ನೀರವ್ ಮೋದಿ ಜತೆ ಭೇಟಿ: ರಾಹುಲ್ ಗಾಂಧಿ ವಿರುದ್ಧ ಹೊಸ ಬಾಂಬ್
ನವದೆಹಲಿ, ಸೆಪ್ಟೆಂಬರ್ 14: ತಾವು ದೇಶ ತೊರೆಯುವ ಮುನ್ನ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ವಿಜಯ್ ಮಲ್ಯ ನೀಡಿದ್ದ ಹೇಳಿಕೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೊಸ ಬಾಂಬ್ ಸಿಡಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆಭರಣ ವ್ಯಾಪಾರಿ ನೀರವ್ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2013ರಲ್ಲಿ ಭೇಟಿಯಾಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಶೆಹಜಾದ್ ಪೂನವಲ್ಲಾ ಆರೋಪಿಸಿದ್ದಾರೆ.
ತಾವು ಲಂಡನ್ಗೆ ಪರಾರಿಯಾಗುವ ಮುನ್ನ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ವಿಜಯ್ ಮಲ್ಯ ಹೇಳಿಕೆ ನೀಡಿರುವುದನ್ನು ಅಸ್ತ್ರವನ್ನಾಗಿ ಮಾಡಿಕೊಂಡಿರುವ ರಾಹುಲ್ ಗಾಂಧಿ, ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರಿಗೆ ನೀರವ್ ಮೋದಿ ಅವರ ಭೇಟಿಯ ಕುರಿತ ಈ ಆರೋಪ ತಿರುಗುಬಾಣವಾಗುವ ಸಾಧ್ಯತೆ ಇದೆ.
|
ಸುಳ್ಳು ಪರೀಕ್ಷೆಗೆ ಒಳಪಡಲಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಿಎನ್ಬಿ ಹಗರಣದ ಪ್ರಮುಖ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿ ಇಬ್ಬರೂ 2013ರಂದು ಹೋಟೆಲ್ ಒಂದರಲ್ಲಿ ಕಾಕ್ಟೈಲ್ ಪಾರ್ಟಿಯಲ್ಲಿ ಭೇಟಿ ಮಾಡಿದ್ದರು ಎಂದು ಶೆಹಜಾದ್ ಆರೋಪಿಸಿದ್ದಾರೆ.
ತಾವು ಹೇಳಿದ್ದು ಸುಳ್ಳು ಎಂದು ವಾದಿಸುವುದಾದರೆ, ರಾಹುಲ್ ಗಾಂಧಿ ಬೇಕಾದರೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲಿ ಎಂದು ಶೆಹಜಾದ್ ಸವಾಲು ಹಾಕಿದ್ದಾರೆ.

ನಾನೂ ಪರೀಕ್ಷೆಗೆ ಒಳಪಡುತ್ತೇನೆ
ಮಿ. ರಾಹುಲ್ ಗಾಂಧಿ, ನಿಮಗೆ ನಾನು ಸವಾಲು ಹಾಕುತ್ತೇನೆ. 2013ರ ಸೆಪ್ಟೆಂಬರ್ನಲ್ಲಿ ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿ ಬ್ಯಾಂಕ್ನಿಂದ ಸಾಲ ಪಡೆದ ಸಂದರ್ಭದಲ್ಲಿ ದೆಹಲಿಯ ಇಂಪೀರಿಯಲ್ ಹೋಟೆಲ್ನಲ್ಲಿ ನಿಮ್ಮ ಭೇಟಿಗೆ ನಾನು ಸಾಕ್ಷಿಯಾಗಿದ್ದೆ. ಈ ಬಗ್ಗೆ ಸುಳ್ಳು ಪತ್ತೆ ಪರೀಕ್ಷೆಗೆ ನಾನು ಸಿದ್ಧ. ಕುರಾನ್ ಮೇಲೆ ಬೇಕಾದರೂ ಪ್ರಮಾಣ ಮಾಡುತ್ತೇನೆ. ನೀವೂ ಸವಾಲು ಸ್ವೀಕರಿಸಲು ಸಿದ್ಧರಿದ್ದೀರಾ ಎಂದು ಶೆಹಜಾದ್ ಕೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ವಿಜಯ್ ಮಲ್ಯ ದೇಶದಿಂದ ಪರಾರಿಯಾದ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರೆ, ವಿಜಯ್ ಮಲ್ಯ ಸಾವಿರಾರು ಕೋಟಿ ವಂಚಿಸಲು ಕಾಂಗ್ರೆಸ್ ನೇತೃತ್ವದ ಆಗಿನ ಸರ್ಕಾರವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ದೇಶಭ್ರಷ್ಟ ಆರೋಪಿಯಾಗಿರುವ ವಿಜಯ್ ಮಲ್ಯ ಅವರಿಗೆ ಅನುಕೂಲಕರ ಒಪ್ಪಂದಗಳನ್ನು ಯುಪಿಎ ಸರ್ಕಾರ ಮಾಡಿಕೊಟ್ಟಿತ್ತು. ಆರ್ಬಿಐ ಮತ್ತು ಎಸ್ಬಿಐ ನಡುವೆ ಸರಣಿ ಪತ್ರ ವ್ಯವಹಾರ ನಡೆದಿತ್ತು. ಸೋನಿಯಾ ಗಾಂಧಿ ಅವರ ನಾಯಕತ್ವದ ಹಿಂದಿನ ಸರ್ಕಾರ ಎಷ್ಟು ಪಕ್ಷಪಾತಿಯಾಗಿತ್ತು ಮತ್ತು ಕಿಂಗ್ಫಿಶರ್ ಏರ್ಲೈನ್ಸ್ಗೆ 'ಸಿಹಿಯಾದ ಒಪ್ಪಂದ' ಮಾಡಲು ಎಲ್ಲ ನಿಯಮಾವಳಿಗಳನ್ನು ಬದಿಗಿರಿಸಿತ್ತು ಎಂಬುದನ್ನು ಇದು ತೋರಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಹುಲ್ ವಿರುದ್ಧ ಗೋಯಲ್ ಕಿಡಿ
ಸಚಿವ ಅರುಣ್ ಜೇಟ್ಲಿ ತಾವು ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಮಲ್ಯ ಅವರನ್ನು ಸಂಸತ್ನಲ್ಲಿ ಭೇಟಿ ಮಾಡಿದ್ದು ನಿಜ. ಆದರೆ, ಅವರಿಗೆ ನೆರವು ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಲ್ಯ ಅವರ ಸಂಸ್ಥೆಗೆ ನೀಡಿದ ಸಾಲವು ಮರುಪಾವತಿಯಾಗದೆ ಇರುವಂತೆ ನೆರವು ನೀಡಿದ್ದು ಹೇಗೆ ಎಂಬುದನ್ನು ರಾಹುಲ್ ಗಾಂಧಿ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ಆದಾಯವನ್ನು ಏಕೆ ಬಚ್ಚಿಟ್ಟುಕೊಂಡಿದ್ದಾರೆ ಎಂಬುದನ್ನೂ ವಿವರಿಸಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಷ್ಟೆಲ್ಲಾ ಪ್ರತಿಭಟನೆ ಮಾಡುವ ಅವರು, ಅದರ ಬಗ್ಗೆ ವರದಿ ಮಾಡುವುದಕ್ಕೆ ನಿರ್ಬಂಧ ವಿಧಿಸಲು ಏಕೆ ಪ್ರಯತ್ನಿಸಿದ್ದು ಎಂದು ಪ್ರಶ್ನಿಸಿದ್ದಾರೆ.
ಮಲ್ಯ ಮತ್ತು ಜೇಟ್ಲಿ ನಡುವೆ ಸುದೀರ್ಘ ಮಾತುಕತೆ ನಡೆದಿರುವುದನ್ನು ತಾವು ಕಂಡಿದ್ದಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ಪಿಎಲ್ ಪೂನಿಯಾ, ಎರಡು ವರ್ಷದ ಹಿಂದೆ ಅವರು ಏನು ಮಾಡುತ್ತಿದ್ದರು ಎನ್ನುವ ಘಟನೆಯನ್ನು ಹೇಗೆ ನೆನಪಿಸಿಕೊಂಡಿದ್ದಾರೆ ಎಂದೂ ಗೋಯಲ್ ಪ್ರಶ್ನಿಸಿದ್ದಾರೆ.












Click it and Unblock the Notifications