ಇರಾನ್ ಜತೆ ಕರಾರು, ಈಗ ಪಾಕ್ ಮಾಡಲಿ ತಕರಾರು?
ನವದೆಹಲಿ, ಮೇ 24: ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ 12 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಅರೇ ಪರಸ್ಪರ ಎರಡು ದೇಶಗಳ ನಡುವೆ ಈ ಬಗೆಯ ಒಪ್ಪಂದಗಳು ನಡೆಯುವುದು ಸಾಮಾನ್ಯ ಅಂದುಕೊಂಡು ಸುಮ್ಮನಾಗಬೇಡಿ. ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಒಪ್ಪಂದಗಳು ಹೊಸ ಶಕೆಗೆ ನಾಂದಿ ಹಾಡುತ್ತಿವೆ.[ಇರಾನ್ ಜತೆ 12 ಒಪ್ಪಂದ: ಇದಪ್ಪಾ ಪಾಕ್, ಚೀನಾಕ್ಕೆ ಸೆಡ್ಡು]
ಚಾಬಹಾರ್ ಬಂದರು ನಿರ್ಮಾಣಕ್ಕೆ 500 ಮಿಲಿಯನ್ ಡಾಲರ್ ವಿನಿಯೋಗ ಮಾಡಲಾಗುವುದು ಎಂಬುದನ್ನು ಎರಡೆರಡು ಸಾರಿ ಓದಬೇಕಾಗುತ್ತದೆ. ಈ ಬಂದರು ನಿರ್ಮಾಣ ಒಪ್ಪಂದದ ಮುಖಾಂತರ ಪ್ರಧಾನಿ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಿದ್ದಾರೆ.[ಒಂದು ಲೀಟರ್ ಪೆಟ್ರೋಲ್ ಗೆ 23 ರು. ಕೊಟ್ಟರೆ ಸಾಕು]
ಕಿರಿ ಕಿರಿ ಮಾಡುವ ನೆರೆಮನೆಯವನ ದಾರಿ ಬೇಕಾಗಿಲ್ಲ ಎಂಬುದನ್ನು ಮನಗಂಡಿರುವ ಪ್ರಧಾನಿ ಪಾಕಿಸ್ತಾನದ ನೆಲವನ್ನು ಮುಟ್ಟದೆ ವ್ಯಾಪಾರ ವಾಣಿಜ್ಯ ಸಂಪರ್ಕ ಬೆಳಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದು ಸಾಗಾಟದ ವೆಚ್ಚದ ಉಳಿತಾಯದೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಮ್ಮನ್ನು ತೆರೆದಿಡುತ್ತದೆ. ಭಾರತವನ್ನು ಸದಾ ಹಿಂದಕ್ಕೆ ದೂಡಲು ಯತ್ನ ಮಾಡುತ್ತಿರುವ ಚೀನಾ ಮತ್ತು ತಗಾದೆ ತೆಗೆಯುವ ಪಾಕಿಸ್ತಾನ ಎರಡಕ್ಕೂ ಮೋದಿ ಒಂದೇ ಒಪ್ಪಂದದ ಮುಖಾಂತರ ಉತ್ತರ ನೀಡಿದ್ದಾರೆ.
ನೆರೆಮನೆಯವನ ದಾರಿ ಬೇಕಿಲ್ಲ
ಮಧ್ಯಪ್ರಾಚ್ಯ ದೇಶಗಳ ಸಂಪರ್ಕಕ್ಕೆ ಭಾರತ ಪಾಕಿಸ್ತಾನವನ್ನು ಬಳಸುವುದು ಅನಿವಾರ್ಯ. ಇದೇ ಮಾರ್ಗದ ಗ್ವಾದಾರ್ನಲ್ಲಿ ಬಂದರು ನಿರ್ವಿುಸುವುದಕ್ಕೆ ಚೀನಾಗೆ ಅವಕಾಶ ಮಾಡಿಕೊಟ್ಟ ಪಾಕಿಸ್ತಾನ ಭಾರತದ ಜತೆ ಸದಾ ಕ್ಯಾತೆ ತೆಗೆಯುತ್ತಲೇ ಇತ್ತು. ಆದರೆ ಈಗ ಚಾಬಹಾರ್ ಬಂದರು ನಿರ್ಮಾಣವಾದರೆ ಈ ಎಲ್ಲ ಆತಂಕಗಳಿಗೆ ಮುಕ್ತಿ ಸಿಗಲಿದೆ.
ಚಾಬಹಾರ್ ಯಾಕೆ ಮುಖ್ಯ?
ರಸ್ತೆ ಮಾರ್ಗದಲ್ಲಿ ಅಫ್ಘಾನಿಸ್ತಾನ ಅಥವಾ ಮಧ್ಯ ಪ್ರಾಚ್ಯಕ್ಕೆ ಸರಕುಗಳನ್ನು ಸಾಗಿಸಲು ಪಾಕಿಸ್ತಾನ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಇರಾನ್ನ ಚಾಬಹಾರ್ ಪ್ರದೇಶ ಸಮುದ್ರ ತೀರದಲ್ಲಿರುವ ಕಾರಣ ಇಲ್ಲಿ ಬಂದರು ನಿರ್ಮಾಣ ಮಾಡಿಕೊಂಡರೆ, ಅಫ್ಘಾನಿಸ್ತಾನ ಹಾಗೂ ಮಧ್ಯಪ್ರಾಚ್ಯವನ್ನು ತಲುಪುವುದು ಸುಲಭ.
ಸಾಗಾಟ ವೆಚ್ಚ ಕಡಿಮೆ
ಚಾಬಹಾರ್ ಬಂದರಿಗೆ ಗುಜರಾತ್ ಹಾಗೂ ಮಹಾರಾಷ್ಟ್ರ ಕಡಲತೀರಗಳು ಹತ್ತಿರದಲ್ಲಿವೆ. ಬಹುತೇಕ ಭಾಗ ನಮ್ಮ ಸೇನಾ ಸುಪರ್ದಿಯಲ್ಲಿ ಬರುತ್ತದೆ. ಹಾಗಾಗಿ ಸಾಗಾಟ ಮತ್ತು ನಿರ್ವಹಣೆ ಸುಲಭವಾಗುವುದರೊಂದಿಗೆ ಸರಕು ಸಾಗಾಣಿಕೆ ವೆಚ್ಚ ಹಾಗೂ ಸಮಯ ಸಹ ಉಳಿತಾಯವಾಗಲಿದೆ.
ತೈಲ ಸಾಗಾಟ
ಭಾರತ ತನಗೆ ಬೇಕಾದ ಬಹುತೇಕ ತೈಲವನ್ನು ಅರಬ್ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ಬಂದರು ಅಭಿವೃದ್ಧಿಯಾದರೆ ಸಾಗಾಟ ವೆಚ್ಚದಲ್ಲಿ ಅಪಾರ ಪ್ರಮಾಣದ ಕಡಿತ ಸಾಧ್ಯವಿದ್ದು ತೈಲ ದರ ಇನ್ನಷ್ಟು ನಿಯಂತ್ರಣಕ್ಕೆ ಬರಲಿದೆ.