ಶರದ್ ಪವಾರ್ ರಾಜೀನಾಮೆ: ಉತ್ತರಾಧಿಕಾರಿಯಾಗಲು ಅಜಿತ್ ಪವಾರ್, ಸುಪ್ರಿಯಾ ಸುಳೆ ಪೈಪೋಟಿ?
ನವದೆಹಲಿ, ಮೇ. 02: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಸೋದರಳಿಯ ಅಜಿತ್ ಪವಾರ್ ನಡುವೆ ಉತ್ತರಾಧಿಕಾರದ ಸಮರವನ್ನು ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮಹಾರಾಷ್ಟ್ರದ ರಾಜಕೀಯದಲ್ಲಿ ಸುಳಿದಾಡುತ್ತಿದೆ.
83 ವರ್ಷ ವಯಸ್ಸಿನ ಶರದ್ ಪವಾರ್ ಅವರು ತಮ್ಮ ಆತ್ಮಚರಿತ್ರೆ (ಆನ್ ಮೈ ಟರ್ಮ್ಸ್) ಪರಿಷ್ಕೃತ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ರಾಜೀನಾಮೆ ಘೋಷಿಸಿದ್ದಾರೆ. ಅವರ ಘೋಷಣೆಯನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿ ಖಂಡಿಸಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಎನ್ಸಿಪಿ ಕಾರ್ಯಕರ್ತರು ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಬಳಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಅವರ ತಂದೆಯೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅಜಿತ್ ಪವಾರ್ ಮಧ್ಯಪ್ರವೇಶಿಸಿ ಏನನ್ನೂ ಮಾತನಾಡದಂತೆ ಸುಪ್ರಿಯಾ ಸುಳೆಗೆ ಸೂಚಿಸಿದರು. "ನಾನು ಅವಳ ಅಣ್ಣ ಮತ್ತು ಹಿಗಾಗಿಯೇ ನಾನು ಆಕೆಗೆ ಮಾತನಾಡದಂತೆ ಸೂಚಿಸುತ್ತಿದ್ದೇನೆ" ಎಂದು ಅಜಿತ್ ಪವಾರ್ ಹೇಳಿದ್ದಾರೆ.
"ಕೆಲವು ದಿನಗಳ ಹಿಂದೆ ಬದಲಾವಣೆಯ ಅಗತ್ಯದ ಬಗ್ಗೆ ಸ್ವತಃ ಪವಾರ್ ಸಾಹೇಬ್ ಹೇಳಿದ್ದರು. ಅವರ ವಯಸ್ಸು ಮತ್ತು ಆರೋಗ್ಯದ ಹಿನ್ನೆಲೆಯಲ್ಲಿ ನಾವು ಅವರ ನಿರ್ಧಾರವನ್ನು ನೋಡಬೇಕು. ಪ್ರತಿಯೊಬ್ಬರೂ ಸಮಯಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಪವಾರ್ ಸಾಹೇಬ್ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಅದನ್ನು ಹಿಂತೆಗೆದುಕೊಳ್ಳುವುದಿಲ್ಲ" ಎಂದು ಅಜಿತ್ ಪವಾರ್ ಅವರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಪಕ್ಷದ ಮುಖಂಡರ ಬಂಡಾಯದ ಬಗ್ಗೆ ಎನ್ಸಿಪಿಯಲ್ಲಿ ಗೊಣಗಾಟವಿದೆ. ಅಜಿತ್ ಪವಾರ್ ಅವರು ಇದಕ್ಕೂಮೊದಲು ತಮ್ಮ ಬೆಂಬಲಿಗ ಶಾಸಕರೊಂದಿಗೆ ಸಭೆ ನಡೆಸಿದರು ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಎನ್ಸಿಪಿ ಹಕ್ಕು ಚಲಾಯಿಸಲು ಸಿದ್ಧವಾಗಿದೆ. 2024 ರ ಮಹಾರಾಷ್ಟ್ರ ಚುನಾವಣೆಯವರೆಗೆ ಕಾಯಬೇಕಾಗಿಲ್ಲ ಎಂದು ಹೇಳಿದ್ದರು.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಪ್ರಿಯಾ ಸುಳೆ, "ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಅಥವಾ ಕನಸು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ, ಪ್ರತಿಯೊಬ್ಬರಿಗೂ ಅದು ಇರುತ್ತದೆ, ಹಾಗಾಗಿ ಅದರ ಬಗ್ಗೆ ಬಹಿರಂಗವಾಗಿ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ವಾಸ್ತವವಾಗಿ, ಅವರು ತಮ್ಮ ಮಹತ್ವಾಕಾಂಕ್ಷೆಯ ಬಗ್ಗೆ ಮಾತನಾಡುವಲ್ಲಿ ತುಂಬಾ ಪ್ರಾಮಾಣಿಕರಾಗಿದ್ದಾರೆ" ಎಂದು ಹೇಳಿದ್ದರು.
ಏಪ್ರಿಲ್ 19 ರಂದು, ಸುಪ್ರಿಯಾ ಸುಳೆ ಅವರು ಮುಂದಿನ 15 ದಿನಗಳಲ್ಲಿ ಒಂದು ದೆಹಲಿ ಮತ್ತು ಇನ್ನೊಂದು ಮಹಾರಾಷ್ಟ್ರದಲ್ಲಿ ಎರಡು ರಾಜಕೀಯ ಸ್ಫೋಟಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದರು. ಸದ್ಯ ಇವರಿಬ್ಬರ ನಡುವೆ ಮುಖ್ಯಸ್ಥ ಸ್ಥಾನಕ್ಕೆ ಅಥವಾ ಉತ್ತರಾಧಿಕಾರಿಯಾಗುವ ಬಯಕೆಯಿದೆ ಎನ್ನಲಾಗುತ್ತಿದೆ. ಶರದ್ ಪವಾರ್ ಕೂಡ ಯಾರು ಮುಖ್ಯಸ್ಥರಾಗಬೇಕು ಎಂಬ ಬಗ್ಗೆ ಘೋಷಣೆ ಮಾಡಿಲ್ಲ. ಅದನ್ನು ಪಕ್ಷದ ಮುಖಂಡರ ಆಯ್ಕೆ ಬಿಟ್ಟಿದ್ದಾರೆ.












Click it and Unblock the Notifications