ನ. 09, ಬೆಳಗ್ಗೆ 10.30ಕ್ಕೆ ಅಯೋಧ್ಯಾ ಭೂ ವಿವಾದ ಪ್ರಕರಣದ ಅಂತಿಮ ತೀರ್ಪು
ನವದೆಹಲಿ, ನವೆಂಬರ್ 08: ಅಯೋಧ್ಯಾ ಭೂ ವಿವಾದ ಪ್ರಕರಣದ ಅಂತಿಮ ತೀರ್ಪು ನೀಡುವ ದಿನ, ಸಮಯ ನಿಗದಿಯಾಗಿದೆ. 40 ದಿನಗಳ ಪ್ರತಿದಿನದ ವಿಚಾರಣೆ ಬಳಿಕ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ನೀಡಲಿದೆ.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಐವರು ಜಸ್ಟೀಸ್ ಗಳಿರುವ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಲಿದೆ.

ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಿನಲ್ಲಿ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ರಂದು ಅಂತ್ಯ ಕಂಡಿದೆ. ನವೆಂಬರ್ 17 ರೊಳಗೆ ತೀರ್ಪು ನೀಡುವ ನಿರೀಕ್ಷೆಯಿತ್ತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿ ಹೊಂದುತ್ತಿರುವುದರಿಂದ ನ.17ರ ತನಕ ತೀರ್ಪಿಗೆ ಅಂತಿಮ ದಿನವಾಗಿತ್ತು. ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಲು ಮುಂದಾಗಿದೆ.
ಏನಿದು ಪ್ರಕರಣ?: 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಮೇ 2011ರಲ್ಲಿ 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಹಿಂದೂ ಹಾಗೂ ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಸಲ್ಲಿಸಲಾಯಿತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.
2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಸತತವಾಗಿ 40 ದಿನಗಳ ವಿಚಾರಣೆ ನಡೆಸಲಾಗಿದ್ದು, ಅಂತಿಮ ತೀರ್ಪು ನವೆಂಬರ್ 09ರಂದು ಹೊರ ಬರಲಿದೆ.












Click it and Unblock the Notifications