ಪಂಜಾಬ್ ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಬೇಕಿದೆ: ಸಿಧು ಘೋಷಣೆ
ನವದೆಹಲಿ, ಜನವರಿ 16: ಹಲವಾರು ಅಂತೆ, ಕಂತೆ ಸುದ್ದಿಗಳ ನಡುವೆಯೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದರು.
ಸಿಕ್ಸರ್ ಸಿಧು ಎಂದೇ ಖ್ಯಾತರಾಗಿದ್ದ ಅವರು, ಸೋಮವಾರ ಪತ್ರಿಕಾಗೋಷ್ಠಿಯಲ್ಲೂ ಅದೇ ರೀತಿ ಪಂಚಿಂಗ್ ಡೈಲಾಗುಗಳನ್ನು ಹೊಡೆದರು. ಕಾಂಗ್ರೆಸ್ ತಮ್ಮ ಮೂಲ ಮನೆಯಾಗಿದ್ದು, ತಮ್ಮ ಕಾಂಗ್ರೆಸ್ ಸೇರ್ಪಡೆ, ಒಂದು ರೀತಿಯಲ್ಲಿ ಘರ್ ವಾಪಸಾತಿ ಎಂದು ಬಣ್ಣಿಸಿದರು.
ಮೂಲಗಳ ಪ್ರಕಾರ, ಶೀಘ್ರದಲ್ಲೇ ನಡೆಯಲಿರುವ ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ಅವರು, ಪೂರ್ವ ಅಮೃತಸರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಸದ್ಯಕ್ಕೆ ಆ ವಿಧಾನಸಭೆ ಕ್ಷೇತ್ರದಲ್ಲಿ ಅವರ ಪತ್ನಿ ನವ್ಜೋತ್ ಕೌರ್ ಶಾಸಕಿಯಾಗಿದ್ದಾರೆ.
ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ಸಿದ್ದು ನೀಡಿದ ಉತ್ತರಗಳ ಆಯ್ದ ಭಾಗ...
- ನನ್ನ ಮೂಲವೇ ಕಾಂಗ್ರೆಸ್. ಹಾಗಾಗಿ, ನಾನು ಕಾಂಗ್ರೆಸ್ ಗೆ ವಾಪಸ್ಸಾಗಿರುವುದು ನಾನು ನನ್ನ ಮನೆಗೆ ನಾನು ಮರಳಿ ಬಂದಂತಾಗಿದೆ.
- ಬಿಜೆಪಿಯು ಪಂಜಾಬ್ ನಲ್ಲಿ ಸಿಧುವನ್ನು ಸೋಲಿಸಲು ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿದೆ. ನಾನು ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದೇನೆ.
- ಎರಡು ರಾಷ್ಟ್ಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಒಟ್ಟಿಗೆ ಕೂತು ಚರ್ಚಿಸುತ್ತಾರೆಂದ ಮೇಲೆ ಇಬ್ಬರು ಮನುಷ್ಯರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕುಳಿತು ಚರ್ಚಿಸಬಾರದೇಕೆ? (ಕ್ಯಾ. ಅಮರಿಂದರ್ ಬಗ್ಗೆ ಹೇಳುತ್ತಾ)
- ಹಸಿರು ಕ್ರಾಂತಿ ಮಾಡುತ್ತೇವೆ ಎಂದು ಅಧಿಕಾರ ಚುಕ್ಕಾಣಿ ಹಿಡಿದವರು ಏನನ್ನೂ ಮಾಡಲಿಲ್ಲ. ಅವರು ಮಾಡಿದ ಅಭಿವೃದ್ಧಿ ಏನು ಗೊತ್ತಾ? ಡ್ರಗ್ಸ್. ಹೌದು. ಇಲ್ಲಿನ ಸರ್ಕಾರಗಳು ಈವರೆಗೆ ಈ ರಾಜ್ಯವನ್ನು ಡರಗ್ಸ್ ನ ರಾಜಧಾನಿ ಎಂಬ ಮಟ್ಟಿಗೆ ಬೆಳೆಸಿದ್ದಾರೆ.
- ಇಡೀ ಪಂಜಾಬ್ ರಾಜ್ಯವೇ ಡ್ರಗ್ ಮಾಪಿಯಾದ ಸುಳಿಗೆ ಸಿಲುಕಿದೆ. ಇದರಿಂದ ಮೊದಲು ಪಂಜಾಬ್ ರಾಜ್ಯವನ್ನು ಬಚಾವ್ ಮಾಡಿ, ಆ ಮೂಲಕ ಯುವ ಜನರ ಭವಿಷ್ಯವನ್ನು ರಕ್ಷಿಸಬೇಕಿದೆ.
- ಕಾಂಗ್ರೆಸ್ ಗೆ ಅಧಿಕಾರ ಸಿಕ್ಕರೆ, ಪಂಜಾಬ್ ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸಲು ಕಠಿಣ ಕಾನೂನನ್ನು ಜಾರಿಗೊಳಿಸುತ್ತೇವೆ.
- ಐದನೇ ಬಾರಿ ಪಂಜಾಬ್ ರಾಜ್ಯದ ಮುಖ್ಯಮಂತರಿಯಾಗಿರುವ ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಪಂಜಾಬ್ ಅಧಃಪತನದತ್ತ ಜಾರುತ್ತಿದೆ. ಹಾಗಾಗಿ, ಭಾಗ್ ಬಾದಲ್ ಭಾಗ್ ಎಂಬ ಕರೆಯನ್ನು ನಾನು ನೀಡಬಯಸುತ್ತೇನೆ.
- ನಾನು ಹೇಳುತ್ತೇನೆ. ಪಂಜಾಬ್ ಅನ್ನು ಹೇಗೆ ಇವರೆಲ್ಲಾ ಲೂಟಿ ಮಾಡಿದರು.
- ಎಲ್ಲಿಯವರೆಗೂ ನಮ್ಮ ರಕ್ತದಲ್ಲಿ ಸ್ವಾಭಿಮಾನ ಇರುತ್ತದೋ, ಎಲ್ಲಿಯವರೆಗೂ ಕೆಚ್ಚು ನಮ್ಮಲ್ಲಿರುತ್ತದೋ, ಅಲ್ಲಿಯವರೆಗೆ ಭಗತ್ ಸಿಂಗ್ ಸಮಾಧಿಯ ಮಣ್ಣು ಆರಲು ನಾವು ಬಿಡುವುದಿಲಲ.
- ನಾನು ಯಾವಾಗಲೂ ಅಭಿವೃದ್ಧಿಯ ಪರ. ಹಿಂದೆಲ್ಲಾ ನಾನು ಕಾಂಗ್ರೆಸ್ಸಿಗರನ್ನು ಟೀಕಿಸಿರಬಹುದು. ಆದರೆ, ರಾಹುಲ್ ಗಾಂಧಿಯವರನ್ನು ಟೀಕಿಸಿಲ್ಲ. ಆ ಪಕ್ಷದಲ್ಲಿನ ಕೆಲವರನ್ನು ಟೀಕಿಸಿದ್ದೆನಷ್ಟೇ.
- ಯಾಕೆ ಅವರಿವರನ್ನು ಟೀಕಿಸಿದ್ದರ ಬಗ್ಗೆಯೇ ಕೇಳುತ್ತಿದ್ದೀರಿ ಮಿತ್ರರೇ (ಪತ್ರಕರ್ತರು). ರಾಜಕೀಯವೆಂದ ಮೇಲೆ ಇದೆಲ್ಲಾ ಮಾಮೂಲು. ಕೆಲವರು ನನ್ನನ್ನೂ ಟೀಕಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆದರೆ, ಅದು ಇಲ್ಲಿ ಪ್ರಮುಖವಲ್ಲ. ಪಂಜಾಬ್ ರಾಜ್ಯದ ಭವಿಷ್ಯವಷ್ಟೇ ಪ್ರಮುಖ
- ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ.ನನ್ನ ಜನರ ಸೇವೆ ಮಾಡಲು ಬಂದಿದ್ದೇನೆ.
- ಹಿಂದೆ ನಾನು ಯಾರನ್ನು ಟೀಕಿಸಿದ್ದೆ ಎನ್ನುವುದನ್ನು ಬಿಡಿ. ನಾನು ಅಭಿವೃದ್ಧಿಯೆಂಬ ಮಹಾ ಸಮುದ್ರದ ಬಗ್ಗೆ ಮಾತನಾಡುತ್ತಿರುವಾಗ ನೀವು (ಪತ್ರಕರ್ತರು) ಕೂಪ ಮಂಡೂಕಗಳಂತೆ ಪ್ರಶ್ನೆಗಳನ್ನು ಕೇಳುತ್ತಿದ್ದೀರಲ್ಲಾ?
- ಪಂಜಾಬ್ ಸರ್ಕಾರದ ಮೇೆ 2 ಲಕ್ಷ ಕೋಟಿ ಸಾಲಇದೆ. ಇದರ ಬಗ್ಗೆ ನಾವ್ಯಾರೂ ಯಾಕೆ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
- ಮೋದಿ ಅವರು ಅವರ ಚುನಾವಣೆಯನ್ನು ಎದುರಿಸುತ್ತಾರೆ, ನಾನು ನನ್ನ ಚುನಾವಣೆ ಎದುರಿಸುತ್ತೇನೆ.
- ಸುಮ್ಮ ಸುಮ್ಮನೇ ನನ್ನ ಬಾಯಲ್ಲಿ ಶಬ್ದಗಳನ್ನು ನೀವೇ ತುರುಕಬೇಡಿ.
- ಪ್ರಧಾನಿಯಾಗಿ ನರೇಂದ್ರ ಮೋದಿಯವರು ಹೇಗೆ ಆಡಳಿತ ನಡೆಸಿದರು ಎನ್ನುವುದನ್ನು ಜನರೇ ನಿರ್ಧರಿಸುತ್ತಾನೆ. ನಾನು ಆ ಬಗ್ಗೆ ಮಾತನಾಡಲು ಹೋಗುವುದಿಲ್ಲ.
- ಪಂಜಾಬ್ ಅನ್ನು ಮತ್ತೆ ಅಭಿವೃದ್ಧಿ ರಾಜ್ಯವನ್ನಾಗಿಸಲು ನಾನು ಕಠಿಬದ್ಧನಾಗಿದ್ದೇನೆ.
- ನನ್ನ ತಂದೆ ನನ್ನನ್ನು ಒಬ್ಬ ಮೌಲ್ಯಾಧಾರಿತ ವ್ಯಕ್ತಿಯನ್ನಾಗಬೇಕೆಂದು ಬಯಸಿದ್ದರು. ಅದರಂತೆ, ನಾನು ನಡೆದುಕೊಂಡಿದ್ದೇನೆ.