ಕೊಲೆಯಾಗುವ ಮುನ್ನ ಇನ್ಫಿ ಟೆಕ್ಕಿ ಆಡಿದ ಕೊನೆಯ ಮಾತುಗಳಿವು...
ಜನವರಿ 29ರಂದು ಇನ್ಫೋಸಿಸ್ ಪುಣೆಯ ಕಚೇರಿಯಲ್ಲೇ ಕೊಲೆಯಾದ ರಾಸಿಲಾ ಅವರು ತಮ್ಮ ಹತ್ಯೆಗೆ ಕೆಲವೇ ನಿಮಿಷಗಳ ಮುನ್ನ ತನ್ನ ದೂರ ಸಿಬ್ಬಂದಿಯೊಂದಿಗೆ ಮಾತನಾಡಿದ್ದರು.
ಪುಣೆ, ಫೆಬ್ರವರಿ 6: ''ಯಾರೋ ನನ್ನ ಕ್ಯಾಬಿನ್ ನೊಳಗೆ ಪ್ರವೇಶಿಸಿದ್ದಾರೆ... ನಾನು ಆಮೇಲೆ ಫೋನ್ ಮಾಡ್ತೀನಿ''.... ಕಳೆದ ಭಾನುವಾರ ಪುಣೆಯಲ್ಲಿನ ಇನ್ಫೋಸಿಸ್ ಕಚೇರಿಯಲ್ಲೇ ತಾನು ಕೊಲೆಯಾಗುವ ಮುನ್ನ ಕೇರಳ ಮೂಲದ ಟೆಕ್ಕಿ ರಾಸಿಲಾ ಹೇಳಿದ ಕೊನೆಯ ಮಾತುಗಳಿವು.
ಅಂದಹಾಗೆ, ಆಕೆ ಅವತ್ತು (ಜನವರಿ 29) ಆಫೀಸ್ ರಜೆಯಿದ್ದರೂ ಪ್ರಾಜೆಕ್ಟ್ ಒಂದರ ಕೆಲಸಕ್ಕಾಗಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಆಫೀಸ್ ಗೆ ಬಂದಿದ್ದಳು. ಇನ್ಫೋಸಿಸ್ ಕಟ್ಟಡದ 9ನೇ ಮಹಡಿಯಲ್ಲಿ ಆಕೆ ಎಂದಿನಂತೆ ಕೂಡುತ್ತಿದ್ದ ತನ್ನ ಕ್ಯಾಬಿನ್ ನೊಳಗೆ ಪ್ರವೇಶಿಸಿ ಕೆಲಸ ಆರಂಭಿಸಿದ್ದಳು. ಆದರೆ, ಕೆಲಸ ಮುಗಿಸಿ ರಾತ್ರಿ 8ರ ಸುಮಾರಿಗೆ ಕಚೇರಿಯಿಂದ ಹೊರಡಬೇಕಿದ್ದ ರಾಸಿಲಾ ತನ್ನ ಕ್ಯಾಬಿನ್ ನಿಂದ ಹೊರಬರಲೇ ಇಲ್ಲ. ಸಂಜೆ ಹೊತ್ತಿಗೇ ಆಕೆಯ ಕ್ಯಾಬಿನ್ ನಲ್ಲೇ ಆಕೆಯ ಕೊಲೆ ನಡೆದುಹೋಗಿತ್ತು.
ಆದರೆ, ಕೆಲಸ ಮಾಡುವಾಗ ಬೆಂಗಳೂರಿನಲ್ಲಿರುವ ಇಬ್ಬರು ಇನ್ಫಿ ಟೆಕ್ಕಿಗಳೊಂದಿಗೆ ತಮ್ಮ ಪ್ರಾಜೆಕ್ಟ್ ಕುರಿತಂತೆ ನಿರಂತರವಾಗಿ ಆನ್ ಲೈನ್ ಮೂಲಕ ಸಂಪರ್ಕದಲ್ಲಿದ್ದ ರಾಸಿಲಾ, ಕೊಲೆಯಾಗುವ ಕೆಲವೇ ನಿಮಿಷಕ್ಕೂ ಮುನ್ನ ತನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಮಾತನಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಆ ಕಡೆಯಿಂದ ಮಾತನಾಡಿದ್ದು ಆಕೆಯ ಹತ್ತಿರದ ಸಂಬಂಧಿ ಅಂಜಲಿ ನಂದಕುಮಾರ್. ಈ ಮಾತುಕತೆಯ ವೇಳೆ, ಪುಣೆಯ ಕೆಲಸದಲ್ಲಿ ತಾನೇನು ಅಷ್ಟು ಸಂತುಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ರಾಸಿಲಾ.
''ಪುಣೆಯಿಂದ ನನಗೆ ವರ್ಗಾವಣೆ ಬೇಕು ಎಂದು ಪದೇ ಪದೇ ಸಲ್ಲಿಸಲಾಗಿರುವ ಮನವಿಗೆ ಸಂಸ್ಥೆಯು ಓಗೊಟ್ಟಿಲ್ಲ. ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಕ್ರೂರಿಯಂತೆ ನನ್ನನ್ನು ದುಡಿಸಿಕೊಳ್ಳುತ್ತಿದ್ದಾನೆ. ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ. ಈ ಪ್ರಾಜೆಕ್ಟನ್ನು ನಾನು ಮುಗಿಸಲೇಬೇಕಿದೆ. ಆದರೂ, ನನ್ನ ಮನವಿಗೆ ಸ್ಪಂದನೆ ಸಿಗುವ ಕಾಲ ಬಂದಿದೆ. ಫೆಬ್ರವರಿ ಮೊದಲನೇ ವಾರದಲ್ಲಿ ನನಗೆ ವರ್ಗಾವಣಾ ಪತ್ರ ಸಿಗಬಹುದು'' ಎಂದು ತಿಳಿಸಿದ್ದಾರೆ.
ಆದರೆ, ಅಷ್ಟರಲ್ಲಿ ಯಾರೋ ತನ್ನ ಕ್ಯಾಬಿನ್ ಪ್ರವೇಶಿಸಿರುವ ಸುಳಿವು ಆಕೆಗೆ ಸಿಕ್ಕಿದೆ. ತಕ್ಷಣವೇ ಇದನ್ನು ಫೋನಿನಲ್ಲಿ ಹೇಳಿಕೊಂಡಿದ್ದಾರೆ ಅವರು. ''ಯಾರೋ ನನ್ನ ಕ್ಯಾಬಿನ್ ಪ್ರವೇಶಿದ್ದಾರೆ. ಇರು, ಆಮೇಲೆ ಫೋನ್ ಮಾಡ್ತೀನಿ'' ಎಂದು ಫೋನ್ ಕಟ್ ಮಾಡಿದ್ದಾರೆ. ಅಷ್ಟೇ.
ಅದೇ ಅವರ ಕೊನೆಯ ಮಾತುಗಳಾಗಿದ್ದವು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.