ಇನ್ಮುಂದೆ ಹಳೆ ಕಾರು ಗುಜರಿಗೆ ಹಾಕಿದ್ರೆ ರೋಡ್ ಟ್ಯಾಕ್ಸ್ನಲ್ಲಿ ಬಂಪರ್ ಡಿಸ್ಕೌಂಟ್ !
ನವದೆಹಲಿ,
ಆ. 19: ಪರಿಸರ ಸಂರಕ್ಷಣೆ ಹೆಸರಿನಲ್ಲಿ ದೇಶಕ್ಕೆ ಪರಿಚಯಿಸುತ್ತಿರುವ 'ಕೇಂದ್ರ ಗುಜರಿ ನೀತಿ' ಯಶಸ್ಸು ಗಳಿಸಲು ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಫೀಲ್ಡ್ ಗೆ ಇಳಿದಿದ್ದಾರೆ. ಹಳೇ ವಾಹನವನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಿದರೆ ರೋಡ್ ಟ್ಯಾಕ್ಸ್ ಕಡಿಮೆ ಮಾಡುವಂತೆ ಕೇಂದ್ರ ಮಂತ್ರಿ ಸೂಚಿಸಿದ್ದಾರೆ. ಗುಜರಿ ನೀತಿ ಅಡಿಯಲ್ಲಿ ಜನರು ಹಳೇ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಿದರೆ ಕನಿಷ್ಠ ರಸ್ತೆ ತೆರಿಗೆಯಲ್ಲಿ ಕನಿಷ್ಠ 15 ರಿಂದ 25 ರಷ್ಟು ಕಡಿತಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಕೇಂದ್ರ
ಸರ್ಕಾರ ಪ್ರಸಕ್ತ ಸಾಲಿನಿಂದ ಜಾರಿಗೆ ತರುತ್ತಿರುವ ಗುಜರಿ ನೀತಿಯ ಬಗ್ಗೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುಜರಿ ನೀತಿಯಿಂದ ದೇಶದ ಆರ್ಥಿಕ ಪ್ರಗತಿಗೆ ಚೈತನ್ಯ ತುಂಬಲಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ಅವರು ತಿಳಿಸಿದರು. id='are-slot-2' class='oiad oi-axt oiadv'>
ಕೇಂದ್ರ ಮತ್ತು ರಾಜ್ಯ ಪಟ್ಟಿಯಲ್ಲಿ ಗುಜರಿ ನೀತಿ
ಕೇಂದ್ರದಲ್ಲಿ ಮೂರು ಪಟ್ಟಿಯಿದೆ. ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಕೇಂದ್ರ ಹಾಗೂ ರಾಜ್ಯಪಟ್ಟಿ, ಸಾರಿಗೆ ನಿಯಮ ಕೇಂದ್ರ ಹಾಗೂ ರಾಜ್ಯ ಪಟ್ಟಿಯಲ್ಲಿ ಬರಲಿದ್ದು, ಗುಜರಿ ನೀತಿಯ ಪ್ರಕಾರ ಹಳೇ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಿದವರಿಗೆ ರಸ್ತೆ ತೆರಿಗೆಯಲ್ಲಿ ವಿನಾಯ್ತಿ ನೀಡುವಂತೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ತೆರಿಗೆ ಕಡಿತ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗುವುದು. ತೆರಿಗೆ ಕಡಿತ ಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಅನ್ವಯಿಸಿದ್ದು, ರಾಜ್ಯ ಹಾಗೂ ಕೇಂದ್ರ ಪಟ್ಟಿಯಲ್ಲಿ ಬರುವ ಮೋಟಾರು ವಾಹನ ನಿಯಮ ಸಂಬಂಧ ಕೇಂದ್ರ ಸರ್ಕಾರವೇ ತೆರಿಗೆ ನಿರ್ಧಾರ ಮಾಡುವ ಅಧಿಕಾರ ಬಗ್ಗೆ ಕಾನೂನು ಸಲಹೆ ಕೇಳಲಾಗಿದೆ. ಈಗಿರುವ ಅಧಿಕಾರ ಬಳಸಿ ನಿಯಮಗಳನ್ನು ಬದಲಿಸಲಾಗಿದೆ. ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಗುಜರಿ ನೀತಿಯ ಅಂತಿಮ ನಿಯಗಳನ್ನು ಅತಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗುಜರಿ ನೀತಿಯಿಂದ ರಾಜ್ಯ ಸರ್ಕಾರಗಳಿಗೆ ಆದಾಯ
ಕೇಂದ್ರ ಸರ್ಕಾರ ಪರಿಚಯಿಸುತ್ತಿರುವ ಗುಜರಿ ನೀತಿಯಿಂದ ರಾಜ್ಯಗಳ ಖಜಾನೆಗೂ ಹೆಚ್ಚು ಆದಾಯ ಬರಲಿದೆ ಎಂದು ಕೇಂದ್ರ ಸಾರಿಗೆ ಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಗುಜರಿ ನೀತಿ ಜಾರಿಗೆ ಬಂದಲ್ಲಿ ವಾಹನ ಮಾರಾಟ ಶೇ. 25 ರಿಂದ 30 ರಷ್ಟು ಹೆಚ್ಚಾಗಲಿದೆ. ಜಿಎಸ್ಟಿಯ ಅರ್ಧ ಭಾಗ ತೆರಿಗೆ ರಾಜ್ಯಗಳಿಗೆ ಸಂದಾಯವಾಗಲಿದೆ. ಈ ಗುಜರಿ ನೀತಿಯನ್ನು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಜಾರಿ ಮಾಡಲಾಗಿದೆ. ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಾಡುವುದುನಮ್ಮ ಮೂಲ ಉದ್ದೇಶ. ಜತೆಗೆ ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯೋಗವಕಾಶ ಸೃಷ್ಟಿಸುವುದು ನಮ್ಮ ಆಶಯ. ಈ ಸಾರ್ವಜನಿಕ ಉದ್ದೇಶದಿಂದ ಜಾರಿಗೆ ತರುತ್ತಿರುವ ಈ ನೀತಿಗೆ ಎಲ್ಲಾ ರಾಜ್ಯಗಳು ಸಹಕಾರ ನೀಡಲಿವೆ ಎಂಬ ನಂಬಿಕೆ ನನಗಿದೆ ಎಂದು ಗಡ್ಕರಿ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಹೊಸ ಗುಜರಿ ನೀತಿಯಿಂದ ಆದಾಯ ನಷ್ಟವಿಲ್ಲ
ಹಳೇ ವಾಹನ ಗುಜರಿಗೆ ಹಾಕಿದ ಕೂಡಲೇ ಹೊಸ ವಾಹನ ಖರೀದಿ ಮಾಡಿದರೆ ಅದರಿಂದ ತೆರಿಗೆ ಬರಲಿದೆ. ಇದು ಕೇಂದ್ರ ಹಾಗೂ ರಾಜ್ಯದ ಪಾಲಿಗೆ "ವಿನ್- ವಿನ್ " ಪಾಲಿಸಿ. ರಸ್ತೆ ತೆರಿಗೆ ಡಿಸ್ಕೌಂಟ್ ಜತೆಗೆ ಹೊಸ ವಾಹನ ಖರೀದಿ ಮೇಲೆ ಶೇ. 5 ರಷ್ಟು ಡಿಸ್ಕೌಂಟ್ ವಾಹನ ತಯಾರಕರಿಂದ ಸಿಗಲಿದೆ. ಇದರಿಂದ ದೇಶದಲ್ಲಿ ವಾಹನಗಳ ಮಾರಾಟ ಪ್ರಮಾಣ ಹೆಚ್ಚಳವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಾರ್ಷಿಕ 40 ಸಾವಿರ ಕೋಟಿ ಜಿಎಸ್ ಟಿ ಗಳಿಸಲು ಗುಜರಿ ನೀತಿ ನೆರವಾಗಲಿದೆ. ಗುಜರಿ ನೀತಿ ಸಮರ್ಪಕ ಅನುಷ್ಠಾನದಿಂದ ಮುಂದಿನ ಐದು ವರ್ಷದಲ್ಲಿ ಭಾರತ ಆಟೋಮೊಬೈಲ್ ಕ್ಷೇತ್ರದ ಹಬ್ ಆಗಲಿದೆ ಎಂದು ನಿತಿನ್ ಗಡ್ಕರಿ ಭವಿಷ್ಯ ನುಡಿದರು.

ಗುಜರಿ ನೀತಿಗೆ ಮೋದಿ ಚಾಲನೆ
ದೇಶದ ರಸ್ತೆಗಳನ್ನು ಮಾಲಿನ್ಯ ಮುಕ್ತಗೊಳಿಸುವ ಕೇಂದ್ರದ ಬಹು ನಿರೀಕ್ಷಿಗ "ಗುಜರಿ ನೀತಿ"ಗೆ ಪ್ರಧಾನಿ ನರೇಂದ್ರ ಮೋದಿ ಆ. 13 ರಂದು ವಿದ್ಯುಕ್ತ ಚಾಲನೆ ನೀಡಿದರು. ಮಾಲಿನ್ಯಯುಕ್ತ ವಾಹನಗಳನ್ನು ಮಾಲಿನ್ಯ ಮುಕ್ತಗೊಳಿಸುವ ಈ ಯೋಜನೆಗೆ ಚಾಲನೆ ನೀಡಿದ ಪ್ರಧಾನಿಗಳು "ಇದೊಂದು ಐತಿಹಾಸಿಕ ನಿರ್ಧಾರ, ಇದು ದೇಶದ ಪ್ರಗತಿಗೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಬಣ್ಣಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮಾತನ್ನು ನಿತಿನ್ ಗಡ್ಕರಿ ಸ್ಮರಿಸಿದರು.

2023 ರಿಂದ ಹಳೇ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ
ಖರೀದಿಸಿದ ಹದಿನೈದು ವರ್ಷದ ಬಳಿಕ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಸ್ವಂತ ವಾಹನಗಳಿಗೆ 20 ವರ್ಷದ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರ ಸಾರಿಗೆ ಮಂತ್ರಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 10 ಮಿಲಿಯನ್ ವಾಹನ ( 1 ಕೋಟಿ ) ತುರ್ತು ಗುಜರಿಗೆ ಸೇರಲಿವೆ. ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆ 2023 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಸ್ವಂತ ಬಳಕೆ ವಾಹನಗಳ ಫಿಟ್ನೆಸ್ ಪರೀಕ್ಷೆ ದೇಶದಲ್ಲಿ 2024 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಗುಜರಿ ನೀತಿಯ ಪ್ರಕಾರ ದೇಶದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಫಿಟ್ನೆಸ್ ಸೆಂಟರ್ ಗಳನ್ನು ತೆರೆಯಲಾಗುವುದು ಎಂದು ನಿತಿನ್ ಗಡ್ಕರಿ ಇದೇ ವೇಳೆ ತಿಳಿಸಿದರು.

26 ಫಿಟ್ನೆಸ್ ಸೆಂಟರ್ ಸ್ಥಾಪನೆಗೆ ಅನುಮೋದನೆ
ಗುಜರಿ ನೀತಿ, ಅನುಷ್ಠಾನ ಕುರಿತು ಈಗಾಗಲೇ ಮಹತ್ವದ ಹೆಜ್ಜೆ ಇಡಲಾಗಿದೆ. ಗುಜರಿ ನೀತಿ ಜಾರಿಗೆ ಅಗತ್ಯ ಇರುವ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರ ಸ್ಥಾಪನೆ ಹಾಗು ನೊಂದಾಯಿತ ವಾಹನ ಗುಜರಿ ಸೌಲಭ್ಯ ಕುರಿತ ಕೆಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 26 ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಏಳು ಕೇಂದ್ರಗಳು ಕಾರ್ಯ ನಿರ್ವಹಣೆಗೆ ಸಜ್ಜಾಗಿವೆ. ಮೊದಲ ಹಂತದಲ್ಲಿ 75 ಕೇಂದ್ರ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ 450 ರಿಂದ 500 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ಗುಜರಿ ನೀತಿಯ ಎಲ್ಲಾ ವ್ಯವಹಾರವನ್ನು ಏಕ ಗವಾಕ್ಷಿ ಮೂಲಕ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಗಡ್ಕರಿ ಇದೇ ವೇಳೆ ಯೋಜನೆ ಕುರಿತ ಸಮಗ್ರವಾಗಿ ಹಂಚಿಕೊಂಡಿದ್ದಾರೆ.












Click it and Unblock the Notifications