ಪ್ರಧಾನಿ ಮೋದಿ ‘ನನ್ನ ದೊಡ್ಡಣ್ಣ’ ಎಂದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ!
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಏನೇನೋ ಆಗುತ್ತಿದೆ. ಭಾರತದ ರಾಜಕೀಯ ರಣರಂಗ ಇದೀಗ ರಂಗೇರಿದೆ. ಅದ್ರಲ್ಲೂ ಬಿಜೆಪಿ ಈ ಬಾರಿ ದೊಡ್ಡ ಅಂತರದ ಗೆಲುವು ದಾಖಲಿಸುತ್ತೆ ಅಂತಾ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಹೀಗಿದ್ದಾಗ ಪ್ರಧಾನಿ ಮೋದಿ ಕೂಡ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನ ಅನುಷ್ಠಾನ ಮಾಡ್ತಾ, ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಹೀಗಿದ್ದಾಗಲೇ, ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿರುವವರು ಪ್ರಧಾನಿ ಮೋದಿ ಅವರನ್ನು 'ನನ್ನ ದೊಡ್ಡಣ್ಣ' ಎಂದಿದ್ದಾರೆ!
ಅಂದಹಾಗೆ ಪ್ರಧಾನಿ ಮೋದಿ ಅವರನ್ನ ಈಗ 'ನನ್ನ ದೊಡ್ಡಣ್ಣ' ಅಂತಾ ಕರೆದಿರುವುದು, ತೆಲಂಗಾಣದ ಸಿಎಂ ಎ. ರೇವಂತ್ ರೆಡ್ಡಿ. ತೆಲಂಗಾಣ ರಾಜ್ಯದಲ್ಲಿ ₹56,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದರು. ಇದೇ ವೇಳೆ, ಮಹತ್ವದ ಘಟನೆಗಳು ಕೂಡ ಸಂಭವಿಸಿವೆ. ಅದರಲ್ಲೂ ತೆಲಂಗಾಣದ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಆಗಿರುವ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದರು. ಈ ಮೂಲಕ ಕೇಂದ್ರ ಸರ್ಕಾರದ ಜೊತೆಗೆ ಹೊಂದಾಣಿಕೆ ರಾಜಕೀಯವನ್ನು ತೆಲಂಗಾಣ ಸಿಎಂ ಶುರು ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅಸಲಿಗೆ, ರೇವಂತ್ ರೆಡ್ಡಿ ಹೇಳಿದ್ದಾದರೂ ಏನು?

'ಪಿಎಂ ನರೇಂದ್ರ ಮೋದಿ ದೊಡ್ಡಣ್ಣ!'
ಪ್ರಧಾನಿ ಮೋದಿ ಅವರು ದಕ್ಷಿಣ ಭಾರತದ ರಾಜ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಯಾಕಂದ್ರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರ ಭಾರತದಲ್ಲಿ ಭರ್ಜರಿ ಗೆಲುವನ್ನ ಪಡೆಯುವುದು ಸುಲಭ. ಆದರೆ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಸ್ವಲ್ಪ ಕಠಿಣವಾಗಿದೆ. ಹೀಗೆ ಈ ಬಾರಿ ಹೇಗಾದರೂ ದಕ್ಷಿಣ ಭಾರತದ ರಾಜ್ಯದಲ್ಲಿ ಭರ್ಜರಿಯಾಗಿ ಬಿಜೆಪಿ ಬಾವುಟವನ್ನು ಹಾರಿಸಬೇಕು ಎಂಬುದು ಬಿಜೆಪಿ ರಣತಂತ್ರ. ಇದಕ್ಕೆ ಪೂರಕವಾಗಿ ಪ್ರಧಾನಿ ಮೋದಿಯವರು ಸುತ್ತಾಟ ನಡೆಸುತ್ತಿದ್ದು, ಈ ಸಮಯದಲ್ಲೇ ತೆಲಂಗಾಣದ ಕಾಂಗ್ರೆಸ್ ಸಿಎಂ ಮೋದಿಯವರ ಬಗ್ಗೆ ಹಾಡಿ ಹೊಗಳಿದ್ದಾರೆ.
ಗುಜರಾತ್ ರೀತಿಯೇ ತೆಲಂಗಾಣ...
ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ ಅವರು, ಗುಜರಾತ್ ರೀತಿಯೇ ತೆಲಂಗಾಣ ರಾಜ್ಯವನ್ನೂ ಅಭಿವೃದ್ಧಿ ಮಾಡೋದಕ್ಕೆ ಸಹಕಾರ ನೀಡುವಂತೆ ಪ್ರಧಾನಿ ಅವರ ಬಳಿ ಒತ್ತಾಯ ಮಾಡಿದರು. ಹಾಗೆಯೇ ತೆಲಂಗಾಣ ರಾಜಧಾನಿ ಹೈದರಾಬಾದ್, ದೇಶದ 5ನೇ ಅತಿದೊಡ್ಡ ನಗರ. ದೇಶದ ಆರ್ಥಿಕತೆ 5 ಶತಕೋಟಿ ಡಾಲರ್ಗೆ ಕೊಂಡೊಯ್ಯುವ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಗೆ ಕೊಡುಗೆ ನೀಡಲಿದೆ, ಅಂತಾ ಹೇಳಿದರು. ಈ ಮೂಲಕ ಹೈದರಾಬಾದ್ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಬೇಕು ಎಂಬುದನ್ನ ರೇವಂತ್ ರೆಡ್ಡಿ ಪ್ರಧಾನಿ ಮೋದಿ ಅವರಿಗೆ ಇದೇ ವೇಳೆ ತಿಳಿಸಿದರು.
ನಿಮ್ಮ ಬೆಂಬಲ ಇದ್ದರೆ ಅಭಿವೃದ್ಧಿ!
ಹಾಗೇ ತಮ್ಮ ಮಾತು ಮುಂದುವರಿಸಿದ ರೇವಂತ್ ರೆಡ್ಡಿ ಅವರು, 'ನರೇಂದ್ರ ಮೋದಿ ಅವರೇ ನನ್ನ ಪ್ರಕಾರ ಪ್ರಧಾನಿ ಎಂದರೆ ನಮ್ಮ ದೊಡ್ಡಣ್ಣ ಇದ್ದಂತೆ. ದೊಡ್ಡಣ್ಣನ ಬೆಂಬಲ ಇದ್ದರೆ ಮಾತ್ರ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಅಭಿವೃದ್ಧಿ ಮುಂದುವರಿಸಲು ಸಾಧ್ಯ. ಹೀಗಾಗಿಯೆ ಗುಜರಾತ್ ರೀತಿ ತೆಲಂಗಾಣ ಅಭಿವೃದ್ಧಿ ಆಗಬೇಕಾದರೆ ನಿಮ್ಮ ಬೆಂಬಲ ಅಗತ್ಯ' ಎಂದಿದ್ದಾರೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ.

ಇನ್ನು ಹೀಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಮನವಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತವಾಗಿ ಸ್ಪಂದಿಸಿದರು. ಹಾಗೂ ಎನ್ಡಿಎ ಸರ್ಕಾರ & ತೆಲಂಗಾಣ ರಾಜ್ಯ - ಎರಡೂ ಹತ್ತು ವರ್ಷ ಪೂರೈಸಿವೆ. ಜನರ ಕನಸನ್ನು ಈಡೇರಿಸಲು ಸಾಧ್ಯ ಇರುವ ಎಲ್ಲಾ ನೆರವು ಕೇಂದ್ರ ಸರ್ಕಾರ ನೀಡುತ್ತೆ ಎಂದರು ಪ್ರಧಾನಿ ಮೋದಿ. ಈ ಮೂಲಕ ಬೆಂಬಲ ತೆಲಂಗಾಣ ಸಿಎಂ, ತಮ್ಮ ಮೊದಲ ಮಾತಲ್ಲೇ ಪ್ರಧಾನಿ ಮೋದಿ ಅವರಿಗೆ ಹತ್ತಿರವಾಗಿದ್ದಾರೆ.












Click it and Unblock the Notifications