Breaking; ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಜಾಮೀನು ನೀಡಿದ ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 09: ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. 2020ರಲ್ಲಿ ಉತ್ತರ ಪ್ರದೇಶ ಸರ್ಕಾರ ಪತ್ರಕರ್ತನನ್ನು ಬಂಧಿಸಿತ್ತು.
2020ರ ಅಕ್ಟೋಬರ್ನಲ್ಲಿ ಸಿದ್ದಿಕ್ ಕಪ್ಪನ್ ಬಂಧಿಸಿದ್ದ ಉತ್ತರ ಪ್ರದೇಶ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯು (ಯುಎಪಿಎ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿತ್ತು.
ಕೇರಳದ ಪತ್ರಕರ್ತ ಹಥರಾಸ್ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು.

ಈ ಆದೇಶ ಪ್ರಶ್ನಿಸಿ ಸಿದ್ದಿಕ್ ಕಪ್ಪನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಸಿದ್ದಿಕ್ ಕಪ್ಪನ್ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ವೇಳೆ ಸೋಮವಾರ ಸಿಜೆಐ ಉದಯ್ ಯು ಲಲಿತ್ ಅವರಿದ್ದ ಪೀಠದ ಮುಂದೆ ಉತ್ತರ ಪ್ರದೇಶ ಪೊಲೀಸರು ಅಫಿಡೆವಿಟ್ ಸಲ್ಲಿಕೆ ಮಾಡಿದ್ದರು.
ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದ ಪೊಲೀಸರು, ಸಿದ್ದಿಕ್ ಕಪ್ಪನ್ ದೇಶದಲ್ಲಿ ಧಾರ್ಮಿಕ ವೈಷಮ್ಯವನ್ನು ಹುಟ್ಟುಹಾಕಲು ಮತ್ತು ಭಯೋತ್ಪಾದನೆಯನ್ನು ಹರಡಲು ನಡೆದಿದ್ದ ದೊಡ್ಡ ಸಂಚಿನ ಭಾಗವಾಗಿದ್ದರು ಎಂದು ಹೇಳಿದ್ದರು.
ಸಿದ್ದಿಕ್ ಕಪ್ಪನ್ ಪಿಎಫ್ಐ ಜೊತೆಗೆ ನಂಟು ಹೊಂದಿದ್ದಾರೆ. ಹಥರಾಸ್ ಸಂತ್ರಸ್ತೆಯನ್ನು ಭೇಟಿಯಾಗಲು ಮತ್ತು ವೈಷಮ್ಯವನ್ನು ಹುಟ್ಟು ಹಾಕಲು ತೆರಳಿದ್ದ ಪಿಎಫ್ಐ/ ಸಿಎಫ್ಐ ನಿಯೋಗದ ಭಾಗವಾಗಿದ್ದರು ಎಂದು ಪೊಲೀಸರು ಅಫಿಡೆವಿಟ್ನಲ್ಲಿ ತಿಳಿಸಿದ್ದರು.
2020ರ ಅಕ್ಟೋಬರ್ನಿಂದಲೂ ಸಿದ್ದಿಕ್ ಕಪ್ಪನ್ ಜೈಲಿನಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ಹಲವು ರಾಜ್ಯಗಳಲ್ಲಿ ಹೋರಾಟಗಳು ನಡೆದಿದ್ದವು. ಆದರೆ ಅವರ ಜಾಮೀನು ಅರ್ಜಿ ತಿರಸ್ಕಾರವಾಗುತ್ತಲೇ ಇತ್ತು.












Click it and Unblock the Notifications