ಎಸ್.ಎಲ್ ಭೈರಪ್ಪ, ಶ್ರೀ ಶ್ರೀ ರವಿಶಂಕರ್ ಗೆ ಪದ್ಮ ಪ್ರಶಸ್ತಿ?
ಬೆಂಗಳೂರು, ಜ.12: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ ಹಾಗೂ ಬಾಬಾ ರಾಮ್ ದೇವ್ ಅವರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡಲು ಮೋದಿ ಸರ್ಕಾರ ಮುಂದಾಗಿರುವ ಸುದ್ದಿ ಬಂದಿತ್ತು. ಈಗ ಈ ಸಾಲಿಗೆ ಪ್ರೊ. ಎಸ್ ಎಲ್ ಭೈರಪ್ಪ ಹಾಗೂ ರವಿಶಂಕರ್ ಗುರೂಜಿ ಸೇರ್ಪಡೆಯಾಗಿದ್ದಾರೆ.
ಯೋಗ ಗುರು ಬಾಬಾ ರಾಮದೇವ್ ಅವರಿಗೆ ಪದ್ಮಶ್ರೀ, ಎಲ್ ಕೆ ಅಡ್ವಾಣಿ ಅವರಿಗೆ ಪದ್ಮ ವಿಭೂಷಣ ಜೊತೆಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ,, ಆರ್ಟ್ ಆಫ್ ಲೀವಿಂಗ್ನ ರವಿಶಂಕರ್ ಗುರೂಜಿ ಸೇರಿದಂತೆ ಹಲವರಿಗೆ ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. [ಎಲ್ ಕೆ ಅಡ್ವಾಣಿ ಹಾಗೂ ರಾಮದೇವ್ ಗೆ ಪದ್ಮ ಪ್ರಶಸ್ತಿ?]
ಜ. 25ರಂದು ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2014-15ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. [ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

ಕೇಂದ್ರ ಸರ್ಕಾರ ಇದೇ 25ರಂದು ಸಂಜೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಲಿದ್ದು , ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಈ ಪ್ರಶಸ್ತಿ ಲಭಿಸುವುದು ಬಹುತೇಕ ಖಚಿತವಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಎಲ್.ಬೈರಪ್ಪ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ಇನ್ನು ಆಧ್ಯಾತ್ಮದ ಮೂಲಕ ವಿಶ್ವವಿಖ್ಯಾತಿ ಗಳಿಸಿ ವಿಶ್ವಶಾಂತಿಗಾಗಿ ಶ್ರಮಿಸುತ್ತಿರುವ ರವಿಶಂಕರ್ ಗುರೂಜಿಗೂ ಈ ಪ್ರಶಸ್ತಿ ನೀಡುವುದು ಬಹುತೇಕ ಖಚಿತವಾಗಿದೆ. (ಏಜೆನ್ಸೀಸ್)












Click it and Unblock the Notifications