ಶ್ರೀಲಂಕಾ ಬಿಕ್ಕಟ್ಟು: ಕೇಂದ್ರ ಸರಕಾರದಿಂದ ಜುಲೈ 19ಕ್ಕೆ ಸರ್ವಪಕ್ಷಗಳ ಸಭೆ
ನವದೆಹಲಿ, ಜುಲೈ 17: ಶ್ರೀಲಂಕಾ ಬಿಕ್ಕಟ್ಟು ವಿಚಾರದಲ್ಲಿ ಭಾರತ ಮಧ್ಯ ಪ್ರವೇಶಿಸಬೇಕೆಂದು ತಮಿಳುನಾಡು ರಾಜಕೀಯ ಪಕ್ಷಗಳು ಒತ್ತಾಯ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜುಲೈ 19, ಮಂಗಳವಾರದಂದು ಸರ್ವಪಕ್ಷಗಳ ಸಭೆ ಕರೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ನೇತೃತ್ವದಲ್ಲಿ ಆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಈ ವಿಚಾರವನ್ನು ಮಾಧ್ಯಮಗಳಿಗೆ ಭಾನುವಾರ ತಿಳಿಸಿದರು. "ಲಂಕಾ ಬಿಕ್ಕಟ್ಟು ವಿಚಾರದ ಬಗ್ಗೆ ಮಾಹಿತಿ ನೀಡಲು ಮಂಗಳವಾರದಂದು ಮತ್ತೊಂದು ಸರ್ವಪಕ್ಷ ಸಭೆ ಕರೆದಿದ್ದೇವೆ. ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರು ಈ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ" ಎಂದು ಜೋಷಿ ಹೇಳಿದರು.
ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ: ಇಲ್ಲಿಯವರೆಗೆ ನಡೆದಿದ್ದೇನು?
ಇದಕ್ಕೆ ಮುನ್ನ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಶ್ರೀಲಂಕಾ ಬಿಕ್ಕಟ್ಟಿನ ವಿಚಾರದಲ್ಲಿ ಸಭೆ ನಡೆಸಿವೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಶ್ರೀಲಂಕಾದಲ್ಲಿ ಅತಿ ದೊಡ್ಡ ಆರ್ಥಿಕ ವಿಪತ್ತು ಸಂಭವಿಸುತ್ತಿದ್ದು, ಭಾರತ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕು ಎಂದು ಈ ಪಕ್ಷಗಳು ಒತ್ತಾಯಿಸಿವೆ.
ಶ್ರೀಲಂಕಾದಲ್ಲಿ ತಮಿಳು ಜನರು ಬಹಳಷ್ಟು ಇದ್ದಾರೆ. ಆರ್ಥಿಕ ದುಸ್ಥಿತಿಯಿಂದ ತಮಿಳರೂ ಬಾಧಿತರಾಗಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಭಾರತ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಎಐಎಡಿಎಂಕೆಯ ಎಂ ತಂಬಿದುರೈ ಮತ್ತು ಡಿಎಂಕೆ ಮುಖಂಡ ಟಿಆರ್ ಬಾಲು ಆಗ್ರಹಿಸಿದರು.
ಶ್ರೀಲಂಕಾ ಬಿಕ್ಕಟ್ಟು ಚೀನಾ ಹೂಡಿಕೆಯ ಭಾಗ: ಪನಗಾರಿಯಾ
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸರ್ವ ಪಕ್ಷಗಳ ಸಭೆ ಕರೆದಿದೆ. ಲಂಕಾಗೆ ಭಾರತ ಈವರೆಗೆ ಮಾಡಿರುವ ಸಹಾಯ ಹಾಗೂ ಮುಂದಿನ ದಿನಗಳಲ್ಲಿ ಕೊಡಬೇಕೆಂದಿರುವ ನೆರವು ಇತ್ಯಾದಿ ಮಾಹಿತಿಯನ್ನು ನಿರ್ಮಲಾ ಸೀತಾರಾಮನ್ ಮತ್ತು ಡಾ. ಜೈಶಂಕರ್ ನೀಡುವ ನಿರೀಕ್ಷೆ ಇದೆ. ಮಂಗಳವಾರ ಸಂಜೆ ೫:೩೦ಕ್ಕೆ ಈ ಸಭೆ ನಡೆಯುವ ಸಾಧ್ಯತೆ ಇದೆ.
ಭಾರತದ ಎಚ್ಚರದ ಪ್ರತಿಕ್ರಿಯೆ
ಶ್ರೀಲಂಕಾ ಬಿಕ್ಕಟ್ಟು ವಿಚಾರದಲ್ಲಿ ಭಾರತ ಬಹಳ ಎಚ್ಚರದಿಂದ ಸ್ಪಂದಿಸುತ್ತಿದೆ. ಅದರ ಪ್ರತಿಕ್ರಿಯೆ ಕೂಡ ಬಹಳ ರಾಜತಾಂತ್ರಿಕ ರೀತಿಯಲ್ಲೇ ಇದೆ.
"ಸಂವಿಧಾನಿಕ ಚೌಕಟ್ಟಿನ ಅಡಿಯಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಪ್ರಜಾತಾಂತ್ರಿಕ ವಿಧಾನ ಮತ್ತು ಮೌಲ್ಯಗಳ ಮೂಲಕ ಪ್ರಗತಿ ಕಾಣಬಯಸುವ ಶ್ರೀಲಂಕಾ ಜನರ ಜೊತೆ ಭಾರತ ನಿಲ್ಲುತ್ತದೆ" ಎಂದು ಕಳೆದ ವಾರದಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿಕೆ ನೀಡಿದ್ದರು.
ಭಾರತ ಮಾಡಿರುವ ಸಹಾಯ
ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ವಿವಿಧ ರೀತಿಯ ಸಣ್ಣಪುಟ್ಟ ನೆರವುಗಳನ್ನು ಒದಗಿಸುತ್ತಿದೆಯಾದರೂ ದೊಡ್ಡ ಮಟ್ಟದ ಸಹಾಯ ಯೋಜನೆಗೆ ಭಾರತ ಇನ್ನೂ ಮುಂದಾಗಿಲ್ಲ.
"ಶ್ರೀಲಂಕಾಗೆ ಭಾರತ ಅತಿ ಸಮೀಪ ಇರುವ ನೆರೆರಾಷ್ಟ್ರವಾಗಿದೆ. ಎರಡೂ ದೇಶಗಳು ಬಹಳ ಆಳವಾದ ನಾಗರಿಕ ಬಾಂಧವ್ಯದ ಸಂಬಂಧಗಳನ್ನು ಹೊಂದಿವೆ" ಎಂದು ಭಾರತ ಹೇಳಿದೆ.
ಶ್ರೀಲಂಕಾಗೆ 3.8 ಬಿಲಿಯನ್ ಯುಎಸ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂ) ಮೊತ್ತದಷ್ಟು ನೆರವಿನ ಬೆಂಬಲವನ್ನು ಭಾರತ ನೀಡಿದೆ. ಇದು ಈ ವರ್ಷಕ್ಕೆ ಭಾರತ ನಿಗದಿ ಮಾಡಿರುವ ಬೆಂಬಲವಾಗಿದೆ. ಔಷಧ ಇತ್ಯಾದಿ ಕೆಲ ಅಗತ್ಯ ವಸ್ತುಗಳನ್ನೂ ಭಾರತ ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಇನ್ನೂ ಹೆಚ್ಚಿನ ನೆರವು ಒದಗಿಸುವ ನಿರೀಕ್ಷೆ ಇದೆ. ಜುಲೈ ೧೯ರಂದು ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಬಗೆಹರಿಯದ ಲಂಕಾ ಬಿಕ್ಕಟ್ಟು
ವಿವಿಧ ಕಾರಣಗಳಿಂದಾಗಿ ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಅಧಃಪತನ ಕಂಡಿದೆ. ಕೋವಿಡ್ ಬಾಧೆ, ಅತಿಯಾದ ಸಾಲ, ಅನಗತ್ಯ ಯೋಜನೆಗಳು, ಅನಗತ್ಯ ಸಬ್ಸಿಡಿ, ಸಮರ್ಪಕ ಹಣಕಾಸು ನಿರ್ವಹಣೆ, ಅವಸರದ ಕೃಷಿ ನೀತಿ ಇತ್ಯಾದಿ ಅಂಶಗಳು ಶ್ರೀಲಂಕಾ ಆರ್ಥಿಕ ಮುಗ್ಗಟ್ಟಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ಪೆಟ್ರೋಲ್, ಆಹಾರ ಇತ್ಯಾದಿ ಅಗತ್ಯವಸ್ತುಗಳು ಸಿಗದೇ ಲಂಕನ್ನರು ಪರದಾಡುತ್ತಿದ್ದಾರೆ. ಪೆಟ್ರೋಲ್ ಆಮದು ಮಾಡಿಕೊಳ್ಳಲೂ ಲಂಕಾ ಸರಕಾರದ ಬಳಿ ಹಣ ಇಲ್ಲವಾಗಿದೆ. ಜನರು ಎರಡು ತಿಂಗಳಿಂದ ದಂಗೆ ಏಳುತ್ತಿದ್ದಾರೆ. ಹಿಂಸಾಚಾರ ನಡೆಸುತ್ತಿದ್ದಾರೆ. ರಾಜಪಕ್ಸೆ ಕುಟುಂಬದವರಿಂದಾಗಿ ಈ ಆರ್ಥಿಕ ದುಸ್ಥಿತಿ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಮಹಿಂದಾ ರಾಜಪಕ್ಷೆ ಮತ್ತು ಗೋಟಬಯ ರಾಜಪಕ್ಸೆ ಪ್ರಧಾನಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜಪಕ್ಸೆ ಕುಟಂಬ ಸದಸ್ಯರು ತಪ್ಪಿಸಿಕೊಂಡು ತಿರುಗುವಂತಾಗಿದೆ.
ಹೊಸ ಅಧ್ಯಕ್ಷರ ಆಯ್ಕೆ
ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸದ್ಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ರಾಜಪಕ್ಸೆ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಈಗ ಶ್ರೀಲಂಕಾದಲ್ಲಿ ಸರ್ವಪಕ್ಷಗಳೂ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ.
225 ಸದಸ್ಯಬಲದ ಶ್ರೀಲಂಕಾ ಸಂಸತ್ತು ಜುಲೈ 20ರಂದು ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಹಾಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆಯವರ ಹೆಸರೂ ಇದೆ.
ಶ್ರೀಲಂಕಾದ ಪ್ರಮುಖ ವಿಪಕ್ಷವಾದ ಸಾಮಗಿ ಜನ ಬಲವೇಗಯ ಪಕ್ಷದ ನಾಯಕ ಸಜಿತ್ ಪ್ರೇಮದಾಸ, ಹಾಲಿ ಸ್ಪೀರ್ ಮಹಿಂದಾ ಯಪ ಅಬೇವರ್ದನಾ ಮೊದಲಾದವರು ರೇಸ್ನಲ್ಲಿದ್ದಾರೆ.
(ಒನ್ಇಂಡಿಯಾ ಸುದ್ದಿ)