ಸಮೀಕ್ಷೆ: ಮೋದಿ ಸರ್ಕಾರದ 'ಜಿಎಸ್ಟಿ' ಬಗ್ಗೆ ಜನರಲ್ಲಿದೆ ಆಕ್ರೋಶ
ನವದೆಹಲಿ, ಮಾರ್ಚ್ 12: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಎಲ್ಲ ವಲಯಗಳ ಮೇಲೂ ದುಷ್ಪರಿಣಾಮ ಬೀರಿದ್ದು, ಅದನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ತಮಿಳುನಾಡಿನ ರಾಜಕಾರಣಿ, ನಟ ಕಮಲ್ ಹಾಸನ್ ಎರಡು ದಿನಗಳ ಹಿಂದೆ ಹೇಳಿದ್ದರು.
ಹಾಗಿದ್ದರೆ ಜಿಎಸ್ಟಿ ಬಗ್ಗೆ ಈ ದೇಶದ ಜನರ ಅಭಿಪ್ರಾಯ ಏನಿದೆ? ಎರಡನೇ ಹಂತದ ಲೋಕನೀತಿ - ಸಿಎಸ್ ಡಿಎಸ್-ಎಬಿಪಿ ನ್ಯೂಸ್ 'ಮೂಡ್ ಆಫ್ ದಿ ನೇಷನ್ ಸಮೀಕ್ಷೆ- 2018' ರಲ್ಲಿ ಇದು ಬಹಿರಂಗವಾಗಿದೆ.
ಅರ್ಧಕ್ಕಿಂತ ಹೆಚ್ಚಿನ ವ್ಯಾಪಾರಿಗಳು (ಶೇ. 53) ನರೇಂದ್ರ ಮೋದಿ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಅವಸರವಾಗಿ ಜಾರಿಗೆ ತಂದಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಉಳಿದ ಮತದಾರರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ವ್ಯಾಪಾರಿಗಳು ಜಿಎಸ್ಟಿ ತೆರಿಗೆ ಪದ್ಧತಿ ಕಠಿವಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆ: ರಾಹುಲ್ ಮುಗುಳು ನಗೆ, ಮೋದಿಯದ್ದು ಅಂತಿಮ ನಗೆ
ಆದರೆ ವಿಶೇಷವೆಂದರೆ ಅಪನಗದೀಕರಣ ವಿಚಾರದಲ್ಲಿ ಹೆಚ್ಚಿನವರು ಮೋದಿ ಸರಕಾರದ ತೀರ್ಮಾನವನ್ನು ಬೆಂಬಲಿಸಿದ್ದಾರೆ. ಅಪನಗದೀಕರಣ ಒಂದು ಒಳ್ಳೆಯ ತೀರ್ಮಾನ ಎಂದು ಇವರು ಹೇಳಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
2018ರ ಜನವರಿ 7ರಿಂದ ಜನವರಿ 20ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. 19 ರಾಜ್ಯಗಳಲ್ಲಿ, 175 ಲೋಕಸಭೆ ಕ್ಷೇತ್ರಗಳಲ್ಲಿ, 700 ಮತಗಟ್ಟೆಗಳ 14,336 ಜನರಿಂದ ಮಾಹಿತಿ ಕಲೆ ಹಾಕಿ ಈ ಸಮೀಕ್ಷೆ ನಡೆಸಲಾಗಿದೆ.
'ಮೂಡ್ ಆಫ್ ದಿ ನೇಷನ್' ಸಮೀಕ್ಷೆ: ಕುಸಿಯುತ್ತಿದೆಯಾ ಬಿಜೆಪಿ ಜನಪ್ರಿಯತೆ?
ಅವಸರದಲ್ಲಿ ಜಾರಿ
ಸರಕು ಮತ್ತು ಸೇವಾ ತೆರಿಗೆಯನ್ನು ಅವಸರ ಅವಸರವಾಗಿ ಸರಿಯಾದ ಸಿದ್ಧತೆ ಇಲ್ಲದೆ ಜಾರಿಗೆ ತರಲಾಯಿತು ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 27 ಜನರು ಸರಿಯಾದ ಸಿದ್ಧತೆ ಮಾಡಿಕೊಂಡು ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಶೇಕಡಾ 42ರಷ್ಟು ಜನರು ಸರಿಯಾದ ಸಿದ್ದತೆಯನ್ನು ಮಾಡಿಕೊಳ್ಳದೆ ಮೋದಿ ಸರಕಾರ ಅವಸರವಾಗಿ ಜಿಎಸ್ಟಿಯನ್ನು ಜಾರಿಗೆ ತಂದಿತು ಎಂದಿದ್ದಾರೆ. ಮಹತ್ವದ ವ್ಯವಸ್ಥೆಯನ್ನು ಜಾರಿಗೆ ತರುವಾಗ ವಿವರವಾದ ಪರಿಶೀಲನೆ ನಡೆಸಿರಲಿಲ್ಲ ಎಂಬುದು ಇವರ ಅಭಿಪ್ರಾಯವಾಗಿದೆ.
ಈ ಬಗ್ಗೆ ನಮ್ಮದೇನೂ ಪ್ರತಿಕ್ರಿಯೆ ಇಲ್ಲ ಎಂದೂ ಶೇಕಡಾ 31ರಷ್ಟು ಜನರು ಹೇಳಿದ್ದಾರೆ.
ಐವರಲ್ಲಿ ಮೂವರಿಗೆ ಜಿಎಸ್ಟಿ ಕಠಿಣ
ಸಮೀಕ್ಷೆಯಲ್ಲಿ ಪಾಲ್ಗೊಂಡ ಐದು ಜನರಲ್ಲಿ ಮೂರು ಜನರು ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಅಸಮಧಾನ ಹೊಂದಿದ್ದಾರೆ. ಇವರೆಲ್ಲಾ ಸರಕು ಮತ್ತು ಸೇವಾ ತೆರಿಗೆ ಕಠಿಣವಾಗಿದೆ ಎಂದು ಹೇಳಿದ್ದಾರೆ.
ಶೇಕಡಾ 24ರಷ್ಟು ಜನರು ಸರಕು ಮತ್ತು ಸೇವಾ ತೆರಿಗೆಗಳು ಕಠಿಣವಾಗಿವೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದಾರೆ. ಶೇಕಡಾ 34ರಷ್ಟು ಜನರು ಒಂದು ಹಂತಕ್ಕೆ ಜಿಎಸ್ಟಿ ತೆರಿಗೆ ಪದ್ಧತಿ ಕಠಿಣವಾಗಿದೆ ಎಂದಿದ್ದಾರೆ.
ಸರಕು ಮತ್ತು ಸೇವಾ ತೆರಿಗೆಗಳು ಸರಳವಾಗಿವೆ. ಏನೇನೂ ಕಷ್ಟವಿಲ್ಲ ಎಂದು ಹೇಳಿ ಮೋದಿ ಸರಕಾರದ ನಿರ್ಧಾರವನ್ನು ಬೆಂಬಲಿಸಿದವರು ಕೇವಲ ಶೇಕಡಾ 14 ಜನರು ಮಾತ್ರ.
ಇನ್ನುಳಿದ ಶೇಕಡಾ 28ರಷ್ಟು ಜನರು ಈ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಅಪನಗದೀಕರಣ ಹೆಚ್ಚು ಜನಪ್ರಿಯ
ಪ್ರಧಾನಿ ನರೇಂದ್ರ ಮೋದಿಯವರ ಸರಕು ಮತ್ತು ಸೇವಾ ತೆರಿಗೆಗಿಂತ ಅಪನಗದೀಕರಣ ಹೆಚ್ಚು ಜನಪ್ರಿಯವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಅಪನಗದೀಕರಣ ಒಂದು ಅಗತ್ಯ ಕ್ರಮ ಎಂದು ಶೇಕಡಾ 53ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆ ಒಂದು ಅಗತ್ಯ ಕ್ರಮ ಎಂದವರು ಶೇಕಡಾ 44 ಜನರು ಮಾತ್ರ.
ಅಪನಗದೀಕರಣದಂಥ ತೀರ್ಮಾನವೇ ಬೇಕಿರಲಿಲ್ಲ ಎಂದು ಶೇಕಡಾ 29ರಷ್ಟು ಜನರು ಹೇಳಿದ್ದಾರೆ. ಇನ್ನು ಶೇಕಡಾ 30ರಷ್ಟು ಜನರು ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವುದು ಬೇಕಾಗಿರಲಿಲ್ಲ ಎಂದಿದ್ದಾರೆ.
ಇದೇ ವೇಳೆ ಶೇಕಡಾ 18ರಷ್ಟು ಜನರು ಅಪನಗದೀಕರಣದ ಬಗ್ಗೆ ಹಾಗೂ ಶೇಕಡಾ 26ರಷ್ಟು ಜನರು ಜಿಎಸ್ಟಿ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಅಪನಗದೀಕರಣ ಕೆಟ್ಟದ್ದು ಮೂರರಲ್ಲಿ ಒಬ್ಬರು ಮಾತ್ರ!
ಅಪನಗದೀಕರಣ ಒಂದು ಒಳ್ಳೆಯ ಆರ್ಥಿಕ ತೀರ್ಮಾನವಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಕೇವಲ ಮೂರರಲ್ಲಿ ಒಬ್ಬರು ಮಾತ್ರ ಹೇಳಿದ್ದಾರೆ.
ದೇಶದ ಆರ್ಥಿಕತೆಗೆ ನರೇಂದ್ರ ಮೋದಿ ಜಾರಿಗೆ ತಂದ ಅಪನಗದೀಕರಣ ಒಳ್ಳೆಯ ತೀರ್ಮಾನ ಎಂದು ಶೇಕಡಾ 48ರಷ್ಟು ಜನರು ತಮ್ಮಅಭಿಪ್ರಾಯ ತಿಳಿಸಿದ್ದಾರೆ.
ಇಲ್ಲ, ಮೋದಿ ಸರಕಾರದ ಅಪನಗದೀಕರಣ ಒಂದು ಕೆಟ್ಟ ತೀರ್ಮಾನ ಎಂದು ಶೇಕಡಾ 34ರಷ್ಟು ಜನರು ಹೇಳಿದ್ದಾರೆ.
ಇನ್ನು ದೇಶದ ಪ್ರಮುಖ ಆರ್ಥಿಕ ತೀರ್ಮಾನದ ಬಗ್ಗೆ ಶೇಕಡಾ 18ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.