Sinking Joshimath: ರಿಷಿಕೇಶ, ಮಸ್ಸೂರಿ, ನೈನಿತಾಲ್ನ ಮನೆಗಳಲ್ಲೂ ಕಾಣಿಸಿಕೊಂಡ ಬಿರುಕು!
ಜೋಶಿಮಠದ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು ಸುತ್ತಲು ಪ್ರದೇಶದಲ್ಲಿ ವಾಸಿಸುವ ಜನರಲ್ಲೂ ಆತಂಕವನ್ನುಂಟು ಮಾಡಿದೆ. ಸದ್ಯ ಉತ್ತರಾಖಂಡದ ಹಲವು ಪ್ರದೇಶದಲ್ಲಿ ಸ್ಥಿತಿಗತಿ ಹೇಗಿದೆ?
ಜೋಶಿಮಠದ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು ಸುತ್ತಲು ಪ್ರದೇಶದಲ್ಲಿ ವಾಸಿಸುವ ಜನರಲ್ಲೂ ಆತಂಕವನ್ನುಂಟು ಮಾಡಿದೆ. ಸದ್ಯ ಉತ್ತರಾಖಂಡದ ಋಷಿಕೇಶ, ಮಸ್ಸೂರಿ, ನೈನಿತಾಲ್ನಂತಹ ಅನೇಕ ಬೆಟ್ಟದ ಪಟ್ಟಣಗಳಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ಕಟ್ಟಡಗಳು ಮತ್ತು ರಸ್ತೆಗಳಲ್ಲಿನ ಬಿರುಕುಗಳಿಂದ ತಮ್ಮ ಜೀವಕ್ಕೂ ಅಪಾಯವಿದೆ ಎಂದು ಈ ನಗರಗಳಲ್ಲಿ ವಾಸಿಸುವ ನಾಗರಿಕರು ಬೆದರಿದ್ದಾರೆ.
ಜನವರಿಯ ಆರಂಭದಲ್ಲಿ ಜೋಶಿಮಠದಲ್ಲಿ ಮನೆ, ರಸ್ತೆಗಳು, ದೇವಸ್ಥಾನಗಳಲ್ಲಿ ಬಿರುಕು ಕಾಣಿಸಿಕೊಂಡಿತು. ಇದಾದ ಬಳಿಕ ಬಿರುಕು ಸುತ್ತಲ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಇನ್ನೂ ನಿರ್ಮಾಣ ಹಂತದಲ್ಲಿರುವ 520 ಮೆಗಾವ್ಯಾಟ್ ತಪೋವನ-ವಿಷ್ಣುಗಢ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ನೀರು ತುಂಬಿಕೊಂಡ ಪರಿಣಾಮ ನಗರದ ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆತಂಕಗೊಂಡ ನಿವಾಸಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜೋಶಿಮಠದ ಜೊತೆಗೆ ಹಿಮಾಲಯ ರಾಜ್ಯದ ಕರ್ಣಪ್ರಯಾಗ, ಉತ್ತರಕಾಶಿ ಸೇರಿದಂತೆ ಹಲವೆಡೆ ಈಗ ಬಿರುಕು ಕಾಣಿಸಿಕೊಂಡಿದೆ.
ಋಷಿಕೇಶದ ಅಟಾಳಿ ಗ್ರಾಮದ 85 ಮನೆಗಳಲ್ಲಿ ಬಿರುಕು
ರಿಷಿಕೇಶದ ಅಟಾಳಿ ಗ್ರಾಮದಲ್ಲಿ ಕನಿಷ್ಠ 85 ಮನೆಗಳು ಬಿರುಕು ಬಿಟ್ಟಿವೆ. ಸ್ಥಳೀಯ ಜನರ ಪ್ರಕಾರ ರಿಷಿಕೇಶ-ಕರ್ಣಪ್ರಯಾಗ ರೈಲು ಯೋಜನೆಗಾಗಿ ಸುರಂಗ ಮಾಡಿರುವುದೇ ಈ ಬಿರುಕುಗಳಿಗೆ ಕಾರಣ ಎನ್ನಲಾಗುತ್ತದೆ. ಇಲ್ಲಿನ ಮನೆಗಳು ಮಾತ್ರವಲ್ಲದೆ ಕೃಷಿ ಹೊಲಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತೆಹ್ರಿ ಗರ್ವಾಲ್, ವಿಶೇಷವಾಗಿ ಚಂಬಾದ ಕುಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶ ಬಿರುಕುಗಳು ಮತ್ತು ಮಣ್ಣಿನ ಕುಸಿತಕ್ಕೆ ಗುರಿಯಾಗಿದೆ. ಚಂಬಾದ ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ ಚಾರ್ ಧಾಮ್ ರಸ್ತೆ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ 440 ಮೀಟರ್ ಉದ್ದದ ಸುರಂಗದ ಸಮೀಪವೇ ಹೆಚ್ಚಿನ ಹಾನಿಗೊಳಗಾದ ಮನೆಗಳು ಇವೆ.
ಕರ್ಣಪ್ರಯಾಗದಲ್ಲೂ ಜನರು ಅಸಮಾಧಾನ
ಜೋಶಿಮಠದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕರ್ಣಪ್ರಯಾಗದ ಸ್ಥಳೀಯ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ. ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಮತ್ತು ಚಾರ್ ಧಾಮ್ ಸರ್ವಋತು ರಸ್ತೆಗಾಗಿ ಇನ್ನೂ ಎರಡು ಯೋಜನೆಗಳ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಜೋಶಿಮಠದಂತೆಯೇ ತಮ್ಮ ಪಟ್ಟಣವೂ ಮುಳುಗುತ್ತದೆ ಎಂದು ಜನರು ಚಿಂತಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಲೂ ಅನೇಕ ಮನೆಗಳಲ್ಲಿ ಬಿರುಕುಗಳು ಕಂಡುಬಂದಿವೆ. ಇದರಿಂದಾಗಿ ಮುನ್ಸಿಪಲ್ ಕೌನ್ಸಿಲ್ನ ಮಳೆ ಆಶ್ರಯದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿದ್ದು ಅಪಾಯದಲ್ಲಿರುವ ಕುಟುಂಬಗಳಿಗೂ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗುತ್ತಿದೆ. ಗಂಗೋತ್ರಿ, ಯಮುನೋತ್ರಿ, ಬದರಿನಾಥ್ ಮತ್ತು ಕೇದಾರನಾಥದ ಚಾರ್ ಧಾಮ್ ದೇವಾಲಯಗಳಿಗೆ ಪ್ರಯಾಣವನ್ನು ಸುಗಮಗೊಳಿಸಲು ಹಲವಾರು ಯೋಜನೆಗಳನ್ನು ಮಾಡಲಾಗಿದೆ.
ಬದರಿನಾಥದಲ್ಲಿ ನೇತಾಡುತ್ತಿದೆ ಜನರ ಸೂರು
ಬದರಿನಾಥ್ ಹೆದ್ದಾರಿಯ ಬಹುಗುಣ ನಗರದಲ್ಲಿ ಕೆಲವು ಮನೆಗಳು ಅಪಾಯಕಾರಿಯಾಗಿ ಮೇಲ್ಛಾವಣಿಗಳನ್ನು ಹೊಂದಿದ್ದು, ಇಪ್ಪತ್ತಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. ಅಲಕನಂದಾ ಮತ್ತು ಪಿಂಡಾರ್ ನದಿಗಳ ಸಂಗಮದಲ್ಲಿರುವ ಈ ಪಟ್ಟಣದಲ್ಲಿ ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆ, ಚಾರ್ ಧಾಮ್ ರಸ್ತೆ ಯೋಜನೆಗಾಗಿ ಬೆಟ್ಟಗಳನ್ನು ಕತ್ತರಿಸುವುದು ಮತ್ತು ಜನಸಂಖ್ಯೆಯ ಒತ್ತಡವು ಈಗಾಗಲೇ ಕಷ್ಟಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ನಿವಾಸಿಗಳು ಹೇಳುತ್ತಾರೆ.
ಮಸ್ಸೂರಿ ಮತ್ತು ನೈನಿತಾಲ್ ಜನರು ಏನು ಹೇಳುತ್ತಾರೆ?
ಒಂದು ಶತಮಾನದಷ್ಟು ಹಳೆಯದಾದ ಮಸ್ಸೂರಿಯ ಲ್ಯಾಂಡ್ಡರ್ ಮಾರುಕಟ್ಟೆಯ ನಿವಾಸಿಗಳು, ರಸ್ತೆಯ ಒಂದು ಭಾಗ ನಿಧಾನವಾಗಿ ಬಿರುಕುಗಳನ್ನು ಬಿಟ್ಟಿದ್ದು ಅಗಲವಾಗುತ್ತಿದೆ ಎಂದು ಹೇಳುತ್ತಾರೆ. ಪ್ರಸ್ತುತ 500 ಕ್ಕೂ ಹೆಚ್ಚು ಜನರು ದುರ್ಬಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಮಾರುಕಟ್ಟೆಯಲ್ಲಿರುವ 12 ಅಂಗಡಿಗಳನ್ನು ತೆರವು ಮಾಡಲಾಗಿದೆ. ಅದೇ ರೀತಿ, ನೈನಿತಾಲ್ನ ಲೋವರ್ ಮಾಲ್ ರಸ್ತೆಯು 2018 ರಲ್ಲಿ ಒಡೆಯಲು ಪ್ರಾರಂಭಿಸಿತು ಮತ್ತು ಅದರ ಕೆಲವು ಭಾಗವು ಸರೋವರದಲ್ಲಿ ಮುಳುಗಲು ಪ್ರಾರಂಭಿಸಿತು. ಹದಗೆಟ್ಟಿದ್ದರೂ ಈಗ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ಒಂದು ಭಾಗ ಮತ್ತೆ ಮುಳುಗಡೆಯಾಗಿದೆ.