ನಿರ್ಮಲಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಏಳು ಮಂದಿ ಹಿರಿಯ ಸೈನಿಕರು
ನವದೆಹಲಿ, ಏಪ್ರಿಲ್ 27: ಸೈನ್ಯವನ್ನು ಮತ್ತು ಸೈನಿಕರನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಏಳು ಮಂದಿ ನಿವೃತ್ತ ಹಿರಿಯ ಸೇನಾಧಿಕಾರಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶನಿವಾರ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಮ್ಮುಖದಲ್ಲಿ ಏಳು ಮಂದಿ ಹಿರಿಯ ಯೋಧರು ಬಿಜೆಪಿಗೆ ಸೇರಿಕೊಂಡರು.
ಸಶಸ್ತ್ರ ಪಡೆಯ ಹಿರಿಯ ಯೋಧರು ಬಿಜೆಪಿ ಸೇರ್ಪಡೆಯಾಗಿರುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. ಸೇನೆಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿದ್ದ ಈ ಹಿರಿಯ ಅಧಿಕಾರಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ತಮ್ಮ ಭಾಗ್ಯ ಎಂದು ಹೇಳಿದ್ದಾರೆ.
ಈ ಸೈನಿಕರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚು ಪ್ರಯೋಜನವಾಗಲಿದೆ. ಅವರು ಸೇನೆಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡವರಷ್ಟೇ ಅಲ್ಲ, ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯನ್ನೂ ಹೊಂದಿದ್ದಾರೆ ಎಂದು ನಿರ್ಮಲಾ ಶ್ಲಾಘಿಸಿದ್ದಾರೆ.
ಬಳಿಕ ಮಾತನಾಡಿದ ಹಿರಿಯ ಯೋಧರು, ಸೇನಾಪಡೆಯ ಅಭಿವೃದ್ಧಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಕೊಡುಗೆಯನ್ನು ಪ್ರಶಂಸಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ಸೇನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಇತ್ತೀಚೆಗೆ 150 ನಿವೃತ್ತ ಯೋಧರ ಸಹಿ ಇರುವ ಪತ್ರವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕಳುಹಿಸಲಾಗಿತ್ತು. ಈ ಪತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದು ಅದರಲ್ಲಿ ಹೆಸರುಳ್ಳ ಅನೇಕ ಯೋಧರು ಸ್ಪಷ್ಟೀಕರಣ ನೀಡಿದ್ದರು. ಈ ಪತ್ರ ನಕಲಿ, ರಾಷ್ಟ್ರಪತಿ ಭವನಕ್ಕೆ ಯಾವುದೇ ಪತ್ರ ರವಾನೆಯಾಗಿಲ್ಲ. ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ ಎಂದು ಬಿಜೆಪಿ ಹೇಳಿತ್ತು.

ಬಿಜೆಪಿ ಸೇರಿದ ಏಳು ಮಂದಿ ಯೋಧರು
ಲೆಫ್ಟಿನೆಂಟ್ ಜನರಲ್ ಜೆಬಿಎಸ್ ಯಾದವ್, ಲೆಫ್ಟಿನೆಂಟ್ ಜನರಲ್ ಆರ್ ಎನ್ ಸಿಂಗ್, ಲೆಫ್ಟಿನೆಂಟ್ ಜನರಲ್ ಎಸ್ಕೆ ಪಟ್ಯಾಲ್, ಲೆಫ್ಟಿನೆಂಟ್ ಜನರಲ್ ಸುನೀತ್ ಕುಮಾರ್, ಲೆಪ್ಟಿನೆಂಟ್ ಜನರಲ್ ನಿತಿನ್ ಕೊಹ್ಲಿ, ಕರ್ನಲ್ ಆರ್ಕೆ ತ್ರಿಪಾಠಿ ಮತ್ತು ವಿಂಗ್ ಕಮಾಂಡರ್ ನವನೀತ್ ಮಗೋನ್ ಬಿಜೆಪಿ ಸೇರಿದ ಸೇನೆಯ ಹಿರಿಯ ಅಧಿಕಾರಿಗಳಾಗಿದ್ದಾರೆ.

ಮಹತ್ವದ ಪಾತ್ರ ವಹಿಸಿದವರು
ಸಶಸ್ತ್ರ ಪಡೆಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದಿದ್ದ ಹಿರಿಯ ಅಧಿಕಾರಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ. ಅವರು ಗೌರವಾನ್ವಿತ ಸ್ಥಾನದಲ್ಲಿದ್ದವರು ಮಾತ್ರವಲ್ಲ, ಅವರು ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಧೈರ್ಯಶಾಲಿಗಳು ಮತ್ತು ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನೂ ಹೊಂದಿದ್ದಾರೆ ಎಂದು ನಿರ್ಮಲಾ ಹೇಳಿದರು.

ನಮಗೆ ಮಾರ್ಗದರ್ಶನ
ಈ ಎಲ್ಲ ಹಿರಿಯ ಯೋಧರ ಪ್ರವೇಶದಿಂದ ಬಿಜೆಪಿಗೆ ಪ್ರಯೋಜನವಾಗಲಿದೆ. ನಮ್ಮನ್ನು ಸೇರಿಕೊಂಡಿದ್ದಕ್ಕೆ ಬಿಜೆಪಿ ಅವರಿಗೆ ಕೃತಜ್ಞವಾಗಿರುತ್ತದೆ. ರಾಷ್ಟ್ರೀಯ ಭದ್ರತೆ ನಿರ್ಮಾಣ ಮತ್ತು ಕಾರ್ಯತಂತ್ರ ವಿಚಾರಗಳಲ್ಲಿ ನೀತಿಗಳನ್ನು ರಚಿಸುವ ವಿಚಾರಗಳಲ್ಲಿ ಅವರು ನಮಗೆ ಮಾರ್ಗದರ್ಶನ ನೀಡಬಹುದು. ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರತಿಯೊಬ್ಬರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ರಾಜಕೀಯ ಸ್ವಾತಂತ್ರ್ಯವಿದೆ
ಪ್ರತಿ ವ್ಯಕ್ತಿಯೂ ರಾಜಕೀಯ ಸ್ವಾತಂತ್ರ್ಯದ ಹಕ್ಕು ಹೊಂದಿರುತ್ತಾರೆ. ನಮ್ಮ ದೇಶವು ಅತ್ಯಂತ ನಿರ್ಣಾಯಕ ಹಂತದಲ್ಲಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮಂತಹ ನಿವೃತ್ತ ಸೈನಿಕರಿಗೆ ದೇಶಕ್ಕಾಗಿ ಕೆಲಸ ಮಾಡಲು ಹಾಗೂ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇದು ಸೂಕ್ತ ಸಮಯ. ಪಕ್ಷದ ಸದಸ್ಯರನ್ನಾಗಿ ಸೇರಿಸಿಕೊಳ್ಳುವ ಮೂಲಕ ನಮಗೆ ಗೌರವ ನೀಡಿದ ಬಿಜೆಪಿ ಮತ್ತು ಅದರ ಅಧ್ಯಕ್ಷ ಅಮಿತ್ ಶಾ ಅವರಿಗೆ ಧನ್ಯವಾದಗಳು ಎಂದು ಲೆಫ್ಟಿನೆಂಡ್ ಜನರಲ್ ಜೆಬಿಎಸ್ ಯಾದವ್ ಹೇಳಿದ್ದಾರೆ.
|
ಮೋದಿಯಿಂದ ಅಮೋಘ ನಿರ್ಧಾರ
ನಮಗೆ ನಮ್ಮ ವೈಯಕ್ತಿಕ ಕುಟುಂಬಕ್ಕಿಂತಲೂ ದೇಶವೇ ಹೆಚ್ಚಿನದ್ದಾಗಿರುತ್ತದೆ. ನಮ್ಮ ಪ್ರಧಾನಿ ಮತ್ತು ಸಚಿವರು ಈ ಅವಧಿಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಉದಾಹರಣೆಗೆ: ಎರಡು ರಕ್ಷಣಾ ಕಾರಿಡಾರ್ಗಳನ್ನು ನಿರ್ಮಿಸಲಾಗಿದೆ. ಶಸ್ತ್ರಾಸ್ತ್ರಗಳು, ಮದ್ದುಗುಂಡು ಮತ್ತು ಉಪಕರಣಗಳ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಡಿಆರ್ಡಿಒಗೆ ಸಾಕಷ್ಟು ಉತ್ತೇಜನ ಕೊಟ್ಟಿದ್ದಾರೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತಾ ಸವಾಲುಗಳ ವಿಚಾರಗಳನ್ನು ಪ್ರಧಾನಿ ಅವರು ನಿಭಾಯಿಸುವ ದೃಷ್ಟಿಕೋನಗಳು ಅಮೋಘವಾಗಿವೆ ಎಂದು ಲೆಫ್ಟಿನೆಂಟ್ ಜನರಲ್ ಎಸ್ಕೆ ಪಟ್ಯಾಲ್ ಶ್ಲಾಘಿಸಿದ್ದಾರೆ.












Click it and Unblock the Notifications