ಓಣಂ ದಾಖಲೆಯನ್ನು ಬದಿಗೊತ್ತಿ ಗಿನ್ನೆಸ್ ದಾಖಲೆ: ಏನಿದು 'ಬತುಕಮ್ಮ' ಹಬ್ಬ
ತೆಲಂಗಾಣ ರಾಜ್ಯದಲ್ಲಿ ಆಚರಿಸಲಾಗುವ ಬತುಕಮ್ಮ ಹಬ್ಬ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಹೈದಾರಾಬಾದಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ 9,292 ಮಹಿಳೆಯರು ಈ ಹಬ್ಬದಲ್ಲಿ ಭಾಗವಹಿಸಿ ಹೊಸ ದಾಖಲೆ ಬರೆದಿದ್ದಾರೆ.
ಶನಿವಾರ (ಅ 8) ನಡೆದ ವರ್ಣರಂಜಿತ ಹಬ್ಬದಾಚರಣೆಯಲ್ಲಿ ಮಹಿಳೆಯರು ಹೂವಿನಲಂಕಾರದ ಜೊತೆಗೆ ಗಾಯನ ಹಾಗೂ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. (ವಾರಂಗಲ್ ಭದ್ರಕಾಳಿಗೆ 3 ಕೋಟಿ ರು ಮೌಲ್ಯದ ಚಿನ್ನದ ಕಿರೀಟ)
ಸರ್ವಪಿತೃ ಅಮವಾಸ್ಯೆಯ ನಂತರ ಆಚರಿಸಲಾಗುವ ಈ ಹಬ್ಬದಲ್ಲಿ, ಮಣ್ಣಿನಿಂದ ಮಾಡಿದ ದುರ್ಗೆಯನ್ನು ಪೂಜಿಸಿ, ಹೂಗಳಿಂದ ಅಲಂಕಾರ ಮಾಡಿ ನಂತರ ವಿಸರ್ಜಿಸಲಾಗುತ್ತದೆ.
ಕಳೆದ ವರ್ಷ ಅಂದರೆ 2015ರಲ್ಲಿ ಕೇರಳದಲ್ಲಿ ಏರ್ಪಡಿಸಲಾಗಿದ್ದ ಓಣಂ ನೃತ್ಯ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಈಗ ಬತುಕಮ್ಮ ಹಬ್ಬ ಈ ದಾಖಲೆಯನ್ನು ಮುರಿದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ.
ನವರಾತ್ರಿಯ ದುರ್ಗಾಷ್ಠಮಿಯ ಮುನ್ನಾ ದಿನ ಹೈದರಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ತೆಲಂಗಾಣದ ಗೃಹ ಸಚಿವ ನರಸಿಂಹ ರೆಡ್ಡಿ, ಪ್ರವಾಸೋದ್ಯಮ ಸಚಿವ ನರಸಿಂಹ ಲಾಲ್ ಸೇರಿದಂತೆ ಗಣ್ಯರ ದಂಡೇ ಹಾಜರಾಗಿತ್ತು.
ಸಾವಿರಾರು ವರ್ಷಗಳ ಇತಿಹಾಸವಿರುವ ಬತುಕಮ್ಮ ಹಬ್ಬದ ಬಗ್ಗೆ ಇತಿಹಾಸ ಏನು ಹೇಳುತ್ತದೆ, ಮುಂದೆ ಓದಿ (ಮಾಹಿತಿ: ತೆಲಂಗಾಣ ಟೂರಿಸಂ, ಲೇಖನಕ್ಕೆ ಹಬ್ಬದಾಚರಣೆಯ ಫೋಟೋ ಬಳಸಿಕೊಳ್ಳಲಾಗಿದೆ)

ಧರ್ಮಾಂಗಧ ಮತ್ತು ಸತ್ಯವತಿ ದಂಪತಿ
ಇತಿಹಾಸ ತಜ್ಞರ ಪ್ರಕಾರ ದಕ್ಷಿಣ ಭಾರತದಲ್ಲಿ ಆದಿಪತ್ಯ ಸ್ಥಾಪಿಸಿದ್ದ ಚೋಳ ಸಾಮ್ರಾಜ್ಯದ ದೊರೆ ಧರ್ಮಾಂಗಧ ಮತ್ತು ಸತ್ಯವತಿ ದಂಪತಿಗಳು ಹಲವು ವರ್ಷಗಳ ಪೂಜೆ, ಪುನಸ್ಕಾರದ ನಂತರ ಹೆಣ್ಣು ಮಗುವಿನ ತಂದೆಯಾಗುತ್ತಾರೆ.

ಹೆಣ್ಣು ಮಗುವಿಗಾಗಿ ದೇವಿಯಲ್ಲಿ ಮೊರೆ
ಯುದ್ದದಲ್ಲಿ ತನ್ನ ನೂರಾರು ಗಂಡು ಮಗುವನ್ನು ಕಳೆದುಕೊಂಡಿದ್ದ ಈ ದಂಪತಿಗಳು ಹೆಣ್ಣು ಮಗುವಿಗಾಗಿ ದೇವಿಯಲ್ಲಿ ಮೊರೆಯಿಡುತ್ತಾರೆ. ಹೆಣ್ಣು ಮಗು ದೊಡ್ಡವಳಾಗುವ ತನಕ ಹಲವು ಕಷ್ಟಕರ್ಪಾಣ್ಯವನ್ನು ಎದುರಿಸುತ್ತಿರುತ್ತಾರೆ.

ಮರುನಾಮಕರಣ
ಈ ಸಮಯದಲ್ಲಿ ಮಗುವಿಗೆ ಇಟ್ಟಿದ್ದ ಲಕ್ಷ್ಮಿ ಎನ್ನುವ ಹೆಸರನ್ನು ಬತುಕಮ್ಮ ಎಂದು ಮರುನಾಮಕರಣ ಮಾಡುತ್ತಾರೆ. ಅಂದಿನಿಂದ ಈ ಬತುಕಮ್ಮ ಹಬ್ಬವನ್ನು ಆಚರಿಸಲಾಗುತ್ತದೆ. ಮಹಿಳೆಯರೇ ಆಚರಿಸುವ ಈ ಹಬ್ಬದಲ್ಲಿ ಮದುವೆಯ ಹೊಸ್ತಿಲಲ್ಲಿರುವ ಹೆಣ್ಣು ಮಕ್ಕಳು ಮತ್ತು ಹೆಂಗಸರು ಈ ಹಬ್ಬದಲ್ಲಿ ಭಾಗವಹಿಸುವುದು ವಾಡಿಕೆ.

ದೇವತೆಗಳ, ಮುನಿಗಳ ಪ್ರಾರ್ಥನೆ
ಇನ್ನೊಂದು ಇತಿಹಾಸದ ಪ್ರಕಾರ ಮಹಿಷಾಸುರ ಎನ್ನುವ ರಾಕ್ಷಸನನ್ನು ದೇವಿ ಸಂಹಾರ ಮಾಡಿದ ನಂತರ ದೀರ್ಘ ನಿದ್ದೆಗೆ ಶರಣಾಗುತ್ತಾಳೆ. ದೇವತೆಗಳ, ಮುನಿಗಳ ಪ್ರಾರ್ಥನೆಯ ನಂತರ ದಶಮಿಯ ದಿನದಂದು ದೇವಿ ನಿದ್ದೆಯಿಂದ ಏಳುತ್ತಾಳೆ. ಅದಕ್ಕಾಗಿ ಈ ಬತುಕಮ್ಮ ಹಬ್ಬವನ್ನು ಆಚರಿಸಲಾಗುತ್ತದೆ.

ಅರಸಿನ ಅಥವಾ ಮಣ್ಣಿನಿಂದ ದೇವಿಯ ಪ್ರತಿಮೆ
ಮತ್ತೊಂದು ಇತಿಹಾಸದ ಪ್ರಕಾರ ಬತುಕಮ್ಮ ಅಥವಾ ಪಾರ್ವತಿ ದೇವಿಗೆ ಹೂವಂದರೆ ಪಂಚಪ್ರಾಣ. ಹಾಗಾಗಿ, ಮರದಿಂದ ಗೋಪುರಾಕಾರವಾಗಿ ತಯಾರಿಸಿ, ಅರಸಿನ ಅಥವಾ ಮಣ್ಣಿನಿಂದ ದೇವಿಯ ಪ್ರತಿಮೆಯನ್ನು ಮಾಡಿ ಹೂವಿನಿಂದ ಅಲಂಕಾರ ಮಾಡಿ ತಮ್ಮ ಕೋರಿಕೆಗಳನ್ನು ಈಡೇರಿಸಲು ದೇವಿಯ ಮೊರೆ ಹೋಗುವುದೂ ಈ ಹಬ್ಬ ನಡೆದುಕೊಂಡು ಬಂದ ಸಂಪ್ರದಾಯ.

ವರ್ಷಗಳಿಂದ ಆಚರಿಸಲಾಗುತ್ತಿರುವ ಹಬ್ಬ
ಒಟ್ಟಿನಲ್ಲಿ, ಒಳ್ಳೆ ಗಂಡ ಸಿಗಲಿಯೆಂದು ಹೆಣ್ಣುಮಕ್ಕಳು, ಸಂಸಾರಸ್ಥ ಹೆಂಗಸರು ಕುಟುಂಬದ ಮೇಲೆ ತಾಯಿಯ ಕರುಣೆ ಇರಲಿ ಎಂದು ಮಹಾಲಯ ಅಮವಾಸ್ಯೆಯ ನಂತರ ಆರಂಭವಾಗುವ ಈ ಹಬ್ಬದಲ್ಲಿ ದೇವಿಯನ್ನು ಪೂಜಿಸಿಕೊಂಡು ಬರುತ್ತಿರುವುದು ಸಂಪ್ರದಾಯ.












Click it and Unblock the Notifications