ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್ನಿಂದ 9 ಹೆಸರುಗಳ ಶಿಫಾರಸು
ನವದೆಹಲಿ ಜನವರಿ 11: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಏಳು ನ್ಯಾಯಾಂಗ ಅಧಿಕಾರಿಗಳು ಮತ್ತು ಇಬ್ಬರು ವಕೀಲರನ್ನು ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡಿದೆ.
ಕೊಲಿಜಿಯಂ ತನ್ನ ಸಭೆಯಲ್ಲಿ ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರ ದತ್ತಾತ್ರೇ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿದೆ.
"ಜನವರಿ 10, 2023 ರಂದು ನಡೆದ ತನ್ನ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರನ್ನಾಗಿ ಮಾಡುವ ತನ್ನ ಹಿಂದಿನ ಶಿಫಾರಸನ್ನು ಪುನರುಚ್ಚರಿಸಲು ನಿರ್ಧರಿಸಿದೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಜೊತೆಗೆ ಕೊಲಿಜಿಯಂ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ವಕೀಲೆ ನೀಲಾ ಕೇದಾರ್ ಗೋಖಲೆ ಅವರನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಗೌಹಾಟಿ ಹೈಕೋರ್ಟ್ನಲ್ಲಿ ನ್ಯಾಯಾಂಗ ಅಧಿಕಾರಿ ಮೃದುಲ್ ಕುಮಾರ್ ಕಲಿತಾ ಅವರನ್ನು ನ್ಯಾಯಾಧೀಶರಾಗಿ ಉನ್ನತೀಕರಿಸಲು ಶಿಫಾರಸು ಮಾಡಿದೆ.
ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ, ಕೊಲಿಜಿಯಂ ನ್ಯಾಯಾಂಗ ಅಧಿಕಾರಿಗಳಾದ ಪಿ. ವೆಂಕಟ ಜ್ಯೋತಿರ್ಮಾಯಿ ಮತ್ತು ವಿ ಗೋಪಾಲಕೃಷ್ಣ ರಾವ್ ಅವರನ್ನು ಅಲ್ಲಿನ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಒಪ್ಪಿಗೆ ನೀಡಿದೆ. ನ್ಯಾಯಾಂಗ ಅಧಿಕಾರಿಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೊಲ್ಮೆಯ್ ಗೈಫುಲ್ಶಿಲ್ಲು ಕಬುಯಿ ಅವರನ್ನು ಮಣಿಪುರ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸುವ ಪ್ರಸ್ತಾವನೆಯನ್ನು ಅದು ಅನುಮೋದಿಸಿತು.