ಸಿಬಿಎಸ್ಇ ಪಠ್ಯಕ್ರಮ ಕಡಿತಕ್ಕೆ ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯ ವಿರೋಧ
ಬೆಂಗಳೂರು, ಜುಲೈ 9: ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2020-21ನೇ ಶೈಕ್ಷಣಿಕ ಸಾಲಿನ ಸಿಬಿಎಸ್ಇ ಪಠ್ಯಕ್ರಮದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿದೆ.
Recommended Video
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
9ನೇ ತರಗತಿಯಿಂದ 12ನೇ ತರಗತಿ ಪಠ್ಯಕ್ರಮದಲ್ಲಿ ಕಡಿತ ಮಾಡಲಾಗಿದ್ದು, ವಿಶೇಷವಾಗಿ 11ನೇ ತರಗತಿ ಪಠ್ಯಕ್ರಮದಿಂದ ಪೌರತ್ವ, ಜಾತ್ಯತೀತತೆ ಹಾಗೂ ಫೆಡರಲಿಸಂ ಅಂತಹ ಪ್ರಮುಖ ವಿಷಯಗಳನ್ನು ಕೈಬಿಡಲಾಗಿದೆ. ಇದಕ್ಕೆ ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಈ ನಿರ್ಧಾರ ಆಘಾತ ತಂದಿದೆ
ಸಿಬಿಎಸ್ಇ ಪಠ್ಯಕ್ರಮ ಪ್ರಮುಖ ವಿಷಯಗಳನ್ನು ಕೈಬಿಟ್ಟಿರುವ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ''ಕೇಂದ್ರ ಸರ್ಕಾರದ ಈ ನಿರ್ಧಾರ ಆಘಾತ ತಂದಿದೆ. ಸಿಬಿಎಸ್ಇ ಕೋರ್ಸ್ ಕಡಿತಗೊಳಿಸುವ ಹೆಸರಿನಲ್ಲಿ ಪೌರತ್ವ, ಫೆಡರಲಿಸಂ, ಜಾತ್ಯತೀತತೆ ಹಾಗೂ ವಿಭಜನೆಯಂತಹ ವಿಷಯಗಳನ್ನು ಕೈಬಿಟ್ಟಿರುವುದು ಖಂಡನೀಯ'' ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು
''ಸರ್ಕಾರದ ಈ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಸಿಬಿಎಸ್ಇ ಪಠ್ಯಕ್ರಮದಿಂದ ಇಂತಹ ಪ್ರಮುಖ ವಿಷಯಗಳನ್ನು ಕಡಿತಗೊಳಿಸದಂತೆ ಮಾನವ ಸಂಪನ್ಮೂಲ ಸಚಿವಾಲಯ ಗಮನಹರಿಸಬೇಕಾಗಿದೆ'' ಎಂದು ಪಶ್ಚಿಮ ಬಂಗಾಳ ಸಿಎಂ ಮನವಿ ಮಾಡಿದ್ದಾರೆ.

ಶಿಕ್ಷಣದಲ್ಲಿ ಕೇಸರಿಕರಣ ನಿಲ್ಲಿಸಿ
ಸಿಬಿಎಸ್ಇಯಿಂದ ಪ್ರಮುಖ ವಿಷಯಗಳ ಕಡಿತ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ''ಶಿಕ್ಷಣದಲ್ಲಿ ಕೇಸರಿಕರಣ ನಿಲ್ಲಿಸಿ'' ಎಂದಿದ್ದಾರೆ. ''ಪೌರತ್ವ, ಜಾತ್ಯತೀತತೆ ಮತ್ತು ಫೆಡರಲಿಸಂ ಕುರಿತ ಅಧ್ಯಾಯಗಳನ್ನು 11ನೇ ತರಗತಿಯಿಂದ ಕೈಬಿಡಲಾಗಿದನ್ನು ಗಮನಿಸಿದರೆ ಈ ತತ್ವಗಳನ್ನು ಬಿಜೆಪಿ ನಂಬುತ್ತಿಲ್ಲ, ಅದರ ಹಿಂದಿನ ನಡವಳಿಕೆಯನ್ನು ಮೌಲ್ಯೀಕರಿಸುತ್ತದೆ ಎಂದು ಅನಿಸುತ್ತಿದೆ'' ಎಂದು ಟೀಕಿಸಿದ್ದಾರೆ.

ವಿದ್ಯಾರ್ಥಿಗಳು ವಂಚಿತರಾಗುತ್ತಾರೆ
''ಪಠ್ಯಕ್ರಮದಿಂದ ಇಂತಹ ವಿಷಯಗಳನ್ನು ಕೈಬಿಡುವುದರಿಂದ ಭಾರತ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳನ್ನು ಅರ್ಥಮಾಡಿಕೊಳ್ಳುವುದರಿಂದ ಒಂದು ಪೀಳಿಗೆಯ ವಿದ್ಯಾರ್ಥಿಗಳನ್ನು ವಂಚಿಸದಂತೆ ಆಗುತ್ತದೆ'' ಎಂದು ಸಿದ್ದರಾಮಯ್ಯ ಮಾನವ ಸಂಪನ್ಮೂಲ ಇಲಾಖೆಯ ನಿರ್ಧಾರವನ್ನು ವಿರೋಧಿಸಿದ್ದಾರೆ.












Click it and Unblock the Notifications