದು ಮಂದಿರವನ್ನ, ಮಸೀದಿಯನ್ನಲ್ಲ" ಎಂದಿದ್ದರು.
ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲೊಂದಾದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ. ಅಯೋಧ್ಯೆಯ ವಿವಾದಿತ ಜಾಗವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ 13 ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದು ಇದರ ವಿಚಾರಣೆ ಜುಲೈ 06 ರಿಂದ ಆರಂಭವಾಗಿದೆ.












Click it and Unblock the Notifications