ಪಟಾಕಿ ದುರಂತ: ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!
ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದಲ್ಲಿ ಭಾನುವಾರ (ಏ 10) ನಸುಕಿನ ಮೂರು ಗಂಟೆ ಸುಮಾರಿಗೆ ನಡೆದ ಪಟಾಕಿ ಅವಘಡಕ್ಕೆ ದೇವಾಲಯದ ಆಡಳಿತ ಮಂಡಳಿಯ ಬೇಜವಾಬ್ದಾರಿ ಕಾರಣ ಎನ್ನಲಾಗುತ್ತಿದೆ.
ಕೆಲವೇ ಗಂಟೆಗೆಳ ಪಟಾಕಿ ಸಿಡಿಸುವ ಕ್ಷಣಿಕ ಖುಷಿಗೆ ನೂರಾರು ಜನರು ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾಡಳಿತದ ತಡೆಯಾಜ್ಞೆ ಇದ್ದರೂ ಪಟಾಕಿ ಸಿಡಿಸುವ ಹುಂಬುತನಕ್ಕೆ ಅಸಂಖ್ಯಾತ ಜನರ ಬದುಕು ಹೈರಾಣವಾಗಿದೆ. (ಕೇರಳದಲ್ಲಿ ಪಟಾಕಿ ಸಿಡಿದು ಅಗ್ನಿ ದುರಂತ, 102 ಸಾವು)
ಯುಗಾದಿ ಅಮವಾಸ್ಯೆಯ ನಂತರ ಎರಡನೇ ದಿನ ಅಂದರೆ ಭರಣಿ ನಕ್ಷತ್ರದ ದಿನದಂದು (ಮಲಯಾಳಂ ವರ್ಷ 1191) ನಡೆಯುವ 'ಮೀನಾ ಭರಣಿ ಉತ್ಸವ'ದ ಸಂಭ್ರಾಮಚರಣೆಯಲ್ಲಿದ್ದ ಭಕ್ತಾದಿಗಳಿಗೆ ಮತ್ತು ಕೇರಳದ ಜನತೆಗೆ ಹೊಸ ವರ್ಷದ ದಿನ 'ಕರಾಳದಿನ'ವಾಗಿ ಪರಿಣಮಿಸಿದೆ.
ಆಗಸದಲ್ಲಿ ಸಿಡಿಯಬೇಕಾಗಿದ್ದ ಪಟಾಕಿಗಳು ನೆಲದಲ್ಲೇ ಸಿಡಿದು ಮತ್ತು ಇದರ ಕಿಡಿ ಕಟ್ಟಡವೊಂದರಲ್ಲಿ ಶೇಖರಿಸಿಟ್ಟಿದ್ದ ಸುಮಾರು ಆರುನೂರಕ್ಕೂ ಹೆಚ್ಚು ಪಟಾಕಿಯ ಬಂಡಲಿಗಳಿಗೆ ಅಂಟಿಕೊಂಡಿದ್ದರಿಂದ ಈ ಭಾರೀ ದುರಂತ ಸಂಭವಿಸಿದೆ.
ಪಟಾಕಿಯ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ದೇವಾಲಯದ ಒಂದು ಭಾಗ ಕುಸಿತಗೊಂಡಿದೆ, ದೇವಾಲಯಕ್ಕೆ ಸಂಬಂಧಿಸಿದ ಕಟ್ಟಡಗಳು ನೆಲಸಮವಾಗಿವೆ ಮತ್ತು ಕಿಲೋಮೀಟರ್ ಉದ್ದಕ್ಕೂ ಕಾಂಕ್ರೀಟ್ ಪೀಸುಗಳು ಚೆಲ್ಲಾಪಿಲ್ಲಿಯಾಗಿವೆ. (ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು)
ಭಾರೀ ಅವಘಡಕ್ಕೆ ಏನು ಕಾರಣವಿರಬಹುದು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಜಿಲ್ಲಾಡಳಿತದ ಅನುಮತಿ ಇರಲಿಲ್ಲ
ಪಟಾಕಿ ಸಿಡಿಸಲು ಅಲ್ಲಿ ಮೈದಾನವೂ ಇರಲಿಲ್ಲ, ಜೊತೆಗೆ ದೇವಾಲಯದ ಪ್ರಾಂಗಾಣವೂ ಅಷ್ಟು ದೊಡ್ಡದಿಲ್ಲ. ದೇವಾಲಯದ ಸುತ್ತಮುತ್ತ ಹಲವಾರು ಮನೆಗಳಿವೆ. ಕೊಲ್ಲಂ ಜಿಲ್ಲಾಡಳಿತ ಪಟಾಕಿ ಸಿಡಿಸಲು ಅನುಮತಿಯೂ ನೀಡಿರಲಿಲ್ಲ.
ಪ್ರದರ್ಶನದ ಕೊನೆಯ ಹಂತದಲ್ಲಿ ಅವಘಡ
ಮಧ್ಯರಾತಿ ಆರಂಭವಾಗಿದ್ದ ಪಟಾಕಿ ಸಿಡಿಸುವ ಪ್ರದರ್ಶನ ಮೂರು ತಾಸಿನ ವರೆಗೆ ಮುಂದುವರಿದಿತ್ತು. ನಿರ್ಬಂಧದ ನಡುವೆಯೂ ಪಟಾಕಿ ಪ್ರದರ್ಶನವನ್ನು ಪೊಲೀಸರು ಕೂಡಾ ವೀಕ್ಷಿಸುತ್ತಿದ್ದರು ಎನ್ನುವುದು ಗಮನಿಸಬೇಕಾದ ಅಂಶ. ಪ್ರದರ್ಶನದ ಕೊನೆಯ ಹಂತದಲ್ಲಿ ಈ ಅವಘಡ ಸಂಭವಿಸಿದೆ.
ಸ್ಥಳೀಯ ಅಧಿಕಾರಿಗಳು ಹೇಳುವುದೇನು
ಸ್ಥಳೀಯ ಅಧಿಕಾರಿಗಳು ಹೇಳುವುದೇ ಬೇರೆ. ಇಲ್ಲಿ ಪ್ರತಿವರ್ಷ ಪಟಾಕಿ ಸಿಡಿಸುವ ಸ್ಪ್ರರ್ಧೆ ಏರ್ಪಡಿಸಲಾಗುತ್ತದೆ. ಈ ಬಾರಿ ಪಟಾಕಿ ಸಿಡಿಸುವ ಪ್ರದರ್ಶನ ಮಾತ್ರ ಆಯೋಜಿಸಲಾಗಿತ್ತು. ಇದಕ್ಕೆ ಯಾವುದೇ ನಿಷೇಧವಿರಲಿಲ್ಲ. ಸ್ಪರ್ಧೆಗೆ ದೇವಾಲಯದ ಆಡಳಿತ ಮಂಡಳಿ ಅನುಮತಿ ನೀಡಿತ್ತೋ ಎನ್ನುವುದರ ಬಗ್ಗೆ ಸ್ಪಷ್ಟನೆಯಿಲ್ಲ ಎಂದು ಸ್ಥಳೀಯ ಕಾರ್ಪೋರೇಟರ್ ಹೇಳಿದ್ದಾರೆ.
ದೇವಿಯ ದೇವಾಲಯ
ಕೇರಳದ ಕರಾವಳಿ ಪಟ್ಟಣ ಪರವೂರಿನಲ್ಲಿರುವ ಈ ದೇವಿಯ ದೇವಾಲಯದಲ್ಲಿ ವಿಶುಹಬ್ಬದ ಎರಡು ದಿನದ ನಂತರ ನಡೆಯುವ ಉತ್ಸವದಲ್ಲಿ ಅಶ್ವತಿ ವಿಳಕ್ಕು, ಕಥಕ್ಕಳಿ, ಕಂಪದಿಕಳಿ ಮತ್ತು ಮರಂಎಡಪ್ಪು ಎನ್ನುವ ಸಾಂಪ್ರದಾಯಿಕ ಕಾರ್ಯಕ್ರಮದ ಜೊತೆಗೆ ಪಟಾಕಿ ಸಿಡಿಸುವ ಪದ್ದತಿಯೂ ಇಲ್ಲಿ ನಡೆದುಕೊಂಡು ಬರುತ್ತಿದೆ.
ಹತ್ತು ಸಾವಿರಕ್ಕೂ ಹೆಚ್ಚು ಜನ
ಆದರೆ ಈ ಬಾರಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಪಟಾಕಿ ದುರ್ಘಟನೆ ಸಂಭವಿಸುವಾಗ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಅಲ್ಲಿ ಜಮಾಯಿಸಿದ್ದರು. ಪಟಾಕಿಯ ಸ್ಫೋಟ ಸಂಭವಿಸುತ್ತಿದ್ದಂತೆಯೇ ವಿದ್ಯುತ್ ಪೂರೈಕೆ ಕಡಿದುಬಿದ್ದು ಅಂಧಕಾರ ಉಂಟಾಯಿತು. ನೆರೆದಿದ್ದ ಜನ ಗೊಂದಲದಿಂದ ದಿಕ್ಕಾಪಾಲಾಗಿ ಓಡಿದ್ದು ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು.
ನ್ಯಾಯಾಂಗ ತನಿಖೆಗೆ ಆದೇಶ
ಇಡೀ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಕೇರಳ ಸರಕಾರ ಆದೇಶ ಹೊರಡಿಸಿದೆ. ಇಂಥ ಅವಘಡ ಸಾಧ್ಯತೆ ಇದೆ ಎಂದು ಮೊದಲೇ ಎಚ್ಚರಿಸಿದ್ದರೂ ದೇವಾಲಯದ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದರು ಎಂದು ಕೇರಳದ ಸ್ಥಳೀಯ ಪತ್ರಿಕೆಗಳು ದೂರಿವೆ.
ಪ್ರಧಾನಿ ಭೇಟಿ
ಮಧ್ಯಾಹ್ನ ಅವಘಡ ಸಂಭವಿಸಿದ ಸ್ಥಳಕ್ಕೆ ಮತ್ತು ಕೊಲ್ಲಂ ಜಿಲ್ಲಾಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಜೊತೆಗೆ ಹದಿನೈದು ವೈದ್ಯರೂ ಆಗಮಿಸಿದ್ದಾರೆ. ಮುಖ್ಯಮಂತ್ರಿ ಚಾಂಡಿ ಅವರ ಬಳಿ ಮೋದಿ ಮಾಹಿತಿ ಪಡೆದಿದ್ದಾರೆ.