ದಕ್ಷಿಣ ಭಾರತದ ದೇಗುಲಗಳ ಮೇಲೆ ಉಗ್ರರ ಕರಿನೆರಳು
ಬೆಂಗಳೂರು, ಏ.27: ದಕ್ಷಿಣ ಭಾರತದ ದೇಗುಲಗಳ ಮೇಲೆ ಭಯೋತ್ಪಾದಕರ ಕರಿನೆರಳು ಬಿದ್ದಿದೆ. ದೇವಸ್ಥಾನಗಳನ್ನು ಸ್ಫೋಟಿಸುವ ಸಂಚು ರೂಪಿಸಲಾಗುತ್ತಿದೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ಹೊರ ಹಾಕಿದೆ. ಇದರ ಬೆನ್ನಲ್ಲೇ ರಾಜ್ಯ ಪೊಲೀಸರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಗೃಹ ಸಚಿವಾಲಯ ನಿರ್ದೇಶಿಸಿದೆ.
ಕೇರಳದ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಐದು ಪೈಪ್ ಬಾಂಬ್ ಗಳು ಭಾನುವಾರ ಪತ್ತೆಯಾದ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ವಿಜಯವಾಡದ ಕನಕ ದುರ್ಗಾ ದೇಗುಲ ಉಗ್ರರ ಟಾರ್ಗೆಟ್ ಪಟ್ಟಿ ಸೇರಿರುವ ಹೊಸ ದೇವಸ್ಥಾನ ಎನಿಸಿದೆ.
ದಕ್ಷಿಣ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ ಹಾಗೂ ನಕ್ಸಲೈಟ್ ಗಳು ಸಂಚು ರೂಪಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ಶ್ರೀಲಂಕಾದ ಐಎಸ್ ಐಗಳು ತಮಿಳುನಾಡಿನಲ್ಲಿ 26/11 ಮಾದರಿ ದಾಳಿ ನಡೆಸಲು ಸಂಚು ರೂಪಿಸಿದ್ದನ್ನು ಎನ್ ಐಎ ಹಾಗೂ ಚೆನ್ನೈ ಪೊಲೀಸರು ಪತ್ತೆ ಹಚ್ಚಿದ್ದರು.

ದೇಗುಲಗಳೇ ಟಾರ್ಗೆಟ್ ಏಕೆ?
ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರೆ ಜನರ ನಂಬಿಕೆ ಕೊಡಲಿ ಪೆಟ್ಟು ಬೀಳುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯಲು ದುಷ್ಕರ್ಮಿಗಳಿಗೆ ಸುಲಭವಾಗುತ್ತದೆ. ಮೂಲಭೂತವಾದಿಗಳು, ಧರ್ಮ ಯುದ್ಧ ಎಂದೇ ಕರೆಯುವ ಮೂಢ ಭಯೋತ್ಪಾದಕರು ಮತ್ತೊಂದು ಧರ್ಮದ ಮೇಲೆ ಪ್ರಹಾರ ನಡೆಸುವುದು ಮಾಮೂಲಿ. ಈ ಕೆಲಸ ನಕ್ಸಲರು ಮಾಡುವುದಿಲ್ಲ.
ದಕ್ಷಿಣ ಭಾರತದಲ್ಲೂ ಅನೇಕ ಭಯೋತ್ಪಾದನಾ ಸಂಘಟನೆಗಳ ಸ್ಲೀಪಿಂಗ್ ಸೆಲ್ ಗಳಿವೆ. ಈ ರೀತಿ ಸಂಚು ರೂಪಿಸುತ್ತಿರುವುದು ತಿಳಿದರೆ ದಾಳಿ ನಡೆಸಲು ಎಲ್ಲಾ ಸಂಘಟನೆಗಳು ಒಟ್ಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಧಾರ್ಮಿಕ ಕೇಂದ್ರಗಳ ಮೇಲೆ ದೊಡ್ಡ ಮಟ್ಟದ ದಾಳಿ ಅವರ ಮುಖ್ಯ ಟಾರ್ಗೆಟ್ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಒಂಡಿಯಾಕ್ಕೆ ತಿಳಿಸಿದ್ದಾರೆ.
ಕನಕ ದುರ್ಗಾ ದೇಗುಲಕ್ಕೆ ಭೀತಿ
ಸಿಮಿ ಸಂಘಟನೆಗೆ ಸೇರಿದ ಕೆಲ ಯುವಕರು ವಿಜಯವಾಡದ ಕನಕ ದುರ್ಗಾ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಆಂಧ್ರಪ್ರದೇಶ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ತಿರುಪತಿ, ಶ್ರೀಶೈಲಂ ಸೇರಿದಂತೆ ಪ್ರಮುಖ ದೇಗುಲಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರ ಜೊತೆಗೆ ಜನಪ್ರಿಯವಾಗಿರುವ ಸಣ್ಣ ಪುಟ್ಟ ದೇಗುಲಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications