ಅಧಿಕಾರದಲ್ಲಿದ್ದರೇನು, ತಮಿಳುನಾಡಿನಲ್ಲಿ ಬಿಜೆಪಿಯನ್ನು ಕೇಳುವವರೇ ಇಲ್ಲ
ಕರ್ನಾಟಕ ಹೊರತು ಪಡಿಸಿ ಹಿಂದಿಯೇತರ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಅಷ್ಟಕಷ್ಟೇ ಎನ್ನುವ ರಾಜಕೀಯ ಲೆಕ್ಕಾಚಾರ ಮುಂಬರುವ ತಮಿಳುನಾಡು ಅಸೆಂಬ್ಲಿ ಚುನಾವಣಾ ಆಖಾಡದಲ್ಲೂ ಮುಂದುವರಿಯುವ ಸಾಧ್ಯತೆ ಬಹುತೇಕ ಖಚಿತವಾಗಿರುವುದರಿಂದ, ಪಕ್ಷ ಅಲ್ಲಿ ತೀವ್ರ ಹಿನ್ನಡೆ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೇನು, ಪ್ರಧಾನಿ ಮೋದಿ ಎಷ್ಟೇ ಪ್ರಭಾವಿ ಮುಖಂಡರಾಗಿದ್ದರೂ, ಬಿಜೆಪಿಯನ್ನು ತಮಿಳುನಾಡಿನಲ್ಲಿ ಕೇಳುವವರೇ ಇಲ್ಲದಂತಾಗಿರುವುದು ಸದ್ಯದ ವಾಸ್ತವತೆ.
ಬಿಜೆಪಿ ಜೊತೆಗೆ ಯಾವುದೇ ದ್ರಾವಿಡ ಪಕ್ಷಗಳಿಗೆ ಹೊಂದಾಣಿಕೆ ಬೇಕಾಗಿಲ್ಲ ಎನ್ನುವ ಪರಿಸ್ಥಿತಿ ಹೆಚ್ಚುಕಮ್ಮಿ ಅಂತಿಮವಾಗಿರುವುದರಿಂದ ಪಕ್ಷಕ್ಕೆ ಈಗ ಏಕಾಂಗಿಯಾಗಿ ಸ್ಪರ್ಧಿಸದೇ ಬೇರೆ ದಾರಿಯಿಲ್ಲದಂತಾಗಿದೆ. (ಜಯಾ ಪ್ರಕರಣ, 76 ಸಾಕ್ಷಿಗಳು ಉಲ್ಟಾ)
ಎಐಡಿಎಂಕೆ ಜೊತೆ ಹೊಂದಾಣಿಕೆ ಇನ್ನೇನು ಅಂತಿಮ ಆಯಿತು ಎನ್ನುವಷ್ಟರಲ್ಲಿ, ಸೆಲ್ವಿ ಜಯಲಲಿತಾ, ಮೋದಿ ಮತ್ತು ಶಾ ಅವರ ಮಧ್ಯಸ್ಥಿತಿಕೆಯ ನಂತರವೂ ಮೈತ್ರಿಗೆ ಮನಸ್ಸು ಮಾಡದೇ ಇರುವುದು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ.
ಈ ನಡುವೆ ಬಿಜೆಪಿ, ಭಾನುವಾರ (ಮಾ 27) ತಮಿಳುನಾಡು ಚುನಾವಣೆಗೆ ತನ್ನ ಮೊದಲ ಐವತ್ತು ಸ್ಪರ್ಧಿಗಳ ಪಟ್ಟಿಯನ್ನು ಪ್ರಕಟಿಸಿದೆ. ತಮಿಳುನಾಡು ರಾಜಕೀಯದಲ್ಲಿ ಕೇಳಿದ ಕೆಲವೊಂದು ಹೆಸರುಗಳು ಪಕ್ಷದ ಮೊದಲ ಪಟ್ಟಿಯಲ್ಲಿದೆ. (ಶವದ ಮಾಂಸ ತಿಂದ ಅರ್ಚಕ)
234 ಸದಸ್ಯರನ್ನು ಹೊಂದಿರುವ ತಮಿಳುನಾಡು ಅಸೆಂಬ್ಲಿ ಚುನಾವಣೆ ಮೇ 16ರಂದು ನಡೆಯಲಿದ್ದು, ಮೇ 19ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಗೆ ಕೈಕೊಟ್ಟ 'ಅಮ್ಮ'ಸ್ಲೈಡಿನಲ್ಲಿ ಓದಿ..
ಕಳೆದ ಚುನಾವಣೆಯಲ್ಲೂ ಏಕಾಂಗಿ
ಸ್ಥಳೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಕಳೆದ ಚುನಾವಣೆಯಲ್ಲೂ ವಿಫಲವಾಗಿದ್ದ ಬಿಜೆಪಿಯ ಪರಿಸ್ಥಿತಿ, ಈ ಬಾರಿಯೂ ಮುಂದುವರಿದಿದೆ. 2011ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಒಂದು ಸ್ಥಾನ ಗೆಲ್ಲಲೂ ವಿಫಲವಾಗಿತ್ತು. ಪಕ್ಷಕ್ಕೆ ಒಟ್ಟಾರೆಯಾಗಿ ಶೇ. 2.6 ಮತಗಳಷ್ಟೇ ಬಿದ್ದಿದ್ದವು.
ಹೊಂದಾಣಿಕೆಗೆ ನೋ ಎಂದ ಜಯಾ
ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರವೂ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕೊಂಚ ಉತ್ಸಾಹ ತೋರಿದ್ದ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಸಿಎಂ ಜಯಲಲಿತಾ, ಬದಲಾದ ರಾಜಕೀಯ ಲೆಕ್ಕಾಚಾರ, ಹೆಚ್ಚುತ್ತಿರುವ ಡಿಎಂಕೆ ಜನಪ್ರಿಯತೆ, ವಿಜಯಕಾಂತ್ ಫ್ಯಾಕ್ಟರ್ ಎಲ್ಲವನ್ನೂ ತೂಗಿ ಅಳೆದು ಲೆಕ್ಕಹಾಕಿ ಬಿಜೆಪಿ ಜೊತೆ ಮೈತ್ರಿಗೆ 'ನೋ' ಎಂದಿದ್ದಾರೆ.
ಮೋದಿ ಪ್ರಮಾಣವಚನಕ್ಕೆ ಬಂದಿದ್ದ ಕ್ಯಾಪ್ಟನ್
ಸಾಂಪ್ರದಾಯಿಕ ಉಡುಗೆಯಲ್ಲಿ ಪತ್ನಿ ಸಮೇತ ಮೋದಿ ಪ್ರಮಾಣವಚನ ಸ್ವೀಕರಿಸಲು ಬಂದಿದ್ದ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಕೂಡಾ ಬಿಜೆಪಿ ಜೊತೆ ಮೈತ್ರಿಗೆ ಉತ್ಸಾಹ ತೋರಲೇ ಇಲ್ಲ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಚೆನ್ನೈಗೆ ದೌಡಾಯಿಸಿ ವಿಜಯಕಾಂತ್ ಮನವೊಲಿಸುವ ಪ್ರಯತ್ನವೂ ವರ್ಕೌಟ್ ಆಗಿಲ್ಲ.
ಪಿಎಂಕೆ ಹಿಂದೆ ಬಿದ್ದಿರುವ ಬಿಜೆಪಿ
ತಮಿಳುನಾಡು ರಾಜಕೀಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರದ ಪಕ್ಷವೆಂದರೆ ಅದು ರಾಮದಾಸ್ ನೇತೃತ್ವದ ಪಿಎಂಕೆ. ಅಪ್ಪ ಮಗನ ಪಕ್ಷವೆಂದೇ (ರಾಮದಾಸ್, ಅನ್ಬುಮಣಿ) ಬಿಂಬಿತವಾಗಿರುವ ಪಿಎಂಕೆ ಜೊತೆ ಮೈತ್ರಿಗೆ ದಂಬಾಲು ಬಿದ್ದಿರುವ ಬಿಜೆಪಿಗೆ ಇಲ್ಲೂ ನಿರೀಕ್ಷಿತ ಫಲಿತಾಂಶ ಸಿಗುವುದು ಬಹುತೇಕ ಡೌಟು.
ರಾಜಕೀಯ ಪಂಡಿತರ ಪ್ರಕಾರ
ಮೋದಿ ಕೇಂದ್ರದಲ್ಲಿ ಸಮರ್ಥ ನಾಯಕ ಎನ್ನುವುದನ್ನು ತಮಿಳುನಾಡಿನ ಜನತೆ ಒಪ್ಪಿಕೊಂಡಿದ್ದರೂ, 2011 ಮತ್ತು ಈಗಿನ ಚುನಾವಣೆಯ ಚಿತ್ರಣದಲ್ಲಿ ಬಿಜೆಪಿಗೆ ಲಾಭವಾಗುವ ಅಂಶಗಳು ಯಾವುದೂ ಇಲ್ಲ. ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದರೆ, ಮತ್ತೊಮ್ಮೆ ಮುಖಭಂಗ ನಿಶ್ಚಿತ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.