ಕಾಂಗ್ರೆಸ್ಸಿಗೆ ಆಘಾತ! ಅರುಣಾಚಲದಲ್ಲಿ ಬಿಕ್ಕಟ್ಟು, ಕೈ ತಪ್ಪಿದ ಆಡಳಿತ
ಇಟಾನಗರ, ಸೆ.16: ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಸೇರಿದಂತೆ ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಪಕ್ಷ ತೊರೆದಿದ್ದಾರೆ. ಒಬ್ಬ ಕಾಂಗ್ರೆಸ್ ಶಾಸಕರನ್ನು ಹೊರತುಪಡಿಸಿದರೆ, ಎಲ್ಲಾ 45 ಶಾಸಕರು ಬಿಜೆಪಿ ಮಿತ್ರಪಕ್ಷವಾದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ (ಪಿಪಿಎ) ಸೇರ್ಪಡೆಯಾಗಿದ್ದಾರೆ.
ಅರುಣಾಚಲ ವಿಧಾನಸಭೆಯಲ್ಲಿ ಒಟ್ಟು 60 ಸದಸ್ಯರಿದ್ದು, ಕಾಂಗ್ರೆಸ್ 45 ಸ್ಥಾನಗಳನ್ನು ಹೊಂದಿತ್ತು. ಬಿಜೆಪಿ ಮಿತ್ರಪಕ್ಷದ 11 ಸದಸ್ಯರಿದ್ದರು. ಪಕ್ಷೇತರ ಶಾಸಕರು ಸೇರಿದಂತೆ 47 ಶಾಸಕರ ಬೆಂಬಲದೊಂದಿಗೆ ಪೆಮಾ ಖಂಡು ಅಧಿಕಾರವಹಿಸಿಕೊಂಡಿದ್ದರು. ಈಗ ಸಾಮೂಹಿಕ ಗುಳೆಯಿಂದಾಗಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ.[ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಪೆಮಾ ಖಂಡು]
ಬಿಜೆಪಿ ತಂತ್ರವಲ್ಲ: ಈಶಾನ್ಯ ಭಾರದಲ್ಲಿ ನಡೆದಿರುವ ಈ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ರಾಜ್ಯ ಸಚಿವ ಕಿರಣ್ ರಿಜಿಜು, ಶಾಸಕರು ಸ್ವ ಇಚ್ಛೆಯಿಂದ ಪಿಪಿಎ ಸೇರಿದ್ದಾರೆ. ಇದರಲ್ಲಿ ಬಿಜೆಪಿ ತಂತ್ರವೇನು ಇಲ್ಲ ಎಂದಿದ್ದಾರೆ.
ಆದರೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಮ್ಮ ಕ್ಷೇತ್ರಕ್ಕೆ ಸರಿಯಾದ ಅನುದಾನ ದೊರೆಯದ ಕಾರಣ ಶಾಸಕರು ಬೇಸತ್ತು ಕಾಂಗ್ರೆಸ್ ತೊರೆದಿದ್ದಾರೆ ಎಂಬ ಸುದ್ದಿಯಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ(ಪಿಪಿಎ) ಬಲ ಈಗ 42ಕ್ಕೇರಿದೆ. ಮೂರು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಖಂಡು ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. (ಒನ್ಇಂಡಿಯಾ ಸುದ್ದಿ)