ಕೇರಳ ಪ್ರವೇಶಿಸಿದ ಮುಂಗಾರು, ರಾಜ್ಯಕ್ಕೆ ಯಾವಾಗ?
ತಿರುವನಂತಪುರ, ಜೂನ್ 08: ಅಂತಿಮವಾಗಿ ನೈಋತ್ಯ ಮುಂಗಾರು ಮಾರುತಗಳು ಮಂಗಳವಾರ ತಡರಾತ್ರಿ ಕೇರಳ ಸಮುದ್ರ ತೀರವನ್ನು ಅಪ್ಪಳಿಸಿವೆ.ಪರಿಣಾಮ ತಮಿಳುನಾಡು ಮತ್ತು ಕೇರಳ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುತ್ತಿದೆ.
ಮಾನ್ಸೂನ್ ಮಾರುತಗಳ ಪ್ರವೇಶವನ್ನು ದೃಢಪಡಿಸಿರುವ ಕೇಂದ್ರ ಹವಾಮಾನ ಇಲಾಖೆಯ ಕೆ ಸಂತೋಷ್, ನೈಋತ್ಯ ಮುಂಗಾರು ಮಾರುತಗಳು ಕೇರಳ ಮತ್ತು ಲಕ್ಷದ್ವೀಪ ಪ್ರವೇಶಿಸಿದ್ದು ಮಳೆ ಸುರಿಸಲು ಆರಂಭಿಸಿವೆ ಎಂದು ತಿಳಿಸಿದ್ದಾರೆ.[ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]

ಮೊದಲು ಜೂನ್ ಏಳಕ್ಕೆ ಮಾರುತಗಳು ಕೇರಳ ಪ್ರವೇಶ ಮಾಡಲಿವೆ ಎಂದು ಹೇಳಿದ್ದ ಹವಾಮಾನ ಇಲಾಖೆ ನಂತರ ಜೂನ್ 9ಕ್ಕೆ ಮಾನ್ಸೂನ್ ಆಗಮನ ಆಗಲಿದೆ ಎಂದು ಹೇಳಿತ್ತು. ಆದರೆ ಮೊದಲು ನೀಡಿದ ವರದಿಯಂತೆ ಜೂನ್ 7ಕ್ಕೆ ಕೇರಳವನ್ನು ಮಾನ್ಸೂನ್ ಪ್ರವೇಶ ಮಾಡಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿ 36 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತನನ್ನು ಎಸ್ ಎಫ್ ಐ ಸಂಘಟನೆಯ ಮುಖ್ಯಸ್ಥ ಜೋಬಿ ಜಾನ್ ಎಂದು ಗುರುತಿಸಲಾಗಿದೆ.[ಬೆಂಗಳೂರಿನಲ್ಲಿ ಒಂದೇ ಗಂಟೆಯಲ್ಲಿ 81 ಮಿ.ಮೀ. ಮಳೆ!]
ಎರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು
ಕೇಂದ್ರ ಹವಾಮಾನ ಇಲಾಖೆ ಹೇಳುವಂತೆ ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ಮಾರುತಗಳು ಕರ್ನಾಟಕದ ಕರಾವಳಿ ತೀರ ಪ್ರದೇಶವನ್ನು ಪ್ರವೇಶ ಮಾಡಲಿವೆ. ಈಗಾಗಲೇ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮಳೆ ಆರಂಭವಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಕರ್ನಾಟಕದ ಹಲವೆಡೆ ಮುಂಗಾರು ಪೂರ್ವ ಮಳೆ ಅಬ್ಬರ ತೋರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 10 ಸೆಂಮೀ, ಹಳಿಯಾಳದಲ್ಲಿ 8 ಸೆಂಮೀ ಮಳೆ ದಾಖಲಾಗಿದೆ. ಬೆಂಗಳೂರು ನಗರ, ದಾವಣಗೆರೆ, ಅಂಕೋಲಾ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಉಡುಪಿ, ಸಂತೆಬೆನ್ನೂರು, ತಿಪಟೂರು , ಕೊರಟಗೆರೆಯಲ್ಲಿ, ಮಾಲೂರಲ್ಲಿ ಮಳೆ ಬಿದ್ದಿದೆ.












Click it and Unblock the Notifications