ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ನಿಜ : ಪಾಕ್ ಅಧಿಕಾರಿ
ನವದೆಹಲಿ, ಅಕ್ಟೋಬರ್ 06: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಸರ್ಜಿಕಲ್ ಸ್ಟ್ರೆಕ್ ನಡೆಸಿ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿದ್ದರ ನೈಜತೆ ಬಗ್ಗೆ ಚರ್ಚೆ ಮುಂದುವರೆದಿದೆ.
ಯಾವುದೇ ರೀತಿ ಸೀಮಿತ ದಾಳಿ ನಡೆದಿಲ್ಲ ಎಂದು ನವಾಜ್ ಷರೀಫ್ ಹೇಳಿದ್ದಾರೆ. ಸೆಪ್ಟೆಂಬರ್ 29 ರಂದು ಸೀಮಿತ ದಾಳಿ ನಡೆದಿದ್ದು ನಿಜ ಎಂದು ಪಿಒಕೆಯ ಹಿರಿಯ ಪೊಲೀಸ್ ಅಧಿಕಾರಿ ಖಾಸಗಿ ಸುದ್ದಿ ವಾಹಿನಿ ನಡೆಸಿದ 'ಸ್ಟಿಂಗ್ ಆಪರೇಷನ್'ನಲ್ಲಿ ಬಾಯ್ಬಿಟ್ಟಿದ್ದಾರೆ.
ನ್ಯೂಸ್ 18.ಕಾಂ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಮಿರ್ಪುರ್ನ ವಿಶೇಷ ದಳದ ಎಸ್ಪಿ ಗುಲಾಮ್ ಅಕ್ಬರ್ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ಎರಡು ದಿನಗಳಿಂದ ಗಡಿ ಭಾಗಗಳಲ್ಲಿ ಸೆಲ್ ಗಳು, ನಿಷ್ಕ್ರಿಯವಾದ ಗುಂಡುಗಳು ಪತ್ತೆಯಾಗಿವೆ.

ಸೆಪ್ಟೆಂಬರ್ 29 ರಂದು ಬೆಳಗಿನ ಜಾವ 2 ರಿಂದ 5 ಗಂಟೆಯೊಳಗೆ ದಾಳಿ ನಡೆದಿತ್ತು. ಪಿಒಕೆಯ ಬಿಂಬೆರ್ನ ಸಮಾನ, ಪೂಂಚ್ನ ಹಜೀರಾ, ನೀಲಮ್ ದುಧುನಿಯಾಲ್ ಮತ್ತು ಹಥೀಯನ್ ಬಾಲಾದ ಕಯಾನಿಯಲ್ಲಿ ದಾಳಿ ನಡೆದಿತ್ತು. ದಾಳಿಯಲ್ಲಿ ಪಾಕ್ ಸೇನೆಯ ಐವರು ಯೋಧರೂ ಸಹ ಮೃತಪಟ್ಟಿದ್ದರು. ಆದರೆ, ಅವರ ಹೆಸರುಗಳು ಬಹಿರಂಗಗೊಳಿಸದಂತೆ ಆದೇಶಿಸಲಾಗಿತ್ತು.
ದಾಳಿಯಲ್ಲಿ ಮೃತಪಟ್ಟ ಉಗ್ರರನ್ನು ಪಾಕ್ ಸೇನೆ ತಕ್ಷಣ ಸ್ಥಳದಿಂದ ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದು ಗುಟ್ಟಾಗಿ ಅವರ ಅಂತ್ಯ ಸಂಸ್ಕಾರ ನೆರವೇರಿಸಿದೆ ಎಂದು ಅಕ್ಬರ್ ಹೇಳಿದ್ದಾರೆ.
ಪಾಕಿಸ್ತಾನ ಸೇನೆ ಉಗ್ರರನ್ನು ಕರೆತಂದು ಅವರಿಗೆ ತರಬೇತಿ ನೀಡುತ್ತದೆ. ಉಗ್ರರ ತರಬೇತಿ ಕೇಂದ್ರಗಳು ಪಾಕ್ ಸೇನೆಯ ನೆರವಿನಿಂದ ನಡೆಯುತ್ತಿವೆ. ಜತೆಗೆ ಸ್ವತಃ ಪಾಕ್ ಸೈನಿಕರು ಉಗ್ರರು ಭಾರತದೊಳಗೆ ನುಸುಳಲು ಎಲ್ಲಾ ವಿಧದ ಸಹಕಾರ ನೀಡುತ್ತಾರೆ ಎಂದಿದ್ದಾರೆ.












Click it and Unblock the Notifications