Tamil Nadu: ನಕಲಿ ಮದ್ಯ ಸೇವಿಸಿ 10 ಜನ ಸಾವು, ಹಲವರಿಗೆ ಚಿಕಿತ್ಸೆ!
ಚೆನ್ನೈ ಮೇ 15: ತಮಿಳುನಾಡಿನ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಬಳಿಯ ಎಕ್ಕಿಯಾರ್ಕುಪ್ಪಂನ ಆರು ಜನರು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಜೊತೆಗೆ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಂನಲ್ಲಿ ಶುಕ್ರವಾರ ಇಬ್ಬರು ವ್ಯಕ್ತಿಗಳು ಮತ್ತು ಭಾನುವಾರ ದಂಪತಿಗಳು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಸಾವುಗಳು ಅಕ್ರಮ ಮದ್ಯ ಸೇವನೆಯಿಂದ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರು ಆರೋಗ್ಯವಾಗಿರುವುದು ತಿಳಿದು ಬಂದಿದೆ.

ಇಬ್ಬರು ಆರೋಪಿಗಳ ಬಂಧನ
ಈ ಘಟನೆ ಬಳಿಕ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ಶಂಕಿತರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿ ಕಣ್ಣನ್, ಇನ್ಸ್ಪೆಕ್ಟರ್ಗಳು ಮತ್ತು ಸಬ್ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು ಏಳು ಪೊಲೀಸರ ವಿಚಾರಣೆ ನಡೆಸಿದ್ದಾರೆ.
ಎಂಕೆ ಸ್ಟಾಲಿನ್ ಪರಿಹಾರ ಘೋಷಣೆ
ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ
ಘಟನೆ ವರದಿಯಾದ ನಂತರ ಪೊಲೀಸ್ ಮಹಾನಿರ್ದೇಶಕ (ಉತ್ತರ) ಎನ್ ಕಣ್ಣನ್ ಅವರು ಸರಿಯಾದ ಕ್ರಮಗಳಿಗೆ ಭರವಸೆ ನೀಡಿದರು. ಎಲ್ಲಾ 10 ಸಂತ್ರಸ್ತರು ಬಹುಶಃ ಎಥೆನಾಲ್-ಮೆಥೆನಾಲ್ ಪದಾರ್ಥಗಳೊಂದಿಗೆ ನಕಲಿ ಮದ್ಯವನ್ನು ಸೇವಿಸಿದ್ದಾರೆ ಎಂದು ಹೇಳಿದರು.
ತಮಿಳುನಾಡಿನ ಉತ್ತರ ವಲಯದಲ್ಲಿ ನಕಲಿ ಮದ್ಯದ ಸಾವಿನ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ ಮತ್ತು ಎರಡು ಘಟನೆಗಳ ನಡುವಿನ ಸಂಬಂಧದ ಬಗ್ಗೆ ಯಾವುದೇ ಪುರಾವೆಗಳು ಪೊಲೀಸರಿಗೆ ಸಿಕ್ಕಿಲ್ಲ. ಆದರೆ ಯಾವುದೇ ಸಂಭವನೀಯ ಲಿಂಕ್ಗಳನ್ನು ಕಂಡುಹಿಡಿಯಲು ಎರಡೂ ಘಟನೆಗಳ ನಡುವೆ ಪೊಲೀಸರು ಬೇರೆ ಬೇರೆ ಕೋನದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

"ಎರಡು ನಕಲಿ ಮದ್ಯದ ಘಟನೆಗಳು ವರದಿಯಾಗಿವೆ. ಒಂದು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮತ್ತು ಇನ್ನೊಂದು ವಿಲ್ಲುಪುರಂ ಜಿಲ್ಲೆಯಲ್ಲಿ. ಮರಕ್ಕನಂ ಬಳಿಯ ವಿಲ್ಲುಪುರಂ ಜಿಲ್ಲೆಯ ಎಕ್ಕಿಯಾರ್ಕುಪ್ಪಂ ಗ್ರಾಮದಲ್ಲಿ ನಿನ್ನೆ 6 ಮಂದಿ ವಾಂತಿ, ಕಣ್ಣಿನ ಉರಿ ಮತ್ತು ತಲೆತಿರುಗುವಿಕೆಯ ದೂರುಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಪೊಲೀಸ್ ತಂಡ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದೆ. ಇದರಲ್ಲಿ ಆರು ಜನ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ. 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ'' ಎಂದು ಐಜಿ ತಿಳಿಸಿದ್ದಾರೆ.
ಚೆಂಗಲ್ಪಟ್ಟು ಜಿಲ್ಲೆಯಲ್ಲಿ 4 ಜನರು ಸಾವನ್ನಪ್ಪಿದ ಎರಡನೇ ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಐಜಿ ಎನ್ ಕಣ್ಣನ್, " ಚೆಂಗಲ್ಪಟ್ಟು ಜಿಲ್ಲೆಯ ಚಿತ್ತಮೂರಿನಲ್ಲಿ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪದ್ದಾರೆ. ಆರಂಭದಲ್ಲಿ ಇದು ಕೌಟುಂಬಿಕ ಕಲಹದ ಕಾರಣದಿಂದ ಆತ್ಮಹತ್ಯೆಯ ಪ್ರಯತ್ನ ಎಂದು ನಾವು ಭಾವಿಸಿದ್ದೇವು. ಆದರೆ ಅವರ ರೋಗಲಕ್ಷಣವನ್ನು ನೋಡಿದ ನಂತರ ನಾವು ಇದು ನಕಲಿ ಮದ್ಯದ ಘಟನೆ ಎಂದು ಶಂಕಿಸಿದ್ದೇವೆ'' ಎಂದು ಅವರು ಹೇಳಿದರು.












Click it and Unblock the Notifications