ಕೇಜ್ರಿವಾಲ್, ಜೈನ್ ಬಗ್ಗೆ ವೈಯಕ್ತಿಕ ಮಾಹಿತಿ ಇದೆ: ಪತ್ರದಲ್ಲಿ ಬೆದರಿಕೆ ಹಾಕಿದ ಸುಕೇಶ್ ಚಂದ್ರಶೇಖರ್
ನವದೆಹಲಿ, ನವೆಂಬರ್ 8: ತಮ್ಮ ಪತ್ರಗಳ ಮೂಲಕ ಆಪ್ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸುತ್ತಿರುವ ಜೈಲು ಪಾಲಾದ ಬಂಧಿತ ಸುಕೇಶ್ ಚಂದ್ರಶೇಖರ್ ಅವರು ಇದೀಗ ಹೊಸದೊಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಸುಕೇಶ್ ನವೆಂಬರ್ 7ರ ಪತ್ರದಲ್ಲಿ ಹೇಳಿರುವ ಆ ಒಂದು ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇಡಿ ಮತ್ತು ಸಿಬಿಐ ಅವರನ್ನು ಪ್ರಶ್ನಿಸಿದಾಗ ಅವರು ಈ ಆರೋಪಗಳನ್ನು ಏಕೆ ಬಹಿರಂಗಪಡಿಸಲಿಲ್ಲ? ಈಗ ಯಾಕೆ? ಮಾಡುತ್ತಿದ್ದಾರೆನ್ನುವ ಅನುಮಾನಗಳು ಮೂಡಿವೆ.
ಪತ್ರದಲ್ಲಿ ಚಂದ್ರಶೇಖರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಹೀಗೆ ಹೇಳಿದ್ದಾರೆ, "ನಿಮ್ಮ ನಿರಂತರ ಬೆದರಿಕೆ ಮತ್ತು ಜೈನ್ ಆಡಳಿತದ ಮೂಲಕ ನನಗೆ ಒತ್ತಡ ಹೆಚ್ಚಾಗುತ್ತಿದೆ. ಪಂಜಾಬ್ ಮತ್ತು ಗೋವಾ ಚುನಾವಣೆಯ ಸಮಯದಲ್ಲಿ ನನಗೆ ಹಣ ನೀಡುವಂತೆ ಜೈನ್ ಕೇಳಿದ್ದರು. ಇದು ತುಂಬಾ ಆಯಿತು. ನಿಮ್ಮಿಂದ ಇದನ್ನೆಲ್ಲ ಸಹಿಸಿಕೊಳ್ಳುವ ಅಗತ್ಯವಿಲ್ಲ. ನಾನು ಕಾನೂನಿನ ಪ್ರಕಾರ ಹೋಗಲು ನಿರ್ಧರಿಸಿದ್ದೇನೆ'' ಎಂದಿದ್ದಾರೆ.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ಗೆ ಮತ್ತೊಂದು ಪತ್ರ ಬರೆದ ಚಂದ್ರಶೇಖರ್
'ಎಎಪಿ ನಾಯಕ ಸತ್ಯೇಂದ್ರ ಜೈನ್ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಚಂದ್ರಶೇಖರ್ ಅವರು ಆರೋಪ ಮಾಡಿದ್ದಾರೆ. ಚಂದ್ರಶೇಖರ್ ಅವರೊಂದಿಗೆ ಎಎಪಿ ವಿರುದ್ಧ "ಅಸಂಬದ್ಧ ಆರೋಪಗಳನ್ನು" ಹೊರಿಸುವುದಕ್ಕೆ ಪ್ರತಿಯಾಗಿ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ' ಎಂದು ಎರಡು ದಿನಗಳ ಹಿಂದೆ ಎಎಪಿ ಆರೋಪಿಸಿತ್ತು.
ಆದರೆ ''ಯಾರ ಸಹಾಯವನ್ನೂ ಪಡೆಯುವ ಆಸಕ್ತಿ ನನಗಿಲ್ಲ ಎಂದು ಮಂಡೋಲಿ ಜೈಲಿನ ಕೈದಿ ಚಂದ್ರಶೇಖರ್ ಹೇಳಿದ್ದಾರೆ. ನನ್ನ ಪ್ರಕರಣವನ್ನು ನಿಭಾಯಿಸಲು ಮತ್ತು ನನ್ನನ್ನು ನಾನು ಸಾಬೀತುಪಡಿಸಲು ನಾನು ತುಂಬಾ ಸಮರ್ಥನಾಗಿದ್ದೇನೆ. ನನ್ನ ಪ್ರಕರಣವನ್ನು ನೋಡಿಕೊಳ್ಳಲು ನನ್ನ ಬಳಿ ಎಲ್ಲಾ ಸಂಪನ್ಮೂಲಗಳಿವೆ. ಸಹಾಯ ಮಾಡಲು ನಾನು ಯಾರನ್ನೂ ಯಾವುದೇ ರೂಪದಲ್ಲಿ ಮೆಚ್ಚಿಸುವ ಅಗತ್ಯವಿಲ್ಲ"ಎಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ ಚಂದ್ರಶೇಖರ್ ಹೇಳಿದ್ದಾರೆ.
ವೈಯಕ್ತಿಕ ವಿಷಯ ಬಹಿರಂಗಪಡಿಸುವ ಬೆದರಿಕೆ
ಕೆಲವು ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸುವುದಾಗಿ ಚಂದ್ರಶೇಖರ್ ಅವರು ಕೇಜ್ರಿವಾಲ್ ಮತ್ತು ಜೈನ್ ಅವರಿಗೆ ಬೆದರಿಕೆ ಹಾಕಿದ್ದಾರೆ. "ನೀವು (ಕೇಜ್ರಿವಾಲ್) ಅಥವಾ ಜೈನ್ ಯಾವುದೇ ರೂಪದಲ್ಲಿ ಸಂತೋಷವಾಗಿರದ ಕೆಲವು ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಲು ಅದು ನನ್ನನ್ನು ಒತ್ತಾಯಿಸುತ್ತದೆ. ಅದರ ವಿವರಗಳು ದೇಶವನ್ನು ಬೆಚ್ಚಿಬೀಳಿಸುತ್ತದೆ. ನಾನು ಏನು ಮಾತನಾಡುತ್ತಿದ್ದೇನೆಂದು ನಿಮಗೆ ನಿಖರವಾಗಿ ತಿಳಿದಿದೆ"ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೇಜ್ರಿವಾಲ್ಗೆ ಚಂದ್ರಶೇಖರ್ ಪ್ರಶ್ನೆಗಳ ಸುರಿಮಳೆ
ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. 'ನಾನು ದೇಶದ ಅತಿ ದೊಡ್ಡ ವಂಚಕನಾಗಿದ್ದರೆ, ಯಾವ ಆಧಾರದಲ್ಲಿ ನನ್ನಿಂದ 50 ಕೋಟಿ ರೂಪಾಯಿ ಸ್ವೀಕರಿಸಿದಿರಿ ಮತ್ತು ರಾಜ್ಯಸಭಾ ಸ್ಥಾನದ ಪ್ರಸ್ತಾವವನ್ನು ನೀಡಿದ್ದೀರಿ' ಎಂದು ಕೇಜ್ರಿವಾಲ್ರನ್ನು ಶುಕ್ರವಾರ ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ಆರೋಪವೇನು?
2016 ರಲ್ಲಿ ಕೇಜ್ರಿವಾಲ್ ಅವರು, 'ಎಎಪಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಥಾನಗಳು ಮತ್ತು ಪೋಸ್ಟಿಂಗ್ಗಳಿಗೆ ಪ್ರತಿಯಾಗಿ ಪಕ್ಷಕ್ಕೆ 500 ಕೋಟಿ ರೂಪಾಯಿಗಳನ್ನು ನೀಡಲು 20 ರಿಂದ 30 ವ್ಯಕ್ತಿಗಳನ್ನು ಕರೆತರಲು ನೀವು ನನ್ನನ್ನು ಏಕೆ ಒತ್ತಾಯಿಸಿದ್ದೀರಿ?' ಎಂದು ಪ್ರಶ್ನಿಸಿರುವ ಅವರು, ಸದ್ಯ ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ 2016ರಲ್ಲಿ ಪಂಚತಾರಾ ಹೋಟೆಲ್ನಲ್ಲಿ ನಡೆದ ಔತಣಕೂಟದಲ್ಲಿ ಕೇಜ್ರಿವಾಲ್ ಕೂಡ ಭಾಗವಹಿಸಿದ್ದರು ಎಂದು ಸುಕೇಶ್ ಆರೋಪಿಸಿದ್ದಾರೆ.
ನಿಮ್ಮ ಸೂಚನೆಯ ಮೇರೆಗೆ ನಾನು ಅಸೋಲಾದಲ್ಲಿರುವ ಗೆಹ್ಲೋಟ್ ಅವರ ಫಾರ್ಮ್ ಹೌಸ್ನಲ್ಲಿ 50 ಕೋಟಿ ರೂ.ಗಳನ್ನು ಸತ್ಯೇಂದ್ರ ಜೈನ್ ಅವರಿಗೆ ತಲುಪಿಸಿದ ನಂತರ ನಾನು ತಂಗಿದ್ದ ಭಿಕಾಜಿ ಕಾಮಾ ಪ್ಲೇಸ್ನ ಹಯಾತ್ನಲ್ಲಿ 2016 ರಲ್ಲಿ ಜೈನ್ ಅವರೊಂದಿಗೆ ನನ್ನ ಡಿನ್ನರ್ ಪಾರ್ಟಿಯಲ್ಲಿ ಏಕೆ ಭಾಗವಹಿಸಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಹೀಗೆ ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎಲ್ಲಾ ಆರೋಪಗಳನ್ನು ಎಎಪಿ ತಳ್ಳಿ ಹಾಕಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಎಎಪಿಗೆ ಈ ಆರೋಪ ಕೊಂಚ ಗೊಂದಲದ ವಾತಾವರಣವನ್ನು ನಿರ್ಮಾಣ ಮಾಡಿದೆ.