ತನ್ನ ಹೊಸ ಪುಸ್ತಕದ 'ಹಿಂದುತ್ವ' ಕುರಿತ ಅಭಿಪ್ರಾಯವನ್ನು ಸಮರ್ಥಿಸಿಕೊಂಡ ಸಲ್ಮಾನ್ ಖುರ್ಷಿದ್
ನವದೆಹಲಿ, ನವೆಂಬರ್ 12: ತನ್ನ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆಗಿನ ಉಲ್ಲೇಖವು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹಿಂದುತ್ವದ ಬಗ್ಗೆಗಿನ ತನ್ನ ಅಭಿಪ್ರಾಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಹಿಂದುತ್ವವು 'ಸನಾತನ ಧರ್ಮ' ಹಾಗೂ ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ ಹಾಗೂ ಬೊಕೊ ಹರಾಮ್ನಂತಹ (ಉಗ್ರವಾದಿ ಸಂಘಟನೆ) ಆಕ್ರಮಣಕಾರಿ ಸ್ಥಾನವನ್ನು ಪಡೆದುಕೊಂಡಿದೆ," ಎಂದು ಸಲ್ಮಾನ್ ಖುರ್ಷಿದ್ ಅಭಿಪ್ರಾಯ ಪಟ್ಟಿದ್ದಾರೆ.
ಸಲ್ಮಾನ್ ಖುರ್ಷಿದ್ ತಮ್ಮ ಹೊಸ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್ ಮತ್ತು ಬೊಕೊ ಹರಾಮ್ನಂತಹ ಭಯೋತ್ಪಾದಕ ಗುಂಪುಗಳ ಜಿಹಾದಿಸ್ಟ್ ಇಸ್ಲಾಂ ಮತಾಂಧತೆಗೆ ಹೋಲಿಕೆ ಮಾಡಿದ್ದು ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಬಿಜೆಪಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಹಿಂದೂಗಳ ವಿರುದ್ಧ ಜೇಡದಂತಹ ಜಾಲವನ್ನು ಹೆಣೆಯುತ್ತಿದೆ ಎಂದು ಬಿಜೆಪಿಯು ಆರೋಪವನ್ನು ಮಾಡಿದೆ.
ನಮಗೆ ಹಿಂದುತ್ವದ ಪಾಠ ಮಾಡಲು ಬರಬೇಡಿ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ
ಇನ್ನು ತನ್ನ ಪುಸ್ತಕದಲ್ಲಿ ಈ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖುರ್ಷಿದ್, "ನಾನು ಈ ಜನರನ್ನು ಭಯೋತ್ಪಾದಕರು ಎಂದು ಕರೆದಿಲ್ಲ. ನಾನು ಅವರು ಧರ್ಮವನ್ನು ವಿರೂಪ ಮಾಡುವವರಿಗೆ ಸಮನಾದವರು ಎಂದು ಹೇಳಿದ್ದೇನೆ. ಹಿಂದುತ್ವವು 'ಸನಾತನ ಧರ್ಮ' ಹಾಗೂ ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ. ಇದು ಬೊಕೊ ಹರಾಮ್ ಹಾಗೂ ಬೇರೆಯವರಂತೆ ಒಂದು ಆಕ್ರಮಣಕಾರಿ ಹಾಗೂ ದೃಢವಾದ ಸ್ಥಾನವನ್ನು ಪಡೆದುಕೊಂಡಿದೆ," ಎಂದು ಸಮರ್ಥನೆ ಮಾಡಿದ್ದಾರೆ.
"ಹಿಂದುತ್ವವಾದಿಗಳಿಗೆ ಸಮಾನವಾದವರು ಬೇರೆ ಯಾರೂ ನನಗೆ ಸಿಗಲಿಲ್ಲ. ನನಗೆ ಅವರು ಬೊಕೊ ಹರಾಮ್ನಂತಹ ಆಕ್ರಮಣಕಾರಿ ನಿಲುವು ಹೊಂದಿರುವವರು ಅನಿಸಿತು. ಆದ್ದರಿಂದ ನಾನು ಹಿಂದುತ್ವವಾದಿಗಳು ಬೊಕೊ ಹರಾಮ್ಗೆ ಸಮಾನ ಎಂದು ನಾನು ಹೇಳಿದೆ. ಅಷ್ಟೇ, ಇದಕ್ಕೂ ಹಾಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತಿರುವಂತೆ ಅದು ಹಿಂದೂ ಧರ್ಮವನ್ನು ವಿರೂಪ ಮಾಡುತ್ತಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರಿಂದಲೇ ವಿರೋಧ
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ನ ಹಿಂದುತ್ವದ ಬಗ್ಗೆಗಿನ ಅಭಿಪ್ರಾಯಕ್ಕೆ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, "ಈ ಹೇಳಿಕೆಯು ತಪ್ಪು ಹಾಗೂ ಅತಿಶಯೊಕ್ತಿ," ಎಂದು ಹೇಳಿದ್ದು, ಸಲ್ಮಾನ್ ಖುರ್ಷಿದ್ನ ಈ ವಾದವನ್ನು ತಳ್ಳಿ ಹಾಕಿದ್ದಾರೆ. ತನ್ನ ಪಕ್ಷದ ನಾಯಕರಾದ ಗುಲಾಮ್ ನಬಿ ಆಜಾದ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖುರ್ಷಿದ್, "ಆಜಾದ್ ಅವರು ತಾವು ಹಿಂದುತ್ವದ ಸಿದ್ದಾಂತವನ್ನು ಒಪ್ಪಲ್ಲ ಎಂದು ಹೇಳಿದ್ದಾರೆ. ನಾನು ಯಾಕೆ ಒಪ್ಪಲ್ಲ ಎಂಬುವುದನು ಸರಿಯಾಗಿ ವಿವರಿಸಿ ಹೇಳಿದ್ದೇನೆ, ಅಷ್ಟೇ," ಎಂದಿದ್ದಾರೆ.
"ಇನ್ನು ಗುಲಾಮ್ ನಬಿ ಆಜಾದ್ ಅತಿಶಯೊಕ್ತಿ ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಈಗ ಅತಿಶಯೊಕ್ತಿ, ಮಾಪನ, ಮೌಲ್ಯಮಾಪನ, ಗ್ರಹಿಕೆ ಎಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಹೊಂದುತ್ತದೆ. ಇದು ಅವರಿಗೆ ಅತಿಶಯೊಕ್ತಿ ಎಂದು ಅನಿಸಬಹುದು. ಆದರೆ ನನಗೆ ಇದು ಅತಿಶಯೊಕ್ತಿ ಎಂದು ಅನಿಸುವುದಿಲ್ಲ," ಎಂದು ಕೂಡಾ ಸಲ್ಮಾನ್ ಖುರ್ಷಿದ್ ಹೇಳಿದರು. ಈ ಸಂದರ್ಭದಲ್ಲೇ ಮಾಧ್ಯಮವು ಹಿಂದುತ್ವವು ಹಿಂದೂ ಧರ್ಮವನ್ನು ಎಷ್ಟು ಪ್ರಮಾಣದಲ್ಲಿ ವಿರೂಪಗೊಳಿಸುತ್ತಿದೆ ಎಂದು ಪ್ರಶ್ನಿಸಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖುರ್ಷಿದ್, "ಇಲ್ಲಿ ಎಷ್ಟು ಪ್ರಮಾಣ, ಕಡಿಮೆಯೇ ಹೆಚ್ಚೇ ಎಂಬುವುದು ಬರುವುದಿಲ್ಲ, ವಿರೂಪ ಎಂದರೆ ವಿರೂಪವಷ್ಟೇ," ಎಂದು ಪ್ರತಿಕ್ರಿಯಿಸಿದ್ದಾರೆ.
"ನಾನು ಈ ವಿಚಾರದಲ್ಲಿ ಗುಲಾಮ್ ನಬಿ ಆಜಾದ್ ಜೊತೆ ಚರ್ಚೆಗೆ ಇಳಿಯಲು ಇಷ್ಟಪಡಲ್ಲ. ಯಾಕೆಂದರೆ ಅವರು ಅದನ್ನು ಸುಮ್ಮನೇ ಮಾತನಾಡುತ್ತಾ ಹೇಳಿರಬಹುದು. ಅವರು ಆ ರೀತಿಯಾಗಿ ಹೇಳಿದ್ದರೆ, ನಾವು ಅವರ ವಿಚಾರಕ್ಕೆ ಗೌರವ ಸಲ್ಲಿಸಬೇಕು. ಅವರು ಹಿರಿಯ ನಾಯಕರು, ಇದು ನನ್ನ ನಿಲುವನ್ನು ಬದಲಾವಣೆ ಮಾಡಲು ಕಾರಣವಾಗದು," ಎಂದು ಮತ್ತೆ ತಮ್ಮ ಈ ಹಿಂದುತ್ವದ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಇಷ್ಟಕ್ಕೆ ಬಿಡದ ಗುಲಾಮ್ ನಬಿ ಆಜಾದ್, "ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪದೆ ಇರಬಹುದು. ಆದರೆ ಹಿಂದುತ್ವವನ್ನು ಐಸಿಸ್ ಹಾಗೂ ಜಿಹಾದಿಗಳ ಜೊತೆ ತುಲನೆ ಮಾಡುವುದು ಅತಿಶಯೊಕ್ತಿ," ಎಂದು ಟ್ವೀಟ್ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)