Krishnagiri Bull Race:: ಗೂಳಿ ಓಟಕ್ಕೆ ಜಿಲ್ಲಾಧಿಕಾರಿಗಳಿಂದ ತಡೆ: ಚೆನ್ನೈ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ
ತಮಿಳುನಾಡಿನ ಕೃಷ್ಣಗಿರಿಯಲ್ಲಿ ಗೂಳಿ ಓಟಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದ್ದಕ್ಕೆ ಗ್ರಾಮಸ್ಥರು ಚೆನ್ನೈ-ಬೆಂಗಳೂರು ಹೆದ್ದಾರಿ ತಡೆದು ಅಸಮಧಾನ ಹೊರಹಾಕಿದ್ದಾರೆ.
ಚೆನ್ನೈ ಫೆಬ್ರವರಿ 2: ಗೂಳಿ ಓಟಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೃಷ್ಣಗಿರಿಯಲ್ಲಿ ನೂರಾರು ಗ್ರಾಮಸ್ಥರು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.
ಕೃಷ್ಣಗಿರಿ ಜಿಲ್ಲಾಡಳಿತ 'ಎರುತು ಬಿದಂ ತಿರುವಿಝಾ' (eruthu vidum thiruvizha) ಕ್ರೀಡೆಗೆ ಅನುಮತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗುರುವಾರ ನೂರಾರು ಗ್ರಾಮಸ್ಥರು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಬಸ್ಗಳು ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಜೊತೆಗೆ ವಾಹನಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು.
ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿಯ ಗೋಪಸಂದರಂ ಪ್ರದೇಶದಲ್ಲಿ ಸುಗ್ಗಿಯ ಕಾಲವನ್ನು ಗುರುತಿಸಲು ಗೂಳಿ ಓಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮದ ದಿನ ಪೊಲೀಸರು ಗೂಳಿ ಪಳಗಿಸುವ ಕಾರ್ಯಕ್ರಮ ನಡೆಸದಂತೆ ಸಂಘಟಕರನ್ನು ತಡೆದರು. ಉತ್ಸವಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ಆಯೋಜಕರಿಗೆ ತಿಳಿಸಿದ್ದರು.
ಪೊಲೀಸರ ಹೇಳಿಕೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಕೂಡಲೇ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದರು. ಗಲಾಟೆಯಲ್ಲಿ ನಾಲ್ಕು ಸರ್ಕಾರಿ ಬಸ್ಗಳು ಮತ್ತು ಪೊಲೀಸ್ ವಾಹನವನ್ನು ಪ್ರತಿಭಟನಾಕಾರರು ಜಖಂಗೊಳಿಸಿದ್ದಾರೆ.
ಪ್ರತಿಭಟನೆಯಿಂದ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಪೊಲೀಸರು ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರವೂ ಪ್ರತಿಭಟನಾಕಾರರು ಸ್ಥಳದಿಂದ ಹಿಂತಿರುಗಲು ನಿರಾಕರಿಸಿದರು.
ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಜಲಫಿರಂಗಿ ಪ್ರಹಾರ ನಡೆಸಿದರು. ಗುಂಪನ್ನು ಚದುರಿಸಲು ಅವರು ಅಶ್ರುವಾಯು ಬಾಂಬ್ಗಳನ್ನು ಸಹ ಬಳಸಿದರು. ನಂತರ ಪೊಲೀಸರು ಆ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಪ್ರದೇಶದಲ್ಲಿ ನಿಧಾನವಾಗಿ ಸಹಜ ಸ್ಥಿತಿ ಕೂಡ ಮರಳುತ್ತಿದೆ. ಜೊತೆಗೆ ಕೃಷ್ಣಗಿರಿ ಜಿಲ್ಲಾಧಿಕಾರಿಗಳು 'ಎರುತು ಬಿದಂ ತಿರುವಿಝಾ' ನಡೆಸಲು ಒಪ್ಪಿಗೆ ನೀಡಿದರು.