ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಶೇ 30ರಷ್ಟು ಟಿಕೆಟ್ ದರ ಇಳಿಕೆ
ಮುಂಬೈ, ಜೂನ್ 6: ಶತಾಬ್ದಿ ಎಕ್ಸ್ ಪ್ರೆಸ್ ರೈಲು ಪ್ರಯಾಣದ ಟಿಕೆಟ್ ದರವನ್ನು ಕಡಿಮೆ ಮಾಡುವುದಕ್ಕೆ ಭಾರತೀಯ ರೈಲ್ವೆ ಇಲಾಖೆಯು ನಿರ್ಧಾರ ಮಾಡಿದೆ. ಹಾಗಂತ ಇಡಿಯಾಗಿ ಎಲ್ಲ ಪ್ರಯಾಣ ದರವನ್ನು ಕಡಿಮೆ ಮಾಡಲಾಗುತ್ತದೆ ಅಂತಲ್ಲ. ಕಡಿಮೆ ಅಂತರದ ಪ್ರಯಾಣದ ದರವನ್ನು ಮಾತ್ರ ಇಳಿಸಲು ತೀರ್ಮಾನ ಮಾಡಲಾಗಿದೆ.
ಇತ್ತೀಚೆಗೆ ಇದೇ ರೀತಿಯಲ್ಲಿ ಎರಡು ರೈಲುಗಳ ಪ್ರಯಾಣ ದರವನ್ನು ಇಳಿಸಿ ಪ್ರಯೋಗ ಮಾಡಲಾಗಿತ್ತು. ಅದರಲ್ಲಿ ಯಶಸ್ಸು ಪಡೆದಿದ್ದರಿಂದ ಉತ್ತೇಜನಗೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೀಗೆ ಕಡಿಮೆ ದೂರದ ಪ್ರಯಾಣಕ್ಕೆ ದರ ಕಡಿಮೆ ಮಾಡಿದರೆ ಲಾಭ ಹೆಚ್ಚಳಕ್ಕೆ ಅನುಕೂಲ ಆಗುತ್ತದೆ ಎಂಬುದು ಲೆಕ್ಕಾಚಾರ.[ಮೈಸೂರು-ಹುಬ್ಬಳ್ಳಿ ರೈಲು ಸಂಚಾರಕ್ಕೆ ಮೇ 23ಕ್ಕೆ ಚಾಲನೆ]
ಶತಾಬ್ದಿ ಎಕ್ಸ್ ಪ್ರೆಸ್ ಸಂಚಾರ ಮಾಡುವ ಕೆಲವು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ವಿಪರೀತ ಕಡಿಮೆ ಇದೆ. ರೈಲಿಗಿಂತ ಏಸಿ ಬಸ್ ಗಳಲ್ಲಿ ಪ್ರಯಾಣಿಸುವುದಕ್ಕೆ ಪ್ರಯಾಣಿಕರು ಆದ್ಯತೆ ನೀಡುತ್ತಿದ್ದಾರೆ. ಈ ವಿಚಾರವು ಗಮನಕ್ಕೆ ಬಂದ ಮೇಲೆ ರೈಲ್ವೆ ಇಲಾಖೆ ಇಂಥ ಕ್ರಮಕ್ಕೆ ಮುಂದಾಗಿದೆ.[ಹುಬ್ಬಳ್ಳಿ- ವಾರಣಾಸಿ ಮಧ್ಯೆ ಮೇ 28ರಿಂದ ರೈಲು ಸಂಚಾರ]
ಹತ್ತಿರದ ಪ್ರಯಾಣ ಮಾಡುವವರಿಗೆ ಶೇ ಮೂವತ್ತರಷ್ಟು ಟಿಕೆಟ್ ದರವನ್ನು ಇಳಿಸಲು ನಿರ್ಧರಿಸಿದ್ದೇವೆ. ಹೀಗೆ ಮಾಡುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.