ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ತಾಯಿ!
ಚೆನ್ನೈ, ನವೆಂಬರ್ 24: ಭಾರತದಲ್ಲಿ 21ನೇ ಶತಮಾನದಲ್ಲೂ ಮರ್ಯಾದಾ ಹತ್ಯೆಗಳು ನಿಲ್ಲುತ್ತಿಲ್ಲ. ಪ್ರೀತಿಸಿ ಮನೆಯ ಹೊಸ್ತಿಲು ದಾಟುತ್ತಾಳೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಕತ್ತು ಸೀಳುವ ಘಟನೆಗಳು ಆಗಾಗ ವರದಿ ಆಗುತ್ತಲೇ ಇವೆ. ತಮಿಳುನಾಡು ಇದೀಗ ಅಂಥದ್ದೇ ಘೋರ ಘಟನೆಗೆ ಸಾಕ್ಷಿಯಾಗಿದೆ.
ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮಹಿಳೆಯೊಬ್ಬಳು ತನ್ನ 19 ವರ್ಷದ ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದ್ದಳು ಎಂಬ ಕಾರಣಕ್ಕೆ ಆಕೆಯ ಕತ್ತು ಸೀಳಿರುವ ಘಟನೆ ನಡೆದು ಹೋಗಿದೆ. ಮಗಳನ್ನು ಕೊಂದ ತಾಯಿ ಪಶ್ಚಾತ್ತಾಪವಾಗಿ ತಾನೂ ಸಹ ಆತ್ಮಹತ್ಯೆಗೆ ಮನಸ್ಸು ಮಾಡಿದ್ದು, ಅದೃಷ್ಟವಶಾತ್ ತಾಯಿ ಬಚಾವ್ ಆಗಿದ್ದಾಳೆ.
ಮರ್ಯಾದಾ ಹತ್ಯೆ ಶಂಕೆ: ಉದಯಪುರದಲ್ಲಿ ದಂಪತಿ ಕೊಲೆ
ಅನ್ಯಜಾತಿ ಯುವಕನನ್ನು ಪ್ರೀತಿಸಿದ ತಪ್ಪಿಗೋ, ಮಗಳ ಮೇಲೆ ತಾಯಿ ತೋರಿದ ಉಗ್ರ ಕೋಪಕ್ಕೋ ಇನ್ನೂ ಲೋಕದ ಅರಿವು ತಿಳಿಯದ 19ರ ಬಾಲೆ ಪ್ರಾಣ ಬಿಟ್ಟಿದ್ದಾಳೆ. ಆ ಮೂಲಕ ಪ್ರೇಮ ಕಥೆಯು ದುರಂತ ಅಂತ್ಯವನ್ನು ಕಂಡಿದೆ. ಪ್ರೀತಿ, ಪ್ರೇಮ ಎಂಬ ಹುಚ್ಚು ಕುದುರೆ ಬೆನ್ನೇರಿ ಹೊರಟ ಮಗಳನ್ನು ತಾಯಿಯೇ ಮಸಣ ಸೇರಿಸಿದ ದಾರುಣ ಘಟನೆಯ ಕುರಿತು ಮುಂದೆ ಓದಿ ತಿಳಿಯಿರಿ.
ಈ ಮರ್ಯಾದಾ ಹತ್ಯೆ ನಡೆದಿದ್ದು ಎಲ್ಲಿ?
ಸ್ವಂತ ಮಗಳನ್ನು ಹತ್ಯೆ ಮಾಡಿರುವ ಮಹಿಳೆಯನ್ನು ಆರುಮುಗ ಕಣಿ ಎಂದು ಗುರುತಿಸಲಾಗಿದೆ. ಸಿವಾಲ್ಪೇರಿ ಗ್ರಾಮದ ಆರುಮುಗ ಕಣಿ ಮತ್ತು ಪಿಚೈ ದಂಪತಿಗೆ ಜನಿಸಿದ ಮಗಳ ಹೆಸರೇ ಅರುಣಾ. ಈ ಅರುಣಾಳ ತಂದೆ ಚೆನ್ನೈನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ತಾಯಿ ಆರುಮುಗ ಕಣಿ, ತನ್ನ 19 ವರ್ಷದ ಮಗಳ ಮೇಲೆ ಕ್ರೌರ್ಯ ಮೆರೆದಿದ್ದಾರೆ.
ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದ್ದೇ ತಪ್ಪಾ?
ನರ್ಸಿಂಗ್ ಓದುತ್ತಿದ್ದ 19 ವರ್ಷದ ಮಗಳು ಅರುಣಾ, ತಾನು ಅನ್ಯ ಜಾತಿಯ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ತಾಯಿ ಬಳಿ ಒಪ್ಪಿಕೊಂಡಿದ್ದಳು. ತೇವರ್ ಸಮುದಾಯದವಳಾಗಿದ್ದ ಅರುಣಾ, ನಾಡಾರ್ ಸಮುದಾಯದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಈ ವಿಷಯಕ್ಕಾಗಿ ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿತ್ತು. ಮಗಳ ಪ್ರೀತಿಗೆ ತಾಯಿ ಸುತಾರಾಂ ಒಪ್ಪಿಗೆ ನೀಡಿರಲಿಲ್ಲ. ಅದಾಗ್ಯೂ, ಮಗಳು ತಾಯಿಯ ಮಾತು ಕೇಳುವ ಮನಸ್ಥಿತಿಯಲ್ಲೂ ಇರಲಿಲ್ಲ.
ತನ್ನ ಮಗಳನ್ನು ತವರು ಮನೆಗೆ ಕರೆ ತಂದಿದ್ದ ಆರುಮುಗ ಕಣಿ
ಮಗಳ ಪ್ರೀತಿಯ ವಿಷಯದಿಂದ ನೊಂದಿದ್ದ ತಾಯಿ, ಇದೇ ವಿಚಾರ ಮಾತನಾಡುವ ನೆಪದಲ್ಲಿ ಮಗಳನ್ನು ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಳು. ಅರುಣಾ ಮನೆಗೆ ಹೋದಾಗ ಆಘಾತಕಾರಿ ಅಂಶವೊಂದು ಗೊತ್ತಾಗಿದೆ. ತನ್ನ ತಾಯಿ ತನಗಾಗಿ ತಮ್ಮ ಜಾತಿಯೊಳಗೆ ಸಂಬಂಧವೊಂದನ್ನು ನೋಡಿರುವುದು ಗೊತ್ತಾಗಿದೆ. ಕಳೆದ ನವೆಂಬರ್ 23ರ ಬುಧವಾರದಂದು ವರನ ಕುಟುಂಬದವರು ಆರುಮುಗ ಕಣಿಯ ಮನೆಗೆ ಭೇಟಿ ನೀಡಲು ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದರು. ಅಲ್ಲಿಂದ ತಾಯಿ-ಮಗಳ ನಡುವೆ ಕಿತ್ತಾಟ ಶುರುವಾಯಿತು.
ತಾಯಿಯೇ ಮಗಳ ಕತ್ತು ಸೀಳಲು ಕಾರಣವಾದ ಅದೊಂದು ಮಾತು!
ಮಗಳಿಗಾಗಿ ಗಂಡು ನೋಡಿದ್ದ ತಾಯಿ ಅಂದುಕೊಂಡಂತೆ ಆಗಿದ್ದರೆ ನವೆಂಬರ್ 23ರಂದು ಗಂಡಿನ ಕಡೆಯವರು ಮನೆಗೆ ಬರಬೇಕಾಗಿತ್ತು. ಆದರೆ ಅರುಣಾ ಹಠಮಾರಿಯಾಗಿ ಮತ್ತು ತಾನು ಬೇರೊಬ್ಬರನ್ನು ಪ್ರೀತಿಸುತ್ತಿರುವ ಬಗ್ಗೆ ವರನ ಮನೆಯವರಿಗೆ ತಿಳಿಸುವುದಾಗಿ ತನ್ನ ತಾಯಿಗೆ ತಿಳಿಸಿದ್ದಳು. ಇದರಿಂದ ಕೆರಳಿ ಕೆಂಡವಾದ ಆರುಮುಗ ಕಣಿ, ಅರುಣಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಮಗಳನ್ನು ಕೊಂದ ನಂತರದಲ್ಲಿ ಆರುಮುಗ ಕಣಿ ಕೂಡ ಹೇರ್ ಡೈ ಪೌಡರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಆಕೆಯನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಸಂಬಂಧ ಶಿವಲಪೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.