ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ: ಶಿವಸೇನೆ ಕಿಡಿ
ಬಿಜೆಪಿಯ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಆಯ್ಕೆ ವಿರುದ್ಧ ಶಿವಸೇನೆ ಅಸಮಾಧಾನ. ಈ ಬಗ್ಗೆ ಉದ್ಧವ್ ಠಾಕ್ರೆ ಗುಡುಗು. ಅಭ್ಯರ್ಥಿಯನ್ನು ಮೊದಲೇ ನಿರ್ಧರಿಸಿ ಆನಂತರ ಶಿವಸೇನೆಯನ್ನು ಮಾತುಕತೆಗೆ ಕರೆದರೆಂಬ ಆರೋಪ.
ಮುಂಬೈ, ಜೂನ್ 19: ಶೀಘ್ರದಲ್ಲೇ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಕಡೆಯಿಂದ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಅಭ್ಯರ್ಥಿಯನ್ನಾಗಿಸಿ ಘೋಷಣೆ ಮಾಡಿದ್ದರ ವಿರುದ್ಧ ಶಿವಸೇನೆ ಕಿಡಿ ಕಾರಿದೆ.
ಮುಂಬೈನಲ್ಲಿ ಸೋಮವಾರ (ಜೂನ್ 19) ಶಿವಸೇನೆಯ 51ನೇ ವರ್ಷಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿವಸೇನೆಯನ್ನು ಒಂದು ಮಾತೂ ಕೇಳದೇ ಬಿಜೆಪಿಯು ತನ್ನ ಪಾಡಿಗೆ ತಾನು ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗಾಗಿ, ಎನ್ ಡಿ ಎ ವತಿಯಿಂದ ಇದೀಗ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೋವಿಂದ್ ಅವರಿಗೆ ಶಿವಸೇನೆ ಬೆಂಬಲಿಸಬೇಕೇ, ಬೇಡವೇ ಎಂಬುದರ ಬಗ್ಗೆ ಸಧ್ಯದಲ್ಲೇ ನಿರ್ಧರಿಸುವುದಾಗಿ ಅವರು ತಿಳಿಸಿದರು.
ಇತ್ತೀಚೆಗೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಉದ್ಧವ್ ಠಾಕ್ರೆಯವರನ್ನು ಮಾತುಕತೆಗೆ ಆಹ್ವಾನಿಸಿದ್ದರು. ರಾಷ್ಟ್ರಪತಿ ಅಭ್ಯರ್ಥಿ ಕುರಿತಂತೆ ನಿರ್ಧಾರ ಕೈಗೊಳ್ಳುವ ಸಲುವಾಗಿ ನಡೆದ ಮಾತುಕತೆ ಅದಾಗಿತ್ತು. ಈ ಬಗ್ಗೆಯೂ ಉದ್ಧವ್ ಠಾಕ್ರೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಅಮಿತ್ ಶಾ ಕರೆದಿದ್ದ ಮಾತುಕತೆ ವೇಳೆ, ''ಶಾ ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕೋವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಬಿಜೆಪಿ ವಲಯದಲ್ಲಿ ಅದಾಗಲೇ ಅಭ್ಯರ್ಥಿಯನ್ನು ಪಕ್ಕಾ ಮಾಡಿಕೊಂಡು ಆನಂತರ ಎನ್ ಡಿಎ ಅಂಗಪಕ್ಷಗಳಿಗೆ ತಿಳಿಸಲಾಗುತ್ತಿದೆ ಎಂದು ಆಗ ನನಗೆ ಮನವರಿಕೆಯಾಯಿತು. ಇದು ನನಗೆ ಬೇಸರ ತಂದಿದೆ'' ಎಂದು ಅವರು ನುಡಿದರು.
ಭಾರತದ ಹಸಿರು ಕ್ರಾಂತಿ ಹರಿಕಾರ ಸ್ವಾಮಿನಾಥನ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಬೇಕೆಂಬುದು ಶಿವಸೇನೆಯ ಆಕಾಂಕ್ಷೆಯಾಗಿತ್ತು. ಆದರೆ, ಬಿಜೆಪಿಯು ಈ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ ಎಂಬುದು ಉದ್ಧವ್ ಠಾಕ್ರೆಯವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.












Click it and Unblock the Notifications