Caste Census: ಬಿಹಾರ ಜಾತಿ ಗಣತಿ ಬಳಿಕ ದೇಶದಲ್ಲಿ ಮಹಾ ಸಂಚಲನ!
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಇಂದು ಮಹತ್ವದ ಹೆಜ್ಜೆ ಇಟ್ಟಿದ್ದು ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆ ಮಾಡಿದೆ. ಆದರೆ ಹೀಗೆ ಬಿಹಾರ ಜಾತಿ ಗಣತಿ ಬಿಡುಗಡೆ ಆಗುತ್ತಿದ್ದಂತೆ, ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ ಲೋಕಸಭಾ ಚುನಾವಣೆಯಲ್ಲಿ ಬಿಹಾರ ಜಾತಿ ಗಣತಿ ಪ್ರಭಾವ ಬೀರುತ್ತಾ? ಇದರಿಂದ ಮುಂದೆ ಏನಾಗುತ್ತೆ? ಈಗ ವಿಪಕ್ಷಗಳು ಹೇಳುತ್ತಿರುವುದು ಏನು?
ಅಷ್ಟಕ್ಕೂ ಬಿಹಾರದಲ್ಲಿ ಇಂದು ಬಿಡುಗಡೆ ಆಗಿರುವ ಜಾತಿ ಗಣತಿ ಪ್ರಕಾರ, ಬಿಹಾರದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 36ರಷ್ಟು ಅತ್ಯಂತ ಹಿಂದುಳಿದ ಸಮುದಾಯದ ಜನರಿದ್ದಾರೆ ಎನ್ನಲಾಗಿದೆ. ಇನ್ನು ಶೇಕಡಾ 27ರಷ್ಟು ಹಿಂದುಳಿದ ವರ್ಗದ ಸಮುದಾಯ ಇದೆ. ಶೇ. 19.7 ರಷ್ಟು ಜನರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು, ಶೇ. 1.7ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆ 13.1 ಕೋಟಿಯಾಗಿದ್ದು, ಈ ಪೈಕಿ ಶೇಕಡಾ 15.5ರಷ್ಟು ಜನ ಸಾಮಾನ್ಯ ವರ್ಗಕ್ಕೆ ಸೇರಿದವರಿದ್ದಾರೆ. ಹೀಗಾಗಿಯೇ ಇದೀಗ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಕೇಂದ್ರ ಸರ್ಕಾರಕ್ಕೆ ರಾಹುಲ್ ಸವಾಲು!
ಹೀಗೆ ಬಿಹಾರ ಸರ್ಕಾರ ಇಂದು ಜಾತಿ ಗಣತಿ ಬಿಡುಗಡೆ ಮಾಡುತ್ತಿದ್ದಂತೆ ಕಾಂಗ್ರೆಸ್ ವರಿಷ್ಠ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಮೂಲಕ ಸವಾಲು ಎಸೆದಿರುವ ರಾಹುಲ್ ಗಾಂಧಿ, 'ಬಿಹಾರದ ಜಾತಿ ಗಣತಿ ಮೂಲಕ ಆ ರಾಜ್ಯದಲ್ಲಿ OBC + SC + ST ಅಲ್ಲಿ 84% ಎಂಬ ಸತ್ಯವು ಗೊತ್ತಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ 3 ಮಂದಿ ಮಾತ್ರ ಒಬಿಸಿ ಸಮುದಾಯದವರು, ಅವರು ಭಾರತ ಬಜೆಟ್ನ ಶೇಕಡಾ 5ರಷ್ಟನ್ನು ಮಾತ್ರ ನಿಭಾಯಿಸುತ್ತಾರೆ! ಹೀಗಾಗಿ ಭಾರತದ ಜಾತಿ ಅಂಕಿ-ಅಂಶ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕು- ಇದು ನಮ್ಮ ಪ್ರತಿಜ್ಞೆ' ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರ ನೆಲದಲ್ಲಿ ರಾಹುಲ್ ವಾಗ್ದಾನ
ಇನ್ನು ಕರ್ನಾಟಕದ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಏಪ್ರಿಲ್ 16ರಂದು ಕೋಲಾರದಲ್ಲಿ ಮಾತನಾಡಿದ್ದ ಅವರು, ತಮ್ಮ ಪಕ್ಷವು ಜಾತಿ ಗಣತಿ ನಡೆಸಲು ಹಾಗೂ ದಲಿತರು, ಬುಡಕಟ್ಟು ಜನರು ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 50ರಷ್ಟು ಮೀಸಲಾತಿ ನೀಡಲು ಬದ್ಧವಾಗಿದೆ ಎಂದಿದ್ರು. ಈಗ ಬಿಹಾರ ಜಾತಿ ಗಣತಿ ಬಿಡುಗಡೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಹೊಸ ಸವಾಲು ಎಸೆದಿದ್ದಾರೆ.

ಕರ್ನಾಟಕದಲ್ಲೂ ಸಿದ್ಧವಾಗಿದೆ ಜಾತಿ ಗಣತಿ
2015ರಲ್ಲಿ ಜಾತಿ ಜನಗಣತಿ ವರದಿ ಸೋರಿಕೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿಯನ್ನ ಇಟ್ಟುಕೊಂಡೇ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದವು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಜನಗಣತಿ ಶುರು ಆಗಿತ್ತು. ಇದನ್ನು 2015ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಅಲ್ಲದೆ 162 ಕೋಟಿ ರೂಪಾಯಿ ಜಾತಿ ಗಣತಿಗೆ ಖರ್ಚಾಗಿತ್ತು. ಇಷ್ಟೆಲ್ಲಾ ಖರ್ಚು ಮಾಡಿ ಸಿದ್ಧಗೊಳಿಸಿದ್ದ ವರದಿ ಮಾತ್ರ 8 ವರ್ಷವಾದ್ರೂ ಹೊರಬಿದ್ದಿಲ್ಲ. ಈ ಸಮಯದಲ್ಲೇ ಬಿಹಾರ ಜಾತಿ ಗಣತಿ ಹೊರಬಿದ್ದಿದ್ದು, ಕರ್ನಾಟಕದಲ್ಲೂ ಜಾತಿ ಗಣತಿಯ ವರದಿ ಬಿಡುಗಡೆ ಆಗುತ್ತಾ? ಎಂಬ ಕುತೂಹಲ ಈಗ ಹೆಚ್ಚಾಗಿದೆ.
ಒಟ್ನಲ್ಲಿ ಲೋಕಸಭೆ ಚುನಾವಣೆಗೂ ಮೊದಲೇ ಬಿಹಾರದ ಸರ್ಕಾರ ಜಾತಿ ಗಣತಿ ಬಿಡುಗಡೆ ಮಾಡಿರುವುದು ಸಂಚಲನ ಸೃಷ್ಟಿಸಿದೆ. ಹೀಗಾಗಿ ಮುಂದೆ ದೇಶದ ಯಾವ ಯಾವ ರಾಜ್ಯದ ಜಾತಿ ಗಣತಿ ವರದಿಗಳು ರಿಲೀಸ್ ಆಗಲಿವೆ? ಅಂತಾ ಕಾದು ನೋಡಬೇಕು. ಈ ಪೈಕಿ ರಾಜ್ಯ ಸರ್ಕಾರ ಅಂದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಜಾತಿ ಗಣತಿ ರಿಲೀಸ್ ಮಾಡಿದರೂ ಅಚ್ಚರಿ ಇಲ್ಲ. ಹೀಗೆ ಕರ್ನಾಟಕ ಕೂಡ ಜಾತಿ ಗಣತಿ ಬಿಡುಗಡೆ ಮಾಡಿದರೆ, ಇದು ಮತ್ತೊಂದು ಸಂಚಲನ ಸೃಷ್ಟಿಸಲಿದೆ.












Click it and Unblock the Notifications