ಬಾಲಾಪರಾಧಿ ಗೃಹದಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ನಾಲ್ವರು ಸಿಬ್ಬಂದಿ ವಜಾ, ಪ್ರಕರಣ ದಾಖಲು
ಲಕ್ನೋ, ಜೂನ್ 27: ಸರ್ಕಾರಿ ಬಾಲಾಪರಾಧಿ ಗೃಹದ ಸಿಬ್ಬಂದಿಗಳೇ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಬಾಲಕಿಯರ ಸರ್ಕಾರಿ ಬಾಲಾಪರಾಧಿ ಗೃಹದ ನಾಲ್ವರು ಸಿಬ್ಬಂದಿಗಳ ಮೇಲೆ ಜಿಲ್ಲಾ ಅಧಿಕಾರಿಗಳು ಲೈಂಗಿಕ ಕಿರುಕುಳ ಮತ್ತು ಕೈದಿಗಳ ದುರ್ವರ್ತನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ನಾಲ್ವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ ಬೆದರಿಕೆ) ಮತ್ತು ತಡೆಗಟ್ಟುವಿಕೆಯ ಸೆಕ್ಷನ್ 7 ಮತ್ತು 12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದಿ ಪ್ರಿಂಟ್ ವರದಿಯಲ್ಲಿ ತಿಳಿಸಿದೆ. ನಾಲ್ವರು ಆರೋಪಿಗಳು ಕೂಡ ಬಾಲಪಾರಾಧಿಗಳ ಗೃಹವನ್ನು ನೋಡಿಕೊಳ್ಳಲು ಸರ್ಕಾರದಿಂದ ನಿಯೋಜಿಸಲಾದ ಎನ್ಜಿಒದ ಭಾಗವಾಗಿದ್ದರು ಎಂದು ಹೇಳಲಾಗಿದೆ.
ಉಪವಾಸ ಸತ್ಯಾಗ್ರಹ ಮಾಡಿದ್ದ ಕೈದಿಗಳು
ಹಲವು ದಿನಗಳಿಂದ ಈ ದೌರ್ಜನ್ಯ ನಡೆಯುತ್ತಿದ್ದರು ಈ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಕೈದಿಗಳು ಮೇ 20ರಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಕೀರ್ತಿ ರಾಜ್ ಅವರ ಬಳಿ ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ಹೇಳಿಕೊಂಡಿದ್ದರು. ಕೀರ್ತಿರಾಜ್ ತಪಾಸಣೆಗಾಗಿ ಆಗಾಗ್ಗೆ ಬಾಲಪರಾಧಿಗಳ ಗೃಹಕ್ಕೆ ಭೇಟಿ ನೀಡುತ್ತಿದ್ದರು.
ಕೀರ್ತಿ ರಾಜ್ ಜೊತೆ ಮಾತನಾಡಿದ್ದ ಕೈದಿಗಳು, "ತಮಗೆ ಇಲ್ಲಿ ಕೆಟ್ಟ ಆಹಾರ ನೀಡುತ್ತಿದ್ದಾರೆ. ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ದೈಹಿಕ ಹಲ್ಲೆ ಮಾಡುತ್ತಾರೆ, ಬಾಲಪರಾಧಿ ಗೃಹದ ನಿರ್ವಾಹಕ ವಿ.ಪಿ. ಸಿಂಗ್ ನಮಗೆ ಕಿರುಕುಳ ನೀಡುತ್ತಿದ್ದಾರೆ" ಎಂದು ದೂರು ನೀಡಿದ್ದಾರೆ.
ಕೈದಿಗಳ ದೂರುಗಳನ್ನು ಆಧರಿಸಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಅವರು ಆರೋಪಗಳನ್ನು ಪರಿಶೀಲಿಸಲು ಎಸ್ಡಿಎಂ ರಾಜ್ ಅವರನ್ನು ಒಳಗೊಂಡ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದ್ದರು. ಮೇ 31ರಂದು ಈ ವಿಚಾರವಾಗಿ ವರದಿಯನ್ನು ನೀಡಲಾಗಿತ್ತು.
ಕಿರುಕುಳ ನೀಡಿರುವುದು ನಿಜ
"ಎಸ್ಡಿಎಂ ನೀಡಿದ ವರದಿಯ ಪ್ರಕಾರ, ಅಧೀಕ್ಷಕರನ್ನು ತಕ್ಷಣವೇ ಸೇವೆಯಿಂದ ತೆಗೆದುಹಾಕಲಾಗುತ್ತದೆ ಮತ್ತು ವ್ಯವಸ್ಥಾಪಕರಾದ ವಿ.ಪಿ. ಸಿಂಗ್ ಅವರ ನಡೆ ಕೂಡ ಆಕ್ಷೇಪಾರ್ಹ ಮತ್ತು ಖಂಡನೀಯ. ಆದ್ದರಿಂದ ಸೂಪರಿಂಟೆಂಡೆಂಟ್ ಪಿಂಕಿ, ಮ್ಯಾನೇಜರ್ ವಿ.ಪಿ. ಸಿಂಗ್, ಹೌಸ್ ಕೀಪರ್ ರವಿ ಮತ್ತು ಅಡುಗೆಯವರಾದ ಮೂರ್ತಿ ದೇವಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ" ಸೂಚನೆ ಮಾಡಲಾಗಿದೆ.
ಈ ಕುರಿತು ಮಹಿಳಾ ಅಧಿಕಾರಿಗಳ ತಂಡದಿಂದ ತನಿಖೆ ನಡೆಸುವಂತೆ ಸಹರಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ವಿಪಿನ್ ತಾಡಾ ಅವರಿಗೆ ಸೂಚಿಸಿರುವುದಾಗಿ ಡಿಎಂ ಚಂದ್ರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಎಲ್ಲಾ ಸಂಗತಿಗಳ ಮಾಹಿತಿಯನ್ನು ಪಡೆಯಬಹುದಾದ ಮಹಿಳಾ ಅಧಿಕಾರಿಗಳಿಂದ ವಿಷಯವನ್ನು ತನಿಖೆ ಮಾಡುವಂತೆ ನಾನು ಎಸ್ಎಸ್ಪಿಗೆ ಕೇಳಿದ್ದೇನೆ, ನಮ್ಮ ಮಟ್ಟದಲ್ಲಿ ಕ್ರಮ ಕೈಗೊಂಡು ಎಫ್ಐಆರ್ ದಾಖಲಿಸಿದ್ದೇವೆ. ಅನುಚಿತ ವರ್ತನೆ ತೋರಿದವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.












Click it and Unblock the Notifications