ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಂರಕ್ಷಣೆ ಆದೇಶ ವಿಸ್ತರಿಸಿದ ಸುಪ್ರೀಂಕೋರ್ಟ್
ನವದೆಹಲಿ, ನವೆಂಬರ್ 11: ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಮತ್ತು ಪಿಎಸ್ ನರಸಿಂಹ ನೇತೃತ್ವದ ಪೀಠವು ಈ ಹಿಂದಿನ ಆದೇಶವನ್ನು ವಿಸ್ತರಿಸಿತು. ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು ಸಂರಕ್ಷಿಸುವಂತೆ ಮೇ 17ರಂದು ಅಲಹಾಬಾದ್ ಕೋರ್ಟ್, ಮದ್ಯಂತರ ಆದೇಶವನ್ನು ನೀಡಿತ್ತು.
Breaking: ಜ್ಞಾನವಾಪಿ ವಿವಾದ- ತೀರ್ಪು ಮುಂದೂಡಿದ ನ್ಯಾಯಾಲಯ
ವಾರಣಾಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ವ್ಯವಸ್ಥಾಪಕ ಮಂಡಳಿ ಪರ ಹಿರಿಯ ವಕೀಲ ಹುಜೇಫಾ ಅಹ್ಮದ್ ವಾದ ಮಂಡಿಸಿದರು. ಅಲಹಾಬಾದ್ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ತಮ್ಮ ವಾದದಲ್ಲಿ ಉಲ್ಲೇಖಿಸಿದರು. ಹಿಂದೂ ಪರ ವಾದ ಮಂಡಿಸಿದ ಹಿರಿಯ ವಕೀಲ ರಂಜಿತ್ ಕುಮಾರ್, ಮಸೀದಿಯ ಕಡೆಯವರು ಈಗಾಗಲೇ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಿರುವುದರಿಂದ ಪ್ರಸ್ತುತ ಅರ್ಜಿಯು ನಿರುಪಯುಕ್ತವಾಗಿದೆ ಎಂದರು. ಆದಾಗ್ಯೂ, ವಿವಾದಕ್ಕೆ ಪ್ರತಿಕ್ರಿಯಿಸಲು ಸಮಯ ಬೇಕಾಗುತ್ತದೆ ಎಂದು ಅಹ್ಮದ್ ವಾದಿಸಿದರು.
ನವೆಂಬರ್ 12ಕ್ಕೆ ಸಂರಕ್ಷಣೆ ಅವಧಿ ಮುಕ್ತಾಯದ ಉಲ್ಲೇಖ:
ಮಹಿಳಾ ಹಿಂದೂ ಭಕ್ತರನ್ನು ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್, ಗುರುವಾರ ಈ ವಿಷಯವನ್ನು ಪೀಠದ ಮುಂದೆ ಪ್ರಸ್ತಾಪಿಸಿದರು, ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿದ ಎಂಟು ವಾರಗಳ ಸಂರಕ್ಷಣೆಯು ನವೆಂಬರ್ 12ಕ್ಕೆ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಅಲಹಾಬಾದ್ ಹೈಕೋರ್ಟ್ನಲ್ಲಿ ಆದೇಶದ ವಿರುದ್ಧದ ಪರಿಷ್ಕರಣೆ ಅರ್ಜಿಯು ಬಾಕಿ ಉಳಿದಿರುವಾಗ, ಮಹಿಳೆಯರು ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆಗೊಳಪಡಿಸಬಹುದು ಎಂಬ ವಾರಣಾಸಿ ನ್ಯಾಯಾಲಯದ ತೀರ್ಮಾನವನ್ನು ಉಲ್ಲೇಖಿಸಿದ್ದರು.
ನವೆಂಬರ್ 14ಕ್ಕೆ ಶಿವಲಿಂಗ ಆರಾಧನೆ ಅರ್ಜಿ ತೀರ್ಪು:
ಕಳೆದ ನವೆಂಬರ್ 8ರಂದು ವಾರಣಾಸಿ ನ್ಯಾಯಾಲಯವು ಮಸೀದಿಯ ಆವರಣದಲ್ಲಿ ಕಂಡುಬರುವ 'ಶಿವಲಿಂಗ' ದ ಆರಾಧನೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿ ತೀರ್ಪನ್ನು ನವೆಂಬರ್ 14ಕ್ಕೆ ಮುಂದೂಡಿತು. ಮೇ 17ರಂದು, 'ಶಿವಲಿಂಗ' ಪತ್ತೆಯಾದ ಜ್ಞಾನವಾಪಿ ಮಸೀದಿಯ ಪ್ರದೇಶವನ್ನು ರಕ್ಷಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು, ಇದರ ಮಧ್ಯೆ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಮುಸ್ಲಿಮರು ಮಸೀದಿಗೆ ಪ್ರವೇಶಿಸಬಹುದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಉಲ್ಲೇಖಿಸಲಾಗಿತ್ತು.
ಅದಾಗಿ ಮೇ 20ರಂದು, ಜ್ಞಾನವಾಪಿ ಮಸೀದಿಯಲ್ಲಿ ಪೂಜಾ ಹಕ್ಕುಗಳನ್ನು ಕೋರಿ ಹಿಂದೂ ಪಕ್ಷಗಳು ಹೂಡಿದ್ದ ಮೊಕದ್ದಮೆಗಳ ವಿಚಾರಣೆಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು.