ಮುಳುಗುತ್ತಿರುವ Joshimath: 600 ಕುಟುಂಬಗಳ ಸ್ಥಳಾಂತರ - ಇಂದು ಸಿಎಂ ಧಾಮಿ ಭೇಟಿ !
ದಿನೇ ದಿನೇ ಉತ್ತರಾಖಂಡದ ಜೋಶಿಮಠ ಪಟ್ಟಣದ ನಿವಾಸಿಗಳಿಗೆ ಆತಂಕ ಹೆಚ್ಚಾಗುತ್ತಿದೆ. ಮನೆಗಳು, ಬೃಹತ್ ಕಟ್ಟಡು, ರಸ್ತೆಗಳು, ದೇವಾಲಯಗಳ ಗೋಡೆಗಳಲ್ಲಿ ಕಾಣಿಸಿಕೊಂಡ ಬೃಹತ್ ಬಿರುಕುಗಳು ಎಚ್ಚರಿಕೆಯ ಗಂಟೆಗಳನ್ನು ಬಾರಿಸಿದೆ. ಪ್ರತೇ ಗಂಟೆಗೂ ಗೋಡೆಗಳಲ್ಲಿ ರಸ್ತೆಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿದ್ದು ಜನ ಪ್ರಾಣ ಅಂಗೈಯಲ್ಲಿಡಿದು ವಾಸಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತೀವ್ರ ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತ, ಭೂಕಂಪನ ಚಟುವಟಿಕೆ ಮತ್ತು ಯೋಜಿತವಲ್ಲದ ಅಭಿವೃದ್ಧಿಯಿಂದಾಗಿ ಭೂಗರ್ಭದಲ್ಲಿ ನೀರು ಹರಿಯುತ್ತಿದ್ದು ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಈ ಅವ್ಯವಸ್ಥೆ ಸೃಷ್ಟಿಯಾದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಹಿಮಾಚಲ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದರು. ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸರ್ಕಾರ ಹಿಮಾಲಯ ಪಟ್ಟಣದಲ್ಲಿ ದುರಂತವನ್ನು ತಪ್ಪಿಸಲು ಶುಕ್ರವಾರ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಪಾಯದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ 600 ಕುಟುಂಬಗಳನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಲಾಗಿದೆ.
|
ಇಂದು ಸಿಎಂ ಧಾಮಿ ಭೇಟಿ
ಧಾಮಿ ಕೂಡ ಇಂದು ಜೋಶಿಮಠಕ್ಕೆ ಭೇಟಿ ನೀಡಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಸಂಖ್ಯೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ಡಿಆರ್ಎಫ್ ತಂಡಗಳನ್ನು ನಿಯೋಜಿಸಬೇಕು ಮತ್ತು ಅಗತ್ಯವಿದ್ದರೆ ಹೆಲಿಕಾಪ್ಟರ್ ಸೌಲಭ್ಯವನ್ನು ಒದಗಿಸಲಾಗುವುದು ಎಂದಿದ್ದಾರೆ.
ಎನ್ಟಿಪಿಸಿಯ ತಪೋವನ-ವಿಷ್ಣುಗಢ ಜಲವಿದ್ಯುತ್ ಯೋಜನೆ ಮತ್ತು ಮಾರ್ವಾಡಿ-ಹೇಲಂಗ್ ಬೈಪಾಸ್ ಮೋಟಾರ್ ರಸ್ತೆಯನ್ನು ಆಡಳಿತದ ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚಲಾಗಿದೆ. ಇದರೊಂದಿಗೆ ಜೋಶಿಮಠ-ಔಲಿ ರೋಪ್ವೇಯನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದೆ. ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗೂ ನಿರ್ಬಂಧ ಹೇರಲಾಗಿದೆ.
|
ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ:
*ಜೋಶಿಮಠದಲ್ಲಿ ಭಾರೀ ಬಿರುಕು ಬಿಟ್ಟಿರುವ ಮತ್ತು ಅಪಾಯದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಉತ್ತರಾಖಂಡ ಸರ್ಕಾರ ಆದೇಶಿಸಿದೆ.
*"ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜೋಶಿಮಠದಲ್ಲಿ ಅಳಿವಿನಂಚಿನಲ್ಲಿರುವ ಮನೆಗಳಲ್ಲಿ ವಾಸಿಸುವ ಸುಮಾರು 600 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೋಶಿಮಠದಲ್ಲಿನ ಪರಿಸ್ಥಿತಿಯನ್ನು ಪರಿಹರಿಸಲು ನಾವು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಧಾಮಿ ಶುಕ್ರವಾರ ಹೇಳಿದರು.
*ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜೋಶಿಮಠದಲ್ಲಿ ಸಮೀಕ್ಷೆ ನಡೆಸಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಲಿದ್ದಾರೆ. ಮುಳುಗಡೆಯಾಗುತ್ತಿರುವ ಪಟ್ಟಣದ ಪರಿಸ್ಥಿತಿಯನ್ನು ಅವಲೋಕಿಸಲು ಸಿಎಂ ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
|
ಭೂಮಿ ಕುಸಿತದ ಘಟನೆಗಳು
*ಜೋಶಿಮಠದ ಸಿಂಗಧಾರ ವಾರ್ಡ್ನಲ್ಲಿ ಶುಕ್ರವಾರ ಸಂಜೆ ದೇವಸ್ಥಾನ ಕುಸಿದಿದೆ. ಕಳೆದ 15 ದಿನಗಳಿಂದ ದೇವಾಲಯದಲ್ಲಿನ ದೊಡ್ಡ ಬಿರುಕುಗಳು ದೇವಸ್ಥಾನವನ್ನು ಕುಸಿಯುವಂತೆ ಮಾಡಿವೆ. ಇದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
*ಜೋಶಿಮಠದ ಕನಿಷ್ಠ 9 ವಾರ್ಡ್ಗಳಲ್ಲಿ ಬಿರುಕುಗಳು ಮತ್ತು ಭೂಮಿ ಕುಸಿತದ ಘಟನೆಗಳು ವರದಿಯಾಗಿವೆ. ಪಟ್ಟಣದ ಗಾಂಧಿನಗರ ಮತ್ತು ರವಿಗ್ರಾಮ ವಾರ್ಡ್ಗಳಲ್ಲಿ ಗರಿಷ್ಠ ಪರಿಣಾಮ ಕಂಡುಬಂದಿದೆ. ಜನವರಿಯ ಹೊತ್ತಿಗೆ, ನಿವಾಸಗಳು ಸೇರಿದಂತೆ 603 ಕಟ್ಟಡಗಳು ಪರಿಣಾಮ ಬೀರಿವೆ.
*ಸುಮಾರು 50 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲದೆ ವಿಷ್ಣು ಪ್ರಯಾಗ ಜಲ ವಿದ್ಯುತ್ ಪರಿಯೋಜನಾ ನೌಕರರ ಕಾಲೋನಿಯಲ್ಲಿ ವಾಸಿಸುತ್ತಿದ್ದ 60 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

6 ತಿಂಗಳವರೆಗೆ ಪ್ರತಿ ಕುಟುಂಬಕ್ಕೆ 4,000 ರೂ. ಪರಿಹಾರ
*ಚಮೋಲಿ ಆಡಳಿತ 1271 ಜನರ ಸಾಮರ್ಥ್ಯದ 229 ಕೊಠಡಿಗಳನ್ನು ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯಕ್ಕಾಗಿ ಮೀಸಲಿಡುವ ಮೂಲಕ ತಾತ್ಕಾಲಿಕ ಆಶ್ರಯಕ್ಕಾಗಿ ವ್ಯವಸ್ಥೆ ಮಾಡಿದೆ.
*ಮನೆಗಳು ಹಾಳಾಗಿ ವಾಸಕ್ಕೆ ಯೋಗ್ಯವಲ್ಲದ ಕುಟುಂಬಗಳಿಗೆ ಅಥವಾ ನಿರಾಶ್ರಿತ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 6 ತಿಂಗಳವರೆಗೆ ಪ್ರತಿ ಕುಟುಂಬಕ್ಕೆ 4,000 ರೂ ನೀಡಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
*ಕೇಂದ್ರ ಸರ್ಕಾರ ಹಿಮಾಲಯದ ಜೋಶಿಮಠದ ಪಟ್ಟಣದಲ್ಲಿ ಭೂ ಕುಸಿತದ ಸಂಭವ ಮತ್ತು ಅದರ ಪರಿಣಾಮಗಳ "ಕ್ಷಿಪ್ರ ಅಧ್ಯಯನ" ನಡೆಸಲು ಸಮಿತಿಯನ್ನು ಸ್ಥಾಪಿಸಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಮೂರು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ.












Click it and Unblock the Notifications