ಮೋದಿ, ಶಾ ತಲೆ ಕತ್ತರಿಸಿದರೆ ಬಹುಮಾನ: ಎಸ್ಪಿ ನಾಯಕನ ಹೇಳಿಕೆ
ನೋಟು ನಿಷೇಧದ ನಂತರ ದೇಶದ ಸ್ಥಿತಿ ತುರ್ತು ಪರಿಸ್ಥಿತಿಯಂತಾಗಿದ್ದು ಇದಕ್ಕೆ ಮೋದಿಯೇ ಕಾರಣ. ಮೋದಿ ಮತ್ತು ಅಮಿತ್ ಶಾ ಅವರ ತಲೆಯನ್ನು ಕಡಿದು ತಂದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಮುಖಂಡನೊಬ್ಬ ವಿವಾದಕಾರಿ ಹೇಳಿಕೆ.
ಆಗ್ರಾ, ಡಿ 10: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತಲೆಯನ್ನು ಕಡಿದು ತಂದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ಮುಖಂಡನೊಬ್ಬ ವಿವಾದಕಾರಿ ಹೇಳಿಕೆ ನೀಡಿದ್ದಾನೆ.
ಉತ್ತರಪ್ರದೇಶದ ಭಾಗ್ಪತ್ ಜಿಲ್ಲೆಯ ಮಾಜಿ ಯುವ ಘಟಕದ ಅಧ್ಯಕ್ಷ ತರುಣ್ ದಿಯೋ ಯಾದವ್, ನೋಟು ನಿಷೇಧದ ನಂತರ ದೇಶದ ಸ್ಥಿತಿ ತುರ್ತು ಪರಿಸ್ಥಿತಿಯಂತಾಗಿದ್ದು ಇದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ತರುಣ್ ಅಬ್ಬರಿಸಿದ್ದಾನೆ. (ವಿರೋಧ ಪಕ್ಷಗಳಿಂದ ಹಳೆ ನೋಟುಗಳ ತಿಂಗಳ ತಿಥಿ)
ಮೋದಿ ಮತ್ತು ಅಮಿತ್ ಶಾ ಅವರಿಗೆ ಧೈರ್ಯವಿದ್ದರೆ ಭಾಗ್ಪತ್ ಜಿಲ್ಲೆಗೆ ಪ್ರವೇಶಿಸಿ ಇಲ್ಲಿ ಸಾರ್ವಜನಿಕ ಸಭೆ ನಡೆಸಲಿ ಎಂದು ಚಾಲೆಂಜ್ ಮಾಡಿರುವ ತರುಣ್, 2002ರ ಗೋಧ್ರಾ ನರಮೇಧಕ್ಕೆ ಹೇಗೆ ಮೋದಿ ಹೊಣೆಯೋ ಈಗಿನ ದೇಶದ ಪರಿಸ್ಥಿತಿಗೆ ಮೋದಿಯೇ ನೇರ ಹೊಣೆ ಎಂದಿದ್ದಾನೆ.
ಡಿಸೆಂಬರ್ ಏಳರ ದಿನಾಂಕದಂದು ಯುವಜನ ಸಭಾ, ಸಮಾಜವಾದಿ ಪಕ್ಷದ ಲೆಟರ್ ಹೆಡ್ ನಲ್ಲಿ ಪತ್ರ ಬರೆದಿರುವ ತರುಣ್, ಮಧ್ಯಮ ವರ್ಗದ ಜನರು ನೋಟು ನಿಷೇಧದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರಿಗೆ ವೇತನ ಸಿಗುತ್ತಿಲ್ಲ ಎಂದು ತನ್ನ ಪತ್ರದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾನೆ.
ವಿಡಿಯೋ ಮೂಲಕವೂ ಮೋದಿ ಮತ್ತು ಅಮಿತ್ ಶಾಗೆ ಚಾಲೆಂಜ್ ಮಾಡಿರುವ ತರುಣ್, ಇವರಿಬ್ಬರ ತಲೆಯನ್ನು ಕಡಿದು ತಂದವರಿಗೆ ಸೂಕ್ತ ಬಹುಮಾನ ಕೊಡಲಾಗುವುದು ಎನ್ನುವ ಹೇಳಿಕೆಯನ್ನು ನೀಡಿದ್ದಾನೆ.
ಹಿರಿಯ ನಾಗರೀಕರು ಹಣಕ್ಕಾಗಿ ಕ್ಯೂನಲ್ಲಿ ಪರದಾಡುವಂತಾಗಿದೆ, ಕ್ಯೂನಲ್ಲಿ ನಿಂತವರೆಲ್ಲಾ ಮೋದಿಯನ್ನು ಟೀಕಿಸುತ್ತಿದ್ದಾರೆ. ಇಂತಹ ಸರಕಾರ ಆದಷ್ಟು ಬೇಗ ತೊಲಗಬೇಕು ಎಂದು ತರುಣ್ ಹೇಳಿದ್ದಾನೆ.
ತರುಣ್ ಹೇಳಿಕೆಗೂ ಸಮಾಜವಾದಿ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಪಕ್ಷದ ವಕ್ತಾರ ಮೊಹಮ್ಮದ್ ಶಯೀದ್ ಹೇಳಿದ್ದಾರೆ. ತರುಣ್ ವಿರುದ್ದ FIR ದಾಖಲಿಸಲಾಗಿದೆ ಎಂದು ಭಾಗ್ಪತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ರೈ ಹೇಳಿದ್ದಾರೆ.