ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್: ಕಾಂಗ್ರೆಸ್
ಲಕ್ನೋ, ಜುಲೈ 13: ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಶೀಲಾ ದೀಕ್ಷಿತ್ ಅವರನ್ನು ಶೀಘ್ರದಲ್ಲೇ ಘೋಷಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. 'ನಾನು ಉತ್ತರ ಪ್ರದೇಶದ ಸೊಸೆ, ರಾಜಕೀಯದಲ್ಲಿ ನಿವೃತ್ತಿಗೆ ವಯಸ್ಸಿಲ್ಲ' ಎಂದು ಹಿಂದೊಮ್ಮೆ ಹೇಳಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಮತ್ತೊಮ್ಮೆ ಸಿಎಂ ಆಗುವ ಕನಸು ಕಾಡುತ್ತಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಪಕ್ಷದ ಅಧ್ಯಕ್ಷರಾಗಿದ್ದ ನಿರ್ಮಲ್ ಖತ್ರಿ ಬದಲಿಗೆ ಚಿತ್ರ ನಟ ಕಮ್ ರಾಜಕಾರಣಿ ರಾಜ್ ಬಬ್ಬರ್ ಅವರನ್ನು ಉತ್ತರ ಪ್ರದೇಶದ ನೂತನ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಇದಾದ ಬಳಿಕ ಅಮೇಥಿಯ ಮಾಜಿ ಸಂಸದ ಮತ್ತು ಸದ್ಯ ಅಸ್ಸಾಂನ ರಾಜ್ಯ ಸಭಾ ಸದಸ್ಯನಾಗಿರುವ ಸಂಜಯ್ ಸಿಂಗ್ ಅವರು ಶೀಲಾ ದೀಕ್ಷಿತ್ (78) ಜತೆ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿತ್ತು.
ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಪ್ರಚಾರದ ಚುಕ್ಕಾಣಿಯನ್ನು ಪ್ರಿಯಾಂಕಾ ಗಾಂಧಿ ವಹಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಪ್ರಿಯಾಂಕಾ ಗಾಂಧಿ ಅವರ ಮುಂದಿನ 2 ವರ್ಷಗಳವರೆಗೆ ರಾಜಕೀಯ ಪ್ರವೇಶ ಸಾಧ್ಯತೆ ಇಲ್ಲ ಎಂಬ ಮಾಹಿತಿಯೂ ಇದೆ.
ಬ್ರಾಹ್ಮಣ ಮತಗಳ ಮೇಲೆ ಕಣ್ಣು: ದೆಹಲಿಯಲ್ಲಿ ಸಿಎಂ ಆಗಿದ್ದ ಕಾಲದಲ್ಲಿ ಶೀಲಾ ದೀಕ್ಷಿತ್ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಬ್ರಾಹ್ಮಣ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಅವರು ಕಣಕ್ಕಿಳಿಯುವುದರಿಂದ ಶೇ 10ರಷ್ಟು ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸಜ್ಜಾಗಿದೆ.