ತೆಲಂಗಾಣ ರಾಜಕೀಯ; ದೇವಾಲಯದಲ್ಲಿ ಬಿಜೆಪಿ ನಾಯಕರ ಪ್ರಮಾಣ!
ಹೈದರಾಬಾದ್, ಅಕ್ಟೋಬರ್ 28: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದು ತೆಲಂಗಾಣ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ನಾಲ್ವರು ಶಾಸಕರನ್ನು ಖರೀದಿಸಲು ಬಿಜೆಪಿ ನೂರಾರು ಕೋಟಿ ಹಣವನ್ನು ವ್ಯಯಿಸಿದೆ ಎಂದು ಟಿಆರ್ಎಸ್ ಹೇಳಿದೆ. ಟಿಆರ್ಎಸ್ ಶಾಸಕನಿಗೆ ಸಂಬಂಧಿಸಿದ ಫಾರ್ಮ್ ಹೌಸ್ನಲ್ಲಿ ರಹಸ್ಯ ಮಾತುಕತೆ ನಡೆಸಲಾಗುತ್ತಿತ್ತು. ಈ ವೇಳೆ, ಟಿಆರ್ಎಸ್ನ ಪ್ರಮುಖ ಶಾಸಕರೊಬ್ಬರಿಗೆ 100 ಕೋಟಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರೆಲ್ಲರೂ ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾದ ವ್ಯಕ್ತಿಗಳು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಹೈದರಾಬಾದ್ನ ಡೆಕ್ಕನ್ ಪ್ರೈಡ್ ಹೋಟೆಲ್ ಮಾಲೀಕ ನಂದಕುಮಾರ್, ದೆಹಲಿಯ ಫರಿದಾಬಾದ್ನ ಸ್ವಾಮಿ ರಾಮಚಂದ್ರ ಭಾರತಿ ಅಲಿಯಾಸ್ ಎಸ್.ಸತೀಶ್ ಶರ್ಮಾ ಹಾಗೂ ತಿರುಪತಿಯ ಸಿಂಹ ಯಾಜುಲು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ
ಪಕ್ಷ ಬದಲಿಸಬೇಕೆಂದು ನಮ್ಮ ಮೇಲೆ ಒತ್ತಡ ಹೇರಲಾಯಿತು. ನೂರಾರು ಕೋಟಿ ಹಣದ ಆಮಿಷ ಒಡ್ಡಲಾಯಿತು. ಒಂದು ವೇಳೆ, ಪಕ್ಷ ಬದಲಿಸದೇ ಹೋದಲ್ಲಿ, ಐಡಿ, ಸಿಬಿಐ ದಾಳಿ ನಡೆಸುವುದಾಗಿ ಬಿಜೆಪಿ ಒತ್ತಡ ಹೇರಿದೆ ಎಂದು ಟಿಆರ್ಎಸ್ ಶಾಸಕರು ಆರೋಪಿಸಿದ್ದರು.
ಕೆಸಿಆರ್ ನಿರ್ದೇಶಿಸಿರುವ ನಾಟಕವೆಂದ ಬಿಜೆಪಿ; ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಬರೆದು, ನಿರ್ದೇಶಿಸಿ, ನಿರ್ಮಿಸಿದ ನಾಟಕವಿದು. ಈ ನಾಟಕವನ್ನು ಟಿಆರ್ಎಸ್ ಪ್ರದರ್ಶನ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ತೆಲಂಗಾಣ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಕಿಶನ್ ರೆಡ್ಡಿ, 'ಟಿಆರ್ಎಸ್ ಶಾಸಕರಿಗೆ ನೂರು ಕೋಟಿ ಹಣವನ್ನು ನೀಡಿದ್ದು ಯಾರು' ಎಂದು ಪ್ರಶ್ನಿಸಿದ್ದಾರೆ.
'ಟಿಆರ್ಎಸ್ ಶಾಸಕನ ಮಾಲಿಕತ್ವದ ಫಾರ್ಮ್ ಹೌಸ್ಗೆ ಪೊಲೀಸರು ತೆರಳುವ ಮುಂಚಿತವಾಗಿ ಮಾಧ್ಯವದವರು ತೆರಳಿದ್ದರು. ಅವರು ಫಾರ್ಮ್ಹೌಸ್ನಲ್ಲಿ ಏನು ನಡೆಯುತ್ತಿದೆ ಎಂಬುದರ ವಿವರಗಳನ್ನು ನೀಡುತ್ತಿದ್ದರು. ಈ ಫಾರ್ಮ್ ಹೌಸ್ ಒಳಗೆ ಮಾಧ್ಯವದವರನ್ನು ಏಕೆ ಬಿಡಲಾಯಿತು?. ಈ ಬಿಜೆಪಿ ಸೇರಿದ್ದೆಂದು ಹೇಗೆ ಹೇಳುತ್ತೀರಿ?. ಈ ಪ್ರಕರಣದಲ್ಲಿ ಬಂಧಿತರಾದ ಯಾವುದೇ ವ್ಯಕ್ತಿ ಜೊತೆ ಬಿಜೆಪಿ ಸಂಪರ್ಕ ಹೊಂದಿಲ್ಲ. ಇದೆಲ್ಲ ಕೆಸಿಆರ್ ಪ್ರಾಯೋಜಿತ ನಾಟಕ' ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.

ದೇವಾಲಯದಲ್ಲಿ ಬಿಜೆಪಿ ನಾಯಕರ ಪ್ರಮಾಣ; ಬಿಜೆಪಿಯು ಟಿಆರ್ಎಸ್ ಶಾಸಕರ ಖರೀದಿಯಲ್ಲಿ ಭಾಗಿಯಾಗಿಲ್ಲವೆಂದು ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ದೇವಾಲಯದಲ್ಲಿ ಪ್ರಮಾಣವನ್ನೂ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿರುವ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ತೆಲಂಗಾಣದ ಯಾದಗಿರಿಗುಟ್ಟ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತಿದ್ದಾರೆ.
'ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿಯ ಪವಿತ್ರ ದೇಗುಲದಲ್ಲಿ ಪ್ರಮಾಣ ಮಾಡುತ್ತಿದ್ದೇನೆ. ನಾಲ್ವರು ಟಿಆರ್ಎಸ್ ಶಾಸಕರು ಖರೀದಿಗೆ ಬಿಜೆಪಿ ಯತ್ನಿಸಿಲ್ಲ' ಎಂದು ಬರೆದುಕೊಂಡಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಸಹ ಇದೇ ವಿಡಿಯೊವನ್ನು ಟ್ವೀಟ್ ಮಾಡಿಕೊಂಡಿದ್ದಾರೆ.
ದೆಹಲಿ, ತೆಲಂಗಾಣ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲಕ್ಕೆ ಬಿಜೆಪಿ ಯತ್ನ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ನಾಯಕರು ಆರೋಪಿಸುತ್ತಲೇ ಇದ್ದಾರೆ. ಟಿಆರ್ಎಸ್ ಶಾಸಕರ ಖರೀದಿಗೆ 2019ರಿಂದಲೂ ಬಿಜೆಪಿ ತಂತ್ರ ಮಾಡುತ್ತಿದೆ ಎಂದು ಕೆಸಿಆರ್ ಆರೋಪಿಸಿದ್ದರು.












Click it and Unblock the Notifications