ಏರ್ಪೋರ್ಟಲ್ಲಿ ಗದ್ದಲವೆಬ್ಬಿಸಿದ ಟಿಡಿಪಿ ಸಂಸದನಿಗೆ ತಕ್ಕ ಶಾಸ್ತಿ
ವಿಶಾಖಪಟ್ಟಣಂ, ಜೂನ್ 16: ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಗುರುವಾರ ಗದ್ದಲವೆಬ್ಬಿಸಿದ್ದ ತೆಲುಗು ದೇಶಂ ಪಕ್ಷ (ಟಿಡಿಪಿ) ದ ಸಂಸದ ಜೆಸಿ ದಿವಾಕರ್ ರೆಡ್ಡಿಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ಬುದ್ದಿ ಕಲಿಸಲು ಹೊರಟಿವೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಅವರಿಗೆ 'ಪ್ರಯಾಣ ನಿಷೇಧ' ಹೇರಿವೆ
ಗುರುವಾರ ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದ ದಿವಾಕರ್ ರೆಡ್ಡಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಬೋರ್ಡಿಂಗ್ ಪಾಸ್ ನೀಡಿರಲಿಲ್ಲ. ಇದರಿಂದ ದಿವಾಕರ್ ರೆಡ್ಡಿ ವಿಮಾನ ನಿಲ್ದಾಣದಲ್ಲೇ ಗದ್ದಲವೆಬ್ಬಿಸಿದ್ದರು. ಇದಾದ ನಂತರ ತಮ್ಮ ವರ್ತನೆಗೆ ಕ್ಷಮೆ ಕೇಳಲು ಸಂಸದರು ನಿರಾಕರಿಸಿದ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣ ನಿಷೇಧ ಹೇರಿವೆ.
ಈ ಕುರಿತು ಟ್ವೀಟ್ ಮಾಡಿರುವ ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, "ನಾನು ವೈಜಾಗ್ ವಿಮಾನ ನಿಲ್ದಾಣದಲ್ಲಿ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ಪಡೆಯಲಿದ್ದೇನೆ. ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಿದ್ದೇನೆ," ಎಂದು ಹೇಳಿದ್ದಾರೆ.
#CCTVVisuals: TDP MP JC Diwakar Reddy created ruckus at Visakhapatnam airport today,allegedly raged against staff using aggressive behaviour pic.twitter.com/JqUtcyKq0e
— ANI (@ANI_news) June 15, 2017
ಈ ಹಿಂದೆ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪ್ರಯಾಣ ನಿಷೇಧಕ್ಕೆ ಗುರಿಯಾಗಿದ್ದರು. ನಂತರ ಅವರು ಕ್ಷಮೆ ಕೇಳಿದ ಹಿನ್ನಲೆಯಲ್ಲಿ ಪ್ರಯಾಣ ನಿಷೇಧ ಹಿಂಪಡೆಯಲಾಗಿತ್ತು. ಇದೀಗ ಗದ್ದಲವೆಬ್ಬಿಸಿ ಪ್ರಯಾಣ ನಿಷೇಧಕ್ಕೆ ಗುರಿಯಾದ ಎರಡನೇ ಸಂಸದರಾಗಿ ದಿವಾಕರ್ ರೆಡ್ಡಿ ಗುರುತಿಸಿಕೊಂಡದ್ದಾರೆ.
ಆದರೆ ತಮ್ಮ ನಡವಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿರುವ ರೆಡ್ಡಿ, "ನಾನು ಯಾರ ಮೇಲೂ ದೌರ್ಜನ್ಯ ನಡೆಸಿಲ್ಲ. ನಾನು ಯಾರಿಗೂ ಹೊಡೆದಿಲ್ಲ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಹೀಗಾಗಿ ಅವರ ಮೇಲೆ ದೇಶದ 6 ವಿಮಾನಯಾನ ಸಂಸ್ಥೆಗಳು ಪ್ರಯಾಣ ನಿಷೇಧ ಹೇರಿವೆ.