ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಶಶಿ ತರೂರ್ ಅಭಿನಂದನೆ
ನವದೆಹಲಿ, ಅಕ್ಟೋಬರ್ 19: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ನೂತನ ಅಧ್ಯಕ್ಷರಾಗಿ ಕರ್ನಾಟಕದ ಮುಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಅಭ್ಯರ್ಥಿ, ಸಂಸದ ಶಶಿ ತರೂರ್ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಹಿರಿಯ ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಾಯಕ, ಪರಾಜಿತ ಅಭ್ಯರ್ಥಿ ಶಶಿ ತರೂರ್, ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗುವುದು ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ. ಆ ಕಾರ್ಯದಲ್ಲಿ ಖರ್ಗೆ ಜಿಯವರು ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ. ಇದು ಒಂದು ಸೌಭಾಗ್ಯ. ಭಾರತದಾದ್ಯಂತ ಕಾಂಗ್ರೆಸ್ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಸಾಗಿಸಲು ಅವರು ಒಂದು ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲುಗಳು!
ಇನ್ನೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾರ್ದಿಕ ಅಭಿನಂದನೆಗಳು. ಕಠಿಣ ಪರಿಶ್ರಮ, ಕಾರ್ಯಕರ್ತರ ಪ್ರೀತಿ ಮತ್ತು ಪಕ್ಷದ ಹಿರಿಯರ ಬೆಂಬಲದ ಬಲದಿಂದ ಎತ್ತರದ ಸ್ಥಾನಕ್ಕೆ ಏರಿದ ಖರ್ಗೆಯವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ. ಚುನಾವಣೆಯ ಮೂಲಕವೇ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮತ್ತು ನಮ್ಮೆಲ್ಲರ ಹೆಮ್ಮೆಯ ನಾಯಕ ರಾಹುಲ್ ಗಾಂಧಿಯವರಿಗೂ ಅಭಿನಂದನೆಗಳು.
ಕಷ್ಟಕಾಲದಲ್ಲಿ ನಾಯಕತ್ವದ ವಹಿಸಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ ಕುಟುಂಬದ ಸರ್ವ ಸದಸ್ಯರ ಪರವಾಗಿ ಧನ್ಯವಾದಗಳು ಪ್ರತಿಭೆ ಮತ್ತು ಅನುಭವವನ್ನು ಮೈಗೂಡಿಸಿಕೊಂಡ ಖರ್ಗೆಯವರಿಗೆ ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ನಮ್ಮೆಲ್ಲರ ಸಹಕಾರವೂ ಇದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯವರು ಕನ್ನಡಿಗರು ಎನ್ನುವುದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.
Breaking: ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಅತ್ಯುತ್ತಮ ಪ್ರಜಾಸತ್ತಾತ್ಮಕ ಮನೋಭಾವ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಎತ್ತರಕ್ಕೇರಲಿದೆ ಎನ್ನುವ ವಿಶ್ವಾಸವಿದೆ ಎಂದು ಹಾರೈಸಿದ್ದಾರೆ. ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಒಬ್ಬ ಕನ್ನಡಿಗ ಅಧ್ಯಕ್ಷರಾಗಿರುವುದು ಹೆಮ್ಮೆ. ಶಶಿ ತರೂರ್ ಅವರು ಅತ್ಯುತ್ತಮ ಪ್ರಜಾಸತ್ತಾತ್ಮಕ ಮನೋಭಾವದಿಂದ ಉತ್ತಮವಾಗಿ ಹೋರಾಡಿದರು ಎಂದು ಕರ್ನಾಟಕದ ಮಾಜಿ ಸಚಿವ ಕೃಷ್ಣಬೈರೇಗೌಡ ಟ್ವೀಟ್ ಮಾಡಿದ್ದಾರೆ.
ಹೊಸ ಎತ್ತರಕ್ಕೆ ಕೊಂಡೊಯ್ಯಲು ಶಕ್ತಿ ನೀಡಲಿ
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ನನ್ನ ಹಲವು ದಶಕಗಳ ಗೆಳೆಯ ಮತ್ತು ಸಹೋದ್ಯೋಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಾರತೀಯ ಕಾಂಗ್ರೆಸ್ಗೆ ಆಯ್ಕೆಯಾದ ಖರ್ಗೆಗೆ ಇದು ಕಾಂಗ್ರೆಸ್ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿದೆ. ಅವರು ಪಕ್ಷವನ್ನು ಭಾರತದಾದ್ಯಂತ ಹೊಸ ಎತ್ತರಕ್ಕೆ ಕೊಂಡೊಯ್ಯಲು ದೇವರು ಅವರಿಗೆ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಸಚಿವ ಚಿದಂಬರಂ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವಶಾಲಿ ವಿಜಯಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರಿಗೆ ಶುಭಾಶಯಗಳು ಎಂದು ಹಾರೈಸಿದ್ದಾರೆ.
ಸಾಮಾಜಿಕ ಸಬಲೀಕರಣದ ಉಜ್ವಲ ಸಂಕೇತ
ಕಾಂಗ್ರೆಸ್ ವರಿಷ್ಠ ಜೈರಾಮ್ ರಮೇಶ್ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷ ಪೂರೈಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಶಾಸಕರಾಗಿ, ಸಚಿವರಾಗಿ ಗುರುತಿಸಿಕೊಂಡಿದ್ದಾರೆ. ಅವರು ನೆಹರು, ಅಂಬೇಡ್ಕರ್, ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸರಿಂದ ಪ್ರೇರಿತರಾದ ಸಾಮಾಜಿಕ ಸಬಲೀಕರಣದ ಉಜ್ವಲ ಸಂಕೇತ ಎಂದು ಟ್ವೀಟ್ ಮಾಡಿದ್ದಾರೆ.
ಸರ್ವೋತ್ಕೃಷ್ಟ ಸಂಘಟನೆಯ ವ್ಯಕ್ತಿ
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆಯವರ ಗೆಲುವು ವೈಯಕ್ತಿಕ ವೈಭವಕ್ಕಿಂತ ಸೈದ್ಧಾಂತಿಕ ಬದ್ಧತೆಯನ್ನು ಇರಿಸುವ ಶಕ್ತಿಗಳಿಗೆ ಸಂದ ಜಯವಾಗಿದೆ. ಖರ್ಗೆಯವರು ಯಾವಾಗಲೂ ಆಡಂಬರವನ್ನು ತಪ್ಪಿಸಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಸಾಮೂಹಿಕ ಹಿತಾಸಕ್ತಿಗಳನ್ನು ಮುನ್ನಡೆಸಲು ಸ್ವಯಂಪ್ರೇರಿತ ರೀತಿಯಲ್ಲಿ ಕೆಲಸ ಮಾಡುವ ಸರ್ವೋತ್ಕೃಷ್ಟ ಸಂಘಟನೆಯ ವ್ಯಕ್ತಿಯಾಗಿದ್ದಾರೆ. ಅವರಿಗೆ ಎಲ್ಲಾ ಕಾಂಗ್ರೆಸ್ಸಿಗರ ಮತ್ತು ಕಾಂಗ್ರೆಸ್ಸಿಗರ ಶುಭ ಹಾರೈಕೆಗಳಿವೆ ಎಂದು ಜೈರಾಮ್ ರಮೇಶ್ ಹಾರೈಸಿದ್ದಾರೆ.