ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆ ಬಡಿದ ಭಾರತ- ಮ್ಯಾನ್ಮಾರ್ ಸೇನೆ
ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುವ ಉಗ್ರಗಾಮಿಗಳ ಹಲವು ಗುಂಪುಗಳನ್ನು ಗುರಿ ಮಾಡಿಕೊಂಡು, ಭಾರತ ಹಾಗೂ ಮ್ಯಾನ್ಮಾರ್ ನ ಸೇನೆಯು ಮೇ ಹದಿನಾರರಿಂದ ಮೂರು ವಾರಗಳ ಕಾಲ ಸಮನ್ವಯತೆಯಿಂದ ಗಡಿಯಲ್ಲಿ ಕಾರ್ಯಾಚರಣೆ ನಡೆಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೊದಲ ಹಂತವಾಗಿ 'ಆಪರೇಷನ್ ಸನ್ ರೈಸ್' ಅನ್ನು ಮೂರು ತಿಂಗಳ ಹಿಂದೆ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಮಾಡಲಾಗಿತ್ತು.
ಆ ವೇಳೆ ಈಶಾನ್ಯ ರಾಜ್ಯಗಳ ಮೂಲದ ಭಯೋತ್ಪಾದಕ ಸಂಘಟನೆಗಳನ್ನು ಸದೆ ಬಡಿಯಲಾಗಿತ್ತು. ಮ್ಯಾನ್ಮಾರ್ ದೇಶವು ಭಾರತದ ವ್ಯೂಹಾತ್ಮಕ ನೆರೆ ದೇಶಗಳಲ್ಲಿ ಒಂದು. ಆ ದೇಶದ ಜತೆ 1640 ಕಿ.ಮೀ. ವ್ಯಾಪ್ತಿಯ ಗಡಿ ಪ್ರದೇಶವನ್ನು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಹಾಗೂ ಮಣಿಪುರ ಸಹ ಹಂಚಿಕೊಳ್ಳುತ್ತವೆ.
ಮ್ಯಾನ್ಮಾರ್ ದೇಶದೊಳಗೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್
ಗಡಿ ಪಹರೆ ಕಾಯುವ ವೇಳೆ ಭಾರತವು ಮ್ಯಾನ್ಮಾರ್ ದೇಶದ ಜತೆಗೆ ಸಮನ್ವಯತೆಯಿಂದ ಕಾರ್ಯಾಚರಿಸುತ್ತದೆ. ಮೂಲಗಳ ಪ್ರಕಾರ: 'ಆಪರೇಷನ್ ಸನ್ ರೈಸ್ 2' ಮೂಲಕ ಸೇನೆಗಳು ಸಮನ್ವಯತೆಯಿಂದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿವೆ. ಕಮ್ತಪುರ್ ಲಿಬರೇಷನ್ ಆರ್ಗನೈಸೇಷನ್ (KLO), NSCN (ಖಪ್ಲಂಗ್), ದ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ (I) ಮತ್ತು ದ ನ್ಯಾಷನಲ್ ಡೆಮಾಕ್ರಟಿಕ್ ಫಂಟ್ ಆಫ್ ಬೋರೋಲ್ಯಾಂಡ್ (NDFB) ನೆಲೆಗಳನ್ನೂ ಧ್ವಂಸ ಮಾಡಲಾಗಿತ್ತು.
ಮಣಿಪುರದಲ್ಲಿ 18 ಯೋಧರನ್ನು ಕೊಂದಿದ್ದರು
ಈ ಗುಂಪುಗಳಿಗೆ ಸೇರಿದ ಕನಿಷ್ಠ ನಲವತ್ತೆಂಟು ಉಗ್ರರನ್ನು ಬಂಧಿಸಲಾಗಿದೆ ಮತ್ತು ಕಾರ್ಯಾಚರಣೆ ವೇಳೆ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಎರಡೂ ದೇಶಗಳು ಮೂರನೇ ಹಂತದ ಕಾರ್ಯಾಚರಣೆ ನಡೆಸುವ ಬಗ್ಗೆ ಚಿಂತಿಸುತ್ತಿವೆ. ಗುಪ್ತಚರ ವರದಿ ಹಾಗೂ ವಾಸ್ತವ ಚಿತ್ರಣವನ್ನು ಪಡೆದು, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುತ್ತದೆ. ಭಾರತೀಯ ಸೇನೆ ಜತೆಗೆ ಅಸ್ಸಾಂ ರೈಫಲ್ಸ್ ಕೂಡ ಕಾರ್ಯಾಚರಣೆಯ ಭಾಗವಾಗಿದೆ. ಜೂನ್ 2015ರಲ್ಲಿ ಇಂಡೋ- ಮ್ಯಾನ್ಮಾರ್ ಗಡಿ ಬಳಿಯಲ್ಲಿ NSCN (K) ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಕೆಲ ದಿನದ ನಂತರ ಉಗ್ರಗಾಮಿಗಳು ಮಣಿಪುರದಲ್ಲಿ 18 ಯೋಧರನ್ನು ಕೊಂದಿದ್ದರು.
ಆಗ್ನೇಯ ಏಷ್ಯಾ ಪಾಲಿಗೆ ಭಾರತದ ಬಾಗಿಲು
ಮೊದಲ ಹಂತದ ಆಪರೇಷನ್ ನಲ್ಲಿ ಸೈನ್ಯವು ಅರಕನ್ ಆರ್ಮಿಯ ಸದಸ್ಯರನ್ನು ಗುರಿ ಮಾಡಿಕೊಂಡು ದಾಳಿ ನಡೆಸಲಾಯಿತು. ಇದು ಮ್ಯಾನ್ಮಾರ್ ನಲ್ಲಿ ಒಳನುಸುಳುವ ಗುಂಪು. ಈ ಗುಂಪು ಕಲದನ್ ಮಲ್ಟಿ-ಮಾಡಲ್ ಟ್ರಾನ್ಸಿಟ್ ಟ್ರಾನ್ಸ್ ಪೋರ್ಟ್ ಯೋಜನೆಯನ್ನು ವಿರೋಧ ಮಾಡುತ್ತಿತ್ತು. ಈ ಯೋಜನೆಯು ಆಗ್ನೇಯ ಏಷ್ಯಾ ಪಾಲಿಗೆ ಭಾರತದ ಬಾಗಿಲು ಅಂತಲೇ ಪರಿಗಣಿಸಲಾಗಿತ್ತು.
ಮ್ಯಾನ್ಮಾರ್ ಪಚ್ಚೆ ಗಣಿಯಲ್ಲಿ ದುರಂತ; 54 ಮಂದಿ ಸಾವನ್ನಪ್ಪಿದ ಶಂಕೆ
ಒಪ್ಪಂದದ ಅನುಷ್ಠಾನಕ್ಕೆ ಭಾರತದಿಂದ ಚೌಕಟ್ಟು
ಭಾರತವು ಏಪ್ರಿಲ್ ತಿಂಗಳು 2008ರಲ್ಲಿ ಮ್ಯಾನ್ಮಾರ್ ಜತೆಗೆ ಈ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ಚೌಕಟ್ಟು ರೂಪಿಸಿತು. ಈ ಯೋಜನೆ ಪೂರ್ಣಗೊಂಡ ಮೇಲೆ ಈಶಾನ್ಯ ರಾಜ್ಯವಾದ ಮಿಜೋರಾಂ ಅನ್ನು ಮ್ಯಾನ್ಮಾರ್ ನ ರಖಿನೆ ರಾಜ್ಯದ್ ಸಿಟ್ವೆ ಬಂದರಿನೊಂದಿಗೆ ಸಂಪರ್ಕ ಕಲ್ಪಿಸಲು ನೆರವಾಗುತ್ತದೆ.
ಉಗ್ರ ಸಂಘಟನೆಗಳ 50ಕ್ಕೂ ಹೆಚ್ಚು ಕ್ಯಾಂಪ್
ಭಾರತದ ಕಡೆಯಿಂದ ಐಜ್ ವಾಲ್-ಸೈಹಾ ರಾಷ್ಟ್ರೀಯ ಹೆದ್ದಾರಿಯನ್ನು ಅಂತರರಾಷ್ಟ್ರೀಯ ಗಡಿ ಝೋರಿನ್ ಪ್ಯು ತನಕ 90 ಕಿ.ಮೀ. ವಿಸ್ತರಣೆ ಆಗಬೇಕು. ಭದ್ರತಾ ಸಂಸ್ಥೆಗಳ ಪ್ರಕಾರ, ಕಳೆದ ವರ್ಷದ ತನಕ ಈಶಾನ್ಯ ರಾಜ್ಯಗಳ ಉಗ್ರ ಸಂಘಟನೆಗಳ 50ಕ್ಕೂ ಹೆಚ್ಚು ಕ್ಯಾಂಪ್ ಗಳು ಮ್ಯಾನ್ಮಾರ್ ನಲ್ಲಿ ಇದ್ದವು.