ಆರೋಪಿಗಳಾಗಿ ನೋಡಿ, ಕೊಲೆಗಾರರಾಗಿ ಅಲ್ಲ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ
ಚೆನ್ನೈ, ನವೆಂಬರ್ 13: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಆರು ಅಪರಾಧಿಗಳಲ್ಲಿ ಒಬ್ಬರಾದ ಆರ್ಪಿ ರವಿಚಂದ್ರನ್, ಉತ್ತರ ಭಾರತದ ಜನರು ತಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರ ಬದಲಿಗೆ ಆರೋಪಿಗಳೆಂದು ನೋಡಬೇಕು ಎಂದು ಹೇಳಿದ್ದಾರೆ.
ಮಧುರೈ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ನಂತರ ಮಾತನಾಡಿದ ರವಿಚಂದ್ರನ್, ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರ ಬದಲಿಗೆ ಬಲಿಪಶುಗಳಾಗಿ ನೋಡಬೇಕು. ಸಮಯ ಮತ್ತು ಶಕ್ತಿಯು ಯಾರು ಭಯೋತ್ಪಾದಕ ಅಥವಾ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ನಿರ್ಧರಿಸುತ್ತದೆ. ನಾವು ಭಯೋತ್ಪಾದಕರು ಎಂಬ ಆರೋಪವನ್ನು ಹೊತ್ತಿದ್ದರೂ ಸಹ ಸಮಯವು ನಮ್ಮನ್ನು ನಿರಪರಾಧಿ ಎಂದು ನಿರ್ಣಯಿಸುತ್ತದೆ ಎಂದು ಹೇಳಿದರು.
ರಾಜೀವ್ ಹತ್ಯೆ ಅಪರಾಧಿಗಳ ಬಿಡುಗಡೆ: ಕಳೆದ 31 ವರ್ಷಗಳಲ್ಲಿ ನಡೆದಿದ್ದೇನು?
ನಳಿನಿ ಮತ್ತು ರವಿಚಂದ್ರನ್ ಅವರು ಜೈಲಿನ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾಗಿದ್ದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಮೇ 18 ರಂದು ಸುಪ್ರೀಂಕೋರ್ಟ್ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿ ಬಿಡುಗಡೆಯಾದ ನಂತರ ಇತರ ಅಪರಾಧಿಗಳ ಬಿಡುಗಡೆಯಾಗಿದೆ.
ಕುಟುಂಬದೊಂದಿಗೆ ಇರಲು ಬಯಸುತ್ತೇನೆ
ಇದಕ್ಕೂ ಮೊದಲು ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು 32 ವರ್ಷಗಳ ಶಿಕ್ಷೆಯ ಸಮಯದಲ್ಲಿ ತಮಗೆ ಸಹಾಯ ಮಾಡಿದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ನಾನು ತನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಆರ್ಪಿ ರವಿಚಂದ್ರನ್ ಸೇರಿದಂತೆ ಎಲ್ಲಾ ಆರು ಅಪರಾಧಿಗಳನ್ನು ಬಿಡುಗಡೆಗೊಳಿಸಿ ಶುಕ್ರವಾರ ಸುಪ್ರೀಂ ಕೋರ್ಟ್ನ ಆದೇಶದ ನಂತರ ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಹಿಳಾ ಕೈದಿ ನಳಿನಿ ಅವರನ್ನು ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ನಳಿನಿ ತಾನು ಭಾರತದಲ್ಲಿ ವಾಸಿಸಲಿ ಅಥವಾ ವಿದೇಶಕ್ಕೆ ಹೋಗುವ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾ, ತನ್ನ ಕುಟುಂಬದ ಸದಸ್ಯರೆಲ್ಲರೂ ತನಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ ಮತ್ತು ಈಗ ಅವರೊಂದಿಗೆ ಇರಲು ಬಯಸುತ್ತೇನೆ. ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಈ ಅವಧಿಯಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಗಾಂಧಿ ಕುಟುಂಬವನ್ನು ಭೇಟಿ ಮಾಡುವ ಯೋಜಿಸುತ್ತಿಲ್ಲ
ಬಿಡುಗಡೆಯಾದ ನಂತರ ಗಾಂಧಿ ಕುಟುಂಬದ ಯಾರನ್ನಾದರೂ ಭೇಟಿಯಾಗುವ ಬಗ್ಗೆ ಮಾತನಾಡಿದ ನಳಿನಿ ನಾನು ಗಾಂಧಿ ಕುಟುಂಬವನ್ನು ಭೇಟಿ ಮಾಡುವ ಯೋಜಿಸುತ್ತಿಲ್ಲ. ನನ್ನ ಪತಿ ಎಲ್ಲಿಗೆ ಹೋದರೂ ಅಲ್ಲಿಗೆ ನಾನು. ನಾವು 32 ವರ್ಷಗಳಿಂದ ಬೇರ್ಪಟ್ಟಿದ್ದೇವೆ. ನಮ್ಮ ಕುಟುಂಬ ನಮಗಾಗಿ ಕಾಯುತ್ತಲೇ ಇತ್ತು. ನಾನು ಗಾಂಧಿ ಕುಟುಂಬದ ಯಾರನ್ನೂ ಭೇಟಿ ಮಾಡಲು ಯೋಜಿಸುತ್ತಿಲ್ಲ. ನನಗೆ ಪೆರೋಲ್ ನೀಡಿದ್ದಕ್ಕಾಗಿ ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದರು.
ಜೈಲಿನಲ್ಲಿರುವ ಅಪರಾಧಿಗಳ ಉತ್ತಮ ನಡತೆಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠವು ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧೀಶರು ತಮ್ಮ ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ. ಅವರಿಗೆ ತಪ್ಪು ಏನು ಮತ್ತು ಸರಿ ಏನು ಎಂದು ಅವರಿಗೆ ತಿಳಿದಿದೆ ಎಂದು ಹೇಳಿದರು.
ನಮ್ಮ ನ್ಯಾಯಾಧೀಶರಿಗೆ ಎಲ್ಲವೂ ತಿಳಿದಿದೆ. ಅವರು ನಮ್ಮ ಪ್ರಕರಣವನ್ನು ಅಧ್ಯಯನ ಮಾಡಿದ್ದಾರೆ. ಅವರಿಗೆ ಯಾವುದು ತಪ್ಪು ಮತ್ತು ಯಾವುದು ಸರಿ ಮತ್ತು ಅವರು ಏನು ಮಾಡಬಹುದು ಎಂದು ತಿಳಿದಿದ್ದಾರೆ. ಹಾಗಾಗಿ ಅವರು ಅದನ್ನೇ ಮಾಡಿದ್ದಾರೆ. ತಮಿಳುನಾಡು ಸರ್ಕಾರವು ಈ ಹಿಂದೆ ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಶಿಫಾರಸು ಮಾಡಿದ್ದು, ಅವರ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳಲು 2018ರ ನೆರವು ಮತ್ತು ಸಲಹೆಯು ರಾಜ್ಯಪಾಲರಿಗೆ ಬದ್ಧವಾಗಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿಗೆ ಸ್ವಾಗತ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ ಸ್ವಾಗತಿಸಿದ್ದು, ಆರು ಮಂದಿಯ ಬಿಡುಗಡೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಸ್ಟಾಲಿನ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ನಳಿನಿ ಶ್ರೀಹರನ್ಗೆ ಜೀವಾವಧಿ ಶಿಕ್ಷೆ
ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳನ್ನು ರಾಜ್ಯಪಾಲರು ನೇಮಿಸಿದ ಸ್ಥಾನಗಳಲ್ಲಿ ಕೈಬಿಡಬಾರದು ಎಂಬುದಕ್ಕೆ ಸುಪ್ರೀಂ ಕೋರ್ಟ್ನ ಈ ತೀರ್ಪು ಸಾಕ್ಷಿಯಾಗಿದೆ ಎಂದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರ ಐವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಉತ್ತಮ ನಡತೆ ಹೊಂದಿರುವ ಕಾರಣಕ್ಕಾಗಿ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.
ಏಳು ಅಪರಾಧಿಗಳಿಗೆ ಮರಣದಂಡನೆ
ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಸಾರ್ವಜನಿಕ ಯಾತ್ರೆಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ದಾಳಿಯಿಂದ ಹತ್ಯೆಗೀಡಾದರು. ಹತ್ಯೆಯಲ್ಲಿ ಭಾಗಿಯಾಗಿದ್ದ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಯಿತು. ಅವರಲ್ಲಿ ನಳಿನಿ ಶ್ರೀಹರನ್, ಆರ್ಪಿ ರವಿಚಂದ್ರನ್, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಯಸ್ ಮತ್ತು ಎಜಿ ಪೆರಾರಿವಾಲನ್ ಸೇರಿದ್ದರು.
ಏಳು ಅಪರಾಧಿಗಳ ಬಿಡುಗಡೆಗೆ ಶಿಫಾರಸ್ಸು
2000 ರಲ್ಲಿ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು. ನಂತರ 2014ರಲ್ಲಿ, ಇತರ ಆರು ಅಪರಾಧಿಗಳ ಶಿಕ್ಷೆಯನ್ನು ಸಹ ಕಡಿಮೆಗೊಳಿಸಲಾಯಿತು. ಅದೇ ವರ್ಷದಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದರು.