ದಕ್ಷಿಣ ಭಾರತದ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಶೀಘ್ರ ಚಾಲನೆ
ಅಮರಾವತಿ, ನವೆಂಬರ್ 17: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಮೈಸೂರಿಂದ ಚೆನ್ನೈ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ಈಗ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತದ ಅತಂತ್ಯ ವೇಗದ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಶೀಘ್ರವೇ ಲಭ್ಯವಾಗುವ ಸಾಧ್ಯತೆ ಇದೆ. ಈ ಸೆಮಿ ಹೈಸ್ಪೀಡ್ ಎಲೆಕ್ಟ್ರಿಕ್ ರೈಲು ಪ್ರಸ್ತಾವಿತ ಮಾರ್ಗದಲ್ಲಿ ಸುಮಾರು 6 ಗಂಟೆಗಳ ಕಾಲ ಪ್ರಯಾಣದ ಸಮಯವನ್ನು ಕಡಿತ ಮಾಡಲಿದೆ ಎನ್ನಲಾಗಿದೆ.
ವಿಜಯವಾಡದ ಮೂಲಕ ವಿಶಾಖಪಟ್ಟಣಂ ಮಾರ್ಗ ಸಿಕಂದರಾಬಾದ್ ಮಾರ್ಗಕ್ಕೆ ನೀಡಲಾಗುತ್ತಿರುವ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜನ್ಮಭೂಮಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ. ಹಿಂದಿನ ಹನ್ನೆರಡರಿಂದ 12, 14 ಗಂಟೆಗಳಿಗೆ ಹೋಲಿಸಿದರೆ ಪ್ರಯಾಣಿಕರು ವಿಶಾಖಪಟ್ಟಣಂನಿಂದ ಪ್ರಯಾಣಿಕರು ಈಗ 8 ಗಂಟೆಗಳಲ್ಲಿ ಸಿಕಂದರಾಬಾದ್ ತಲುಪಬಹುದಾಗಿದೆ.
ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್ಗೆ ರೈಲಿನ ನಿಖರವಾದ ಮಾರ್ಗವನ್ನು ರೈಲ್ವೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಆದರೆ ಇದು ಆರಂಭದಲ್ಲಿ ವೈಜಾಗ್ ಮತ್ತು ವಿಜಯವಾಡ ನಡುವೆ ಚಲಿಸುತ್ತದೆ ಹಾಗೂ ನಂತರ ಸಿಕಂದರಾಬಾದ್ಗೆ ಸಂಪರ್ಕಿಸುತ್ತದೆ ಎಂದು ಮೂಲಗಳು ಹೇಳುತ್ತಿವೆ. ಅದ್ಯಾಗೂ ಡಿಸೆಂಬರ್ ಮೊದಲ ವಾರದ ವೇಳೆಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಶೀಘ್ರ ಪ್ರಾಯೋಗಿಕ ಸಂಚಾರ ಆರಂಭ
ರೈಲ್ವೆ ಅಧಿಕಾರಿಗಳು ಹೇಳುವ ಪ್ರಕಾರ ವರ್ಷಾಂತ್ಯದ ವೇಳೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಿಜಯವಾಡದ ಹಳಿಗಳ ಮೇಲೆ ಬರುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಶೀಘ್ರ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ಈ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಓಡಾಟವನ್ನು ವಿಶಾಖಪಟ್ಟಣಂ ಮತ್ತು ವಿಜಯವಾಡ ನಡುವೆ ನಡೆಸಲು ನಿರ್ಧರಿಸಲಾಗಿದೆ. ಇಲ್ಲಿ ಕ್ರಮಿಸುವ ಪ್ರಯಾಣ ಅವಧಿಯು ತಲಾ 4 ಗಂಟೆಗಳಾಗಿತ್ತದೆ ಎಂದು ತಿಳಿಸಿದ್ದಾರೆ.

ಎಸಿ ರೈಲಿನಲ್ಲಿ 1,128 ಆಸನ ಸಾಮರ್ಥ್ಯ
16 ಕೋಚ್ಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಎಸಿ ರೈಲು 1,128 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು 52 ಸೆಕೆಂಡ್ಗಳಲ್ಲಿ ಬರೋಬ್ಬರಿ 100 ಕಿಮೀ ವೇಗ ಪಡೆದುಕೊಳ್ಳುತ್ತದೆ. ಆದರೆ ನಮ್ಮಲ್ಲಿ ಅಸ್ತಿತ್ವದಲ್ಲಿರುವ ರೈಲು ಹಳಿಗಳು 160 ಕಿಮೀ ವೇಗಕ್ಕೆ ಹೊಂದಿಕೊಳ್ಳುತ್ತವೆ. ಈ ಮಾರ್ಗಕ್ಕೆ ಅದರ ಹೊಂದಾಣಿಕೆಗೆ ಕಾಮಗಾರಿ ಆರಂಭಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಡ, ಸಿಕಂದರಾಬಾದ್ ಪ್ರಯಾಣಿಕರಿಗೆ ವರದಾನ
ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಈಗ ಬರುವ ದಕ್ಷಿಣ ಭಾರತದ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿ ಉದ್ದೇಶಿತ ಮಾರ್ಗ ವಿಶಾಖಪಟ್ಟಣ ಮತ್ತು ಸಿಕಂದರಾಬಾದ್ ನಡುವೆ ಇರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. ಎರಡನೇ ತಲೆಮಾರಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶೀಘ್ರದಲ್ಲೇ ವಿಶಾಖಪಟ್ಟಣಂ, ವಿಜಯವಾಡ ಮತ್ತು ಸಿಕಂದರಾಬಾದ್ ನಡುವೆ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

456 ಕೋಟಿ ವೆಚ್ಚದಲ್ಲಿ ಕಾಮಗಾರಿ
ನವೆಂಬರ್ 14ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ವಾಲ್ಟೇರ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಕುಮಾರ್ ಸತ್ಪತಿ ಅವರು ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಎರಡು ಹೊಸ ಫ್ಲಾಟ್ಫಾರಂಗಳು ಬರಲಿವೆ ಎಂದು ತಿಳಿಸಿದ್ದಾರೆ. 456 ಕೋಟಿ ವೆಚ್ಚದಲ್ಲಿ ಈ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯನ್ನು ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications