'ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ': ಅಧಿಸೂಚನೆ ಪ್ರಶ್ನಿಸಿದ್ದ PIL ವಜಾಗೊಳಿಸಿದ ಸುಪ್ರೀಂ
ಬೆಂಗಳೂರು ಸೆಪ್ಟಂಬರ್ 15: ಪ್ರೊ. ಮಾಧವ್ ಗಾಡ್ಗೀಳ್ ವರದಿ ಹಾಗೂ ಡಾ.ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂಒಇಎಫ್) 'ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ' ಎಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಎಂಒಇಎಫ್ ಹೊರಡಿಸಿ ಈ ಕರಡು ಅಧಿಸೂಚನೆಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ರೈತರ ಜೀವನ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿದೆ. ಹೀಗೆಂದು ಆರೋಪಿಸಿದ ಕೇರಳ ಮೂಲದ ಸರ್ಕಾರೇತರ ಸಂಸ್ಥೆ ಕಾರ್ಶಕ ಶಬ್ದಂ (ರೈತರ ಧ್ವನಿ) ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
Breaking: ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿ ಸೆ.19ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ಈ ಪಿಐಎಲ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದರು. ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶ ಯು.ಯು. ಲಲಿತ್ ಅವರು, ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಇಷ್ಟು ಸಮಯ ತೆಗೆದುಕೊಂಡಿದ್ದಕ್ಕೆ ಕಾರಣ ಕೇಳಿದರು. ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿದಿದೆ ಮತ್ತು ಮಧ್ಯಸ್ಥಗಾರರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕಾಗಿದ್ದರಿಂದ ತಡವಾಯಿತು ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ತಡವಾಗಿ ಪಿಐಎಲ್ ಸಲ್ಲಿಕೆಗೆ ಕಾರಣ?
ಸಚಿವಾಲಯದ ಕರಡು ಅಧಿಸೂಚನೆಯು 2018ರಲ್ಲೆ ಪ್ರಕಟಿಸಲಾಗಿದೆ. ಆದರೆ ನೀವು ಈಗ ಅಂದರೆ ನಾಲ್ಕು ವರ್ಷದ ನಂತರ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದೀರಿ. ನೀವು ಇತ್ತೀಚಿನ ಅಧಿಸೂಚನೆಯನ್ನು ಮಾತ್ರ ಪ್ರಶ್ನಿಸಬೇಕು. ನ್ಯಾಯಪೀಠ ಹಳೆಯ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಕ್ಟೋಬರ್ 2018ರಲ್ಲಿ ದೇಶದ ಆರು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯದಲ್ಲಿ ವ್ಯಾಪ್ತಿಸಿರುವ 56,825 ಚದರ ಕಿಲೋ ಮೀಟರ್ ಪ್ರದೇಶವನ್ನು ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಅಧಿಸೂಚನೆಯನ್ನು ಹೊರಡಿಸಿತ್ತು.
ವಿವಾದಾತ್ಮಕ ಹೇಳಿಕೆ ಪ್ರಕರಣ: ನೂಪುರ್ ಬಂಧನಕ್ಕೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ಅಳಿವಿನ ಸಸ್ಯ, ಪ್ರಾಣಿ, ನದಿ ಉಳಿಸಲು ಅಧಿಸೂಚನೆ
ಈ ಅಧಿಸೂಚನೆ ಮೂಲಕ ಅಳಿವಿನ ಅಂಚಿನಲ್ಲಿರುವ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲ, ನದಿ ಮೂಲಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಗುರಿ ಉದ್ದೇಶ ಹೊಂದಿದೆ. ಈ ರೀತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಮೇಲಷ್ಟೇ ಈ ಪ್ರದೇಶಗಳಿಗೆ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮಾನ್ಯತೆ ದೊರೆಯುತ್ತದೆ.
ಇಂತಹ ಮಹತ್ತರ ಉದ್ದೇಶದಿಂದ ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದರೂ ಸಹ ಅದರಲ್ಲಿ ಈ ಪ್ರದೇಶಗಳ ಜನಸಂಖ್ಯೆ, ಸ್ಥಳಾಂತರದಲ್ಲಿನ ಪ್ರಾಯೋಗಿಕತೆ, ಜೀವನೋಪಾಯದ ಮೂಲಗಳು ಮುಂತಾದ ಅಗತ್ಯ ಅಂಶಗಳನ್ನು ಪರಿಗಣಿಸಿಲ್ಲ ಎಂದು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ. ಪಶ್ಚಿಮ ಘಟ್ಟಗಳನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದರೆ ಅಷ್ಟು ರಾಜ್ಯಗಳ ಜನರ ಜೀವನ ಅಸ್ತವ್ಯಸ್ತಗೊಳಿಸಿ ಕೃಷಿಯನ್ನು ನಿರುತ್ಸಾಹವನ್ನಾಗಿ ಮಾಡಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಹಲವು ಕಾರಣಗಳನ್ನು ನೀಡಿರುವ ಅರ್ಜಿದಾರರು ಪ್ರೊ. ಮಾಧವ್ ಗಾಡ್ಗಿಳ್ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸದಂತೆ ಕೇರಳ ರಾಜ್ಯಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಅರ್ಜಿ ದಾರರು ಹೇಳಿದ ಕಾರಣಗಳೇನು?
ರಾಜ್ಯದಲ್ಲಿರುವ ಜನರನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಿಸಲು ಸ್ಥಳದ ಕೊರತೆ ಇದೆ.
ಕೃಷಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ದೊಡ್ಡ ಸಮುದಾಯವೇ ಇದೆ. ಅಧಿಸೂಚನೆ ಮೂಲಕ ಹಲವಾರು ಬೆಳೆಗಳ ಕೃಷಿಯನ್ನು ನಿಷೇಧಿಸುವುದು ಲಕ್ಷಾಂತರ ಕೃಷಿಕರ ಜೀವನೋಪಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸಾಕಷ್ಟು ಗ್ರಾಮಗಳಲ್ಲಿ ಸಾಬೂನುಗಳು, ಕೂದಲಿನ ಎಣ್ಣೆ ತಯಾರಿಸುವ, ಟ್ಯೂಬ್ಗಳು- ಟೈರ್ ರಿಪೇರಿ ಸೇರಿದಂತೆ ಅನೇಕ ಉತ್ಪಾದಕರ ಜೀವನ ಹಾಗೂ ಸಣ್ಣ ಪ್ರಮಾಣದ ವ್ಯಾಪಾರಕ್ಕೆ ಹೊಡೆತ ನೀಡಿದಂತಾಗುತ್ತದೆ ಎಂಬ ಕಾರಣಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಭೂ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿರಬೇಕು
ಭಾರತದ ಸಂವಿಧಾನದ ಪ್ರಕಾರ 'ಭೂಮಿ' ಸೇರಿದಂತೆ ವಿಷಯವಾರು ರಾಜ್ಯ ಪಟ್ಟಿಯ ಅಡಿಯಲ್ಲಿ ಭೂಮಿಯನ್ನು ನಿಯಂತ್ರಿಸುವ, ಭೂಮಿಯನ್ನು ಬಳಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಕೇಂದ್ರ ಸರ್ಕಾರದ ಅಡಿಯಲ್ಲಿ ಆ ಅಧಿಕಾರ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಇಲ್ಲವೇ ಕೇಂದ್ರದ ಕೈಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಲಾಗಿದೆ.
ಅರ್ಜಿದಾರರ ಪರ ವಕೀಲರು ಹಳೆಯ ಅಧಿಸೂಚನೆಗೆ 2022 ಜುಲೈ 6ರ ನಂತರದ ಕರಡು ಅಧಿಸೂಚನೆಯನ್ನು ಅನುಸರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಖ್ಯವಾಗಿ 2022 ಜುಲೈ 6ರ ದಿನಾಂಕದ ಕರಡು ಅಧಿಸೂಚನೆಗೆ ಈಗಾಗಲೇ ಆಕ್ಷೇಪಣೆಗಳನ್ನು ಎತ್ತಲಾಗಿದೆ. ಅಲ್ಲದೇ ಅಂತಿಮ ಅಧಿಸೂಚನೆ ಬರುವುದು ಬಾಕಿ ಇದೆ. ಈ ಎಲ್ಲ ಸಂಗತಿಗಳು ಹಾಗೂ ವಾಸ್ತವ ಅಂಶಗಳನ್ನು ಪರಿಗಣಿಸಲಾಗಿದೆ. ಸಂವಿಧಾನದ 32ನೇ ವಿಧಿಯನ್ವಯ ನಮ್ಮ ಅಧಿಕಾರ ಚಲಾಯಿಸಲು ಸೂಕ್ತ ಕಾರಣಗಳು ದೊರೆತಿಲ್ಲ ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.